ಮದುವೆ ಬಳಿಕ ದೈಹಿಕ ಸಂಪರ್ಕ ನಿರಾಕರಣೆ ಕ್ರೌರ್ಯವಲ್ಲ
ಬೆಂಗಳೂರು, ಜೂನ್ 21: ಮದುವೆಯ ಬಳಿಕ ದೈಹಿಕ ಸಂಪರ್ಕಕ್ಕೆ ನಿರಾಕರಿಸುವುದು ಭಾರತೀಯ ದಂಡ ಸಂಹಿತೆ ಸೆಕ್ಷನ್ (ಐಪಿಸಿ) 498-ಎ ಅಡಿ ಕ್ರೌರ್ಯ ಮತ್ತು ಅಪರಾಧವಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಆದರೆ ಹಿಂದೂ ವಿವಾಹ ಕಾಯ್ದೆ ಅಡಿ ದೈಹಿಕ ಸಂಪರ್ಕ ನಿರಾಕರಿಸಿದರೆ ಅದು ದೌರ್ಜನ್ಯವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಮದುವೆ ನಂತರ ದೈಹಿಕ ಸಂಪರ್ಕ ನಿರಾಕರಿಸಿದ ಹಿನ್ನೆಲೆಯಲ್ಲಿ ಪತ್ನಿಯು ಐಪಿಸಿ ಸೆಕ್ಷನ್ 498-ಎ ಅಡಿಯಲ್ಲಿ ಕ್ರೌರ್ಯ ಆರೋಪದ ಮೇಲೆ ದಾಖಲಿಸಿದ ಕ್ರಿಮಿನಲ್ ಪ್ರಕರಣ ರದ್ದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ನ್ಯಾಯಪೀಠ, ಪತ್ನಿ ವಿವಾಹದ ನಂತರ 28 ದಿನ ಪತಿಯ ಮನೆಯಲ್ಲಿ ನೆಲೆಸಿದ್ದಾರೆ. ಪತ್ನಿಯ ಏಕೈಕ ಆರೋಪವೆಂದರೆ, ಪತಿ ಆಧ್ಯಾತ್ಮಕ ಚಿಂತಕೊಬ್ಬರ ಅನುಯಾಯಿಯಾಗಿದ್ಧಾರೆ. ಸದಾ ಅವರ ಪ್ರವಚನಗಳ ವಿಡಿಯೋ ನೋಡುತ್ತಿದ್ದು, ಆಧ್ಯಾತ್ಮಿಕತೆಯ ಕಡೆಗೆ ಪ್ರೇರಿತರಾಗಿದ್ದರು. ಯಾವತ್ತೂ ಸಹ ದೈಹಿಕ ಸಂಪರ್ಕ ಬೆಳೆಸುವ ಆಸಕ್ತಿ ತೋರಲೇ ಇಲ್ಲ. ಇದು ಹಿಂದೂ ವಿವಾಹ ಕಾಯ್ದೆಯಡಿ ನಿಸ್ಸಂದೇಹವಾಗಿ ಕ್ರೌರ್ಯ ಎನಿಸಲಿದೆ.
ಆದರೆ, ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಹೇಳಿರುವಂತೆ ಕ್ರೌರ್ಯ ಅಪರಾಧ ಕೃತ್ಯವಾಗುವುದಿಲ್ಲ. ಕ್ರೌರ್ಯದ ಆಧಾರದ ಮೇಲೆ ಕೌಟುಂಬಿಕ ನ್ಯಾಯಾಲಯ ವಿವಾಹ ಅನೂರ್ಜಿತಗೊಳಿಸಿ ವಿಚ್ಛೇದನ ನೀಡಿದೆ. ಅದೇ ಆಧಾರದ ಮೇಲೆ ಕ್ರಿಮಿನಲ್ ಪ್ರಕ್ರಿಯೆ ಮುಂದುವರಿಲು ಅವಕಾಶ ಮಾಡಿಕೊಡಲಾಗದು ಎಂದು ಪೀಠವು ಆದೇಶದಲ್ಲಿ ಹೇಳಿದೆ.
ದೂರಿನಲ್ಲಿ ಮತ್ತು ದೋಷಾರೋಪ ಪಟ್ಟಿಯಲ್ಲಿ 498ಎ ಅಡಿಯಲ್ಲಿ ಕ್ರೌರ್ಯ ಅಪರಾಧ ನಡೆದಿದೆ ಎನ್ನಲಾದ ಬಗ್ಗೆ ಯಾವುದೇ ಅಂಶಗಳು ಕಂಡುಬರುತ್ತಿಲ್ಲ. ದೂರು ಪರಿಶೀಲಿಸಿದರೆ, ನಿತ್ಯಾ ಅವರ ಅತ್ತೆ-ಮಾವ ವಿರುದ್ಧವೂ ಕ್ರೌರ್ಯ ಆರೋಪ ಹೊರಿಸುವ ಯಾವುದೇ ಅಂಶವಿಲ್ಲ. ಅವರು ನಿತ್ಯಾ-ನಿಶಾಂತ್ ದಂಪತಿ ಜೊತೆ ನೆಲೆಸಿಯೇ ಇಲ್ಲ. ಹೀಗಾಗಿ, ಈ ಮೂವರ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದ್ದು, ನ್ಯಾಯದಾನಕ್ಕೆ ವಿರುದ್ಧವಾಗಲಿದೆ ಎಂದು ತೀರ್ಮಾನಿಸಿದ ಹೈಕೋರ್ಟ್, ಪತಿ ಮತ್ತವರ ಪೋಷಕರ ವಿರುದ್ಧದ ಕ್ರಿಮಿನಲ್ ದೂರು ಮತ್ತು ಅಧೀನ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಿದೆ.
ಪತ್ನಿ ಆರೋಪ: ಮದುವೆಯ ನಂತರ ಪತಿ ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸುತ್ತಿರಲಿಲ್ಲ. ಈ ಕುರಿತು ಮಾತನಾಡಿದಾಗೆಲ್ಲಾ ಪತಿಯು ಆಧ್ಯಾತ್ಮಿಕತೆ ಸಂಬಂಧಿಸಿದ ವಿಡಿಯೋ ನೋಡುತ್ತಾ, ನನಗೂ ಅದನ್ನು ನೋಡುವಂತೆ ಒತ್ತಾಯಿಸುತ್ತಿದ್ದರು. ಜೊತೆಗೆ, ದೈಹಿಕ ಸಂಪರ್ಕದಲ್ಲಿ ನನಗೆ ಆಸಕ್ತಿ ಇಲ್ಲ. ದೈಹಿಕ ಸಂಪರ್ಕ ಬೆಳೆಸುವುದಷ್ಟೇ ಪ್ರೀತಿಯಲ್ಲ. ಆತ್ಮ ಆತ್ಮಗಳನ್ನು ಬೆಸೆದು ಪ್ರೀತಿಸಬೇಕು ಎಂಬುದಾಗಿ ಹೇಳುತ್ತಿದ್ದರು.
ಹಗಲು ರಾತ್ರಿ ಆಧ್ಯಾತ್ಮಿಕ ಚಿಂತಕರೊಬ್ಬರ ಪ್ರವಚನಗಳನ್ನು ಕೇಳುತ್ತಿದ್ದರು. ಮದುವೆಯಾದ ಹಲವು ದಿನ ಕಳೆದರೂ ದೈಹಿಕ ಸಂಪರ್ಕಕ್ಕೆ ಒಪ್ಪಲಿಲ್ಲ. ಇದು ಕ್ರೌರ್ಯಕ್ಕೆ ಸಮಾನವಾಗಲಿದೆ ಎಂದು ಆರೋಪಿಸಿದ್ದರು. ಪತ್ನಿಯ ಆರೋಪಗಳನ್ನು ಅಲ್ಲಗೆಳೆದಿದ್ದ ಪತಿ, ದೈಹಿಕ ಸಂಪರ್ಕ ಬೆಳೆಯದಿದ್ದ ಕಾರಣಕ್ಕೆ ಪತ್ನಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಮದುವೆಯಾದ ನಂತರ ನನ್ನ ತಂದೆ-ತಾಯಿ ನಮ್ಮ ಜೊತೆಗೆ ನೆಲೆಸಿರಲಿಲ್ಲಾದರೂ ಅವರನ್ನೂ ಸಹ ಪ್ರಕರಣದಲ್ಲಿ ಎಳೆದು ತಂದಿದ್ದಾರೆ. ಐಪಿಸಿ 498ಎ ಅಡಿ ಮಾಡಿರುವ ಆರೋಪಗಳು ಸಾಬೀತುಪಡಿಸುವ ಯಾವೊಂದು ಅಂಶವೂ ಇಲ್ಲವಾಗಿದೆ. ಆದ್ದರಿಂದ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ: ಬೆಂಗಳೂರು ನಗರದ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಆಕೆ 2019ರ ಡಿ.18ರಂದು ಮದುವೆಯಾಗಿದ್ದರು. ಆದರೆ, ಮದುವೆಯಾದ ನಂತರ 28 ದಿನಗಳ ಮಾತ್ರ ಪತಿಯ ಮನೆಯಲ್ಲಿ ಪತ್ನಿ ನೆಲೆಸಿದ್ದರು. ಆ ಬಳಿಕ ಮನೆ ತೊರೆರಿದ್ದರು.
2020ರ ಫೆ.5ರಂದು ಜೆ. ಪಿ. ನಗರ ಠಾಣೆಗೆ ತೆರಳಿ, ಪತಿ ಮತ್ತು ಆತನ ಪೋಷಕರ ವಿರುದ್ಧ ಐಪಿಸಿ ಸೆಕ್ಷನ್ 498-ಎ, ವರದಕ್ಷಿಣೆ ತಡೆ ಕಾಯ್ದೆ ಸೆಕ್ಷನ್ 4 ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಮತ್ತೊಂದೆಡೆ ವಿವಾಹ ವಿಚ್ಛೇದನ ಕೋರಿ ಹಿಂದೂ ವಿವಾಹ ಕಾಯ್ದೆ-1955ರ ಸೆಕ್ಷನ್ 12(1)(ಎ) ಅಡಿಯಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಕ್ರೌರ್ಯ ಆಧಾರದ ಮೇಲೆ ಮದುವೆ ಅಸಿಂಧುಗೊಳಿಸುವಂತೆ ಕೋರಿದ್ದರು.
ಕ್ರಿಮಿನಲ್ ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು, ಆತ ಮತ್ತು ತಂದೆ-ತಾಯಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ದೋಷಾರೋಪ ಪಟ್ಟಿ ರದ್ದು ಕೋರಿ ಪತಿ 2021ರ ಸೆ.6ರಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
2021ರ ಸೆ.14ರಂದು, ಪತಿ ಮತ್ತು ಅವರ ತಂದೆ-ತಾಯಿ ವಿರುದ್ಧದ ದೋಷಾರೋಪ ಪಟ್ಟಿ ಮತ್ತು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದಿನ ಪ್ರಕ್ರಿಯೆಗೆ ತಡೆ ನೀಡಿತ್ತು. 2022ರ ನ.16ರಂದು ದಂಪತಿಯ ಮದುವೆಯನ್ನು ಅನೂರ್ಜಿತಗೊಳಿಸಿ ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು. ಇದಾದ ನಂತರ ವರದಕ್ಷಿಣೆ ಕಿರುಕುಳ ಆರೋಪದಡಿ ಪತಿ ವಿರುದ್ಧ ಪ್ರಕರಣವನ್ನು ಪತ್ನಿ ಮುಂದುವರಿಸಿದ್ದರು.












Click it and Unblock the Notifications