ಮೈಸೂರಿನ ರಿಜ್ವಾನ್ ಅರ್ಷದ್- ಯುವ ಕಾಂಗ್ರೆಸ್ ಅಧ್ಯಕ್ಷ

ಮುಂದಿನ ಲೋಕಸಭಾ ಚುನಾವಣೆಗಾಗಿ ಯುವಜನತೆಯನ್ನು ಹೆಚ್ಚಾಗಿ ನೆಚ್ಚಿಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮೊನ್ನೆಯಷ್ಟೇ ರಾಜಧಾನಿ ಬೆಂಗಳೂರಿನಲ್ಲಿ ಯುವಜನತೆಯೊಂದಿಗೆ ಸಂವಾದ ನಡೆಸಿ, ಯುವ ನಿರೀಕ್ಷೆಗಳಿಗೆ ಆಸರೆಯಾಗಿರುವುದು ಗಮನಾರ್ಹ.
ರಾಜ್ಯದಿಂದ 10 ಮಂದಿ ಯುವಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಲಭಿಸುವ ಸಾಧ್ಯತೆಯಿದೆ. KPYCC ನಿಯಮಗಳ ಪ್ರಕಾರ 35 ವರ್ಷದೊಳಿಗಿನವರು ಯುವಜನತೆ ಎನಿಸಿಕೊಳ್ಳುತ್ತಾರೆ. ಆದರೂ ಕಾಂಗ್ರೆಸ್ಸಿನಲ್ಲಿ 45 ವರ್ಷ ತುಂಬಿದವರೂ ಯುವಕರೇ ಆಗಿರುತ್ತಾರೆ. ಹಾಗೆ ನೋಡಿದರೆ ರಾಹುಲ್ ಸಹ ಯುವನಾಯಕರೇ!
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರು, ಲೋಕಸಭೆ, ವಿಧಾನಸಭೆ ಕ್ಷೇತ್ರಗಳ ಪದಾಧಿಕಾರಿಗಳ ಆಯ್ಕೆಗೆ ಕಳೆದ 9, 10ರಂದು ಚುನಾವಣೆ ನಡೆಸಲಾಗಿತ್ತು. ಮತ ಎಣಿಕೆ ಪೂರ್ಣಗೊಂಡಿದ್ದು, ಎರಡನೇ ಅವಧಿಗೆ ಅಧ್ಯಕ್ಷರಾಗಿ ರಿಜ್ವಾನ್ ಆಯ್ಕೆಯಾಗಿದ್ದಾರೆ. ಯುವ ಕಾಂಗ್ರೆಸ್ ಅಧ್ಯಕ್ಷ, ಪದಾಧಿಕಾರಿಗಳಾಗಿ ಆಯ್ಕೆಗೊಂಡವರು 3 ವರ್ಷ ಕಾರ್ಯ ನಿರ್ವಹಿಸಲಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ತಾವು ರಾಹುಲ್ ಗಾಂಧಿ ಕಣಕ್ಕಿಳಿಸಿದ ಅಭ್ಯರ್ಥಿಯೆಂದು ಬಿಂಬಿಸಿಕೊಂಡಿದ್ದ ರಿಜ್ವಾನ್, ಈ ಅಂಶವನ್ನೇ ಗೆಲುವಿನ ಮೆಟ್ಟಿಲಾಗಿ ಪರಿವರ್ತಿಸಿಕೊಂಡಿದ್ದರು. ಸಾಕಷ್ಟು ಹಣ ಹರಿದಾಡಿದ ಆಕ್ಷೇಪವೂ ಕೇಳಿಬಂದಿತ್ತು. ಅಧ್ಯಕ್ಷರಾದ ಅವಧಿಯಲ್ಲಿ ಯಾವುದೇ ಪರಿಣಾಮಕಾರಿ ಹೋರಾಟ ಸಂಘಟಿಸದ ರಿಜ್ವಾನ್, ಪಕ್ಷದ ಹಿರಿಯ ನಾಯಕರ ಕೋಪಕ್ಕೂ ಗುರಿಯಾಗಿದ್ದರು.
ರಿಜ್ವಾನ್ ಗೆ ಪೈಪೋಟಿ ನೀಡಿದ್ದ ಮಾಜಿ ಶಾಸಕ ಪ್ರಸನ್ನ ಕುಮಾರ್ ಪುತ್ರ ವರುಣ್ ಕುಮಾರ್ ಪ್ರದೇಶ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನ ಪಡೆಯಲಿದ್ದಾರೆ. ಚುನಾವಣೆ ಕಣದಲ್ಲಿ 50 ಅಭ್ಯರ್ಥಿಗಳು ಇದ್ದರು. ರಾಜ್ಯ ಸಮಿತಿ ಚುನಾವಣೆಗೂ ಮುನ್ನ ಬೂತ್ ಮಟ್ಟದ ಪದಾಧಿಕಾರಿಗಳ ಆಯ್ಕೆ ಮಾಡಲಾಗಿತ್ತು.












Click it and Unblock the Notifications