Shakti Scheme: ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ- ಬಸ್ ನಿಲ್ದಾಣಗಳಲ್ಲಿ ನೂಕುನುಗ್ಗಲು
ಬೆಂಗಳೂರು, ಜೂನ್ 12: ಕಾಂಗ್ರೆಸ್ ನೇತೃತ್ವದ ಸರ್ಕಾರವು ಭಾನುವಾರ ಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಕರ್ನಾಟಕದ ಹಲವೆಡೆ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. ಈ ಮಹಿಳೆಯರಲ್ಲಿ ಕಾಲೇಜು ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು ಮತ್ತು ಸ್ಥಳೀಯ ವ್ಯಾಪಾರಿಗಳು ಸೇರಿದ್ದಾರೆ.
ಉಚಿತ ಬಸ್ ಪ್ರಯಾಣದ ಪ್ರಯೋಜನವನ್ನು ಪಡೆಯಲು ಬಯಸಿದ ಮಹಿಳೆಯರು ಬಸ್ ಕಂಡಕ್ಟರ್ಗಳೊಂದಿಗೆ ವಾಗ್ವಾದ ನಡೆಸಿರುವು ಕಂಡುಬಂದಿದೆ. ಹಾಸನದಲ್ಲಿ ದಿನನಿತ್ಯದ ಬಸ್ಗಳು ಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದರಿಂದ ನೂರಾರು ಕಾಲೇಜು ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಬೇರೆ ಬಸ್ಗಳಿಗೆ ಕಾಯುತ್ತಿದ್ದ ದೃಶ್ಯ ಕಂಡುಬಂತು.

ಹಾಸನ ಬಸ್ ನಿಲ್ದಾಣದಲ್ಲಿ ಎರಡು ವರ್ಷದ ಮಗಳನ್ನು ಹೊತ್ತಿದ್ದ ವ್ಯಕ್ತಿಯೊಬ್ಬ ಬಸ್ ಕಂಡಕ್ಟರ್ ಜೊತೆ ಜಗಳವಾಡಿದ್ದು ಕಂಡುಬಂದಿದೆ. ಈ ಸಂದರ್ಭದಲ್ಲಿ 5 ವರ್ಷ ಮೇಲ್ಪಟ್ಟವರಿಗೆ ಉಚಿತ ಟಿಕೆಟ್ ನೀಡಲಾಗುವುದು ಎಂದು ಬಸ್ ಕಂಡಕ್ಟರ್ ವಾದಿಸಿದರು.
ಬಾಗಲಕೋಟೆಯಲ್ಲಿ ಮಹಿಳಾ ಪ್ರಯಾಣಿಕರು ಲಗೇಜ್ನೊಂದಿಗೆ ಸೀಟ್ಗಳನ್ನು ಹಿಡಿಯುವಾಗ ಕಂಡಕ್ಟರ್ ಜೊತೆ ವಾಗ್ವಾದ ನಡೆಸಿದರು. ಸೀಟಿನಲ್ಲಿ ಇಟ್ಟಿದ್ದ ಲಗೇಜ್ಗೆ ಹಣ ನೀಡುವಂತೆ ಕಂಡಕ್ಟರ್ ಕೇಳಿದಾಗ, ಮಹಿಳೆಯೊಬ್ಬರು ಹಿಂದೆ ಪ್ರಯಾಣಿಸಿದಾಗ ಲಗೇಜ್ಗೆ ಹಣ ನೀಡಲಿಲ್ಲ ಎಂದು ವಾದಿಸಿದರು.
ರಾಮನಗರದಲ್ಲಿ ಬೆಂಗಳೂರಿಗೆ ತೆರಳುವ ಬಸ್ಗಳು ತುಂಬಿ ತುಳುಕುತ್ತಿದ್ದವು. ಕಾಲೇಜು ವಿದ್ಯಾರ್ಥಿಗಳು ಹಾಗೂ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯರು ಪರದಾಡುವಂತಾಯಿತು.
ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ಕೆಎಸ್ಆರ್ಟಿಸಿ ಬಸ್ಗಳಿಗೆ ತೆರಳುವ ಮೂಲಕ ಪ್ರಯಾಣಿಕರ ಸಂಖ್ಯೆಯಲ್ಲಿ ಹಠಾತ್ ಹೆಚ್ಚಳವಾಗಿದೆ ಎಂದು ಟಿವಿ9 ಕನ್ನಡ ವರದಿ ಮಾಡಿದೆ.
ಈ ಕುರಿತು ಮಾತನಾಡಿರುವ ಕೆಲ ಮಹಿಳಾ ಪ್ರಯಾಣಿಕರು, 'ಸರ್ಕಾರವು ಉಚಿತ ಬಸ್ ಸೇವೆಗಳನ್ನು ಒದಗಿಸುವುದು ಸಾಕಾಗುವುದಿಲ್ಲ. ಬಸ್ ನಿಲ್ದಾಣಗಳಲ್ಲಿ ನೂಕುನುಗ್ಗಲು ತಪ್ಪಿಸಲು ಸಾಕಷ್ಟು ಸಂಖ್ಯೆಯ ಬಸ್ಗಳನ್ನು ಒದಗಿಸುಬೇಕು' ಎಂದು ಒತ್ತಾಯಿಸಿದರು.












Click it and Unblock the Notifications