ಅಕ್ರಮ ಸಾಬೀತಾದರೆ ರಾಜಕೀಯ ನಿವೃತ್ತಿ: ರೇಣುಕಾಚಾರ್ಯ
ದಾವಣಗೆರೆ, ಮೇ.6: 'ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲ ಸುಳ್ಳು. ನಾನು ಅಕ್ರಮ ಆಸ್ತಿ ಗಳಿಸಿದ್ದು ಸಾಬೀತಾದರೆ ಸಕ್ರಿಯ ರಾಜಕೀಯದಿಂದಲೇ ನಿವೃತ್ತನಾಗುತ್ತೇನೆ 'ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮತ್ತದೇ ಹಳೆ ಡೈಲಾಗ್ ಹೊಡೆದಿದ್ದಾರೆ.
ನಾನು ತಪ್ಪು ಮಾಡಿರುವುದಾಗಿ ನ್ಯಾಯಾಲಯ ತೀರ್ಪು ನೀಡಿದರೆ, ಯಾವುದೇ ಶಿಕ್ಷೆಗೂ ಸಿದ್ಧನಿದ್ದೇನೆ. ಲೋಕಾಯುಕ್ತ ತನಿಖೆಗೆ ಸಂಪೂರ್ಣ ನೆರವಾಗುತ್ತೇನೆ ಎಂದಿದ್ದಾರೆ.
ದಾವಣಗೆರೆ ಜಿಲ್ಲಾ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ಎಫ್ಐಆರ್ ಪ್ರತಿಯನ್ನು ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಲೋಕಾಯುಕ್ತ ಪ್ರಭಾರಿ ಎಸ್ಪಿ ಶ್ರೀಧರ್ ತಿಳಿಸಿದ್ದಾರೆ. [ರೇಣುಕಾಚಾರ್ಯ ವಿರುದ್ಧ ಅಕ್ರಮ ಆಸ್ತಿಗಳಿಕೆ ದೂರು]
ಶಾಸಕನಾಗಿ, ಸಚಿವನಾಗಿ ನಾನು ಪ್ರಾಮಾಣಿಕವಾಗಿ ಜನ ಸೇವೆ ಮಾಡಿದ್ದೇನೆ. ನನ್ನ ಮೇಲೆ ಯಾವುದೇ ಕೇಸ್ ಆಗಿಲ್ಲ. ನನ್ನ ವಿರುದ್ಧ ದೂರು ನೀಡಿರುವ ಹಿನ್ನೆಲೆಯಲ್ಲಿ ತನಿಖೆಗೆ ಆದೇಶವಾಗಿದೆ. ಎಲ್ಲಾ ದಾಖಲೆಗಳನ್ನು ಸಕಾಲದಲ್ಲಿ ಒದಗಿಸುತ್ತೇನೆ.

ಈ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಈ ಬಗ್ಗೆ ಯಾವ ಹೇಳಿಕೆಯನ್ನೂ ನೀಡುವುದಿಲ್ಲ. ದೂರು ನೀಡಿದವರ ಮೇಲೆ ಬೆದರಿಕೆ ಹಾಕುವಷ್ಟು ಗೂಂಡಾ ಸಂಸ್ಕೃತಿ ನನ್ನದಲ್ಲ ಕ್ಷೇತ್ರದ ಜನರ ಮಧ್ಯೆಯೇ ಇದ್ದೇನೆ, ಎಲ್ಲೂ ಓಡಿ ಹೋಗಿಲ್ಲ ಎಂದು ರೇಣುಕಾ ಹೇಳಿದರು.
ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮತ್ತು ಅವರ ಮೂವರು ಸಹೋದರರ ವಿರುದ್ಧ ಕಳೆದ ಏ.28ರಂದು ಜಿಲ್ಲಾ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹೊನ್ನಾಳಿಯ ಆರ್ ಟಿಐ ಕಾರ್ಯಕರ್ತ ಮತ್ತು ಭ್ರಷ್ಟಾಚಾರ ವಿರೋಧಿ ವೇದಿಕೆಯ ಅಧ್ಯಕ್ಷ ಗುರುಪಾದಯ್ಯ ಮಠದ್ ಖಾಸಗಿ ದೂರು ದಾಖಲಿಸಿದ್ದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ.2ರಂದು ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಹೆಚ್ಚಿನ ತನಿಖೆಗಾಗಿ ಜಿಲ್ಲಾ ಲೋಕಾಯುಕ್ತ ಇಲಾಖೆಗೆ ಆದೇಶಿಸಿತ್ತು. ಅದರಂತೆ ಈಗ ತನಿಖೆ ಜಾರಿಯಲ್ಲಿದೆ.












Click it and Unblock the Notifications