ಪರಮೇಶ್ವರ್ ಖಾತೆ ಮೇಲೆ ರಾಮಲಿಂಗಾ ರೆಡ್ಡಿ ಕಣ್ಣು, ಯಾರಿಗೆ ಒಲಿಯಲಿದೆ ಜಯ?
Recommended Video

ಬೆಂಗಳೂರು, ಅಕ್ಟೋಬರ್ 02: ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಪರಮೇಶ್ವರ್ ಬಿಡಬೇಕಲ್ಲ. ಯಾವುದೇ ಕಾರಣಕ್ಕೂ ಖಾತೆ ಬಿಟ್ಟುಕೊಡುವುದಿಲ್ಲ ಎಂದು ಕೂತಿದ್ದಾರೆ.
ಹೌದು, ಎರಡನೇ ಹಂತದ ಸಂಪುಟ ವಿಸ್ತರಣೆ ಸಮೀಪಿಸುತ್ತಿದ್ದಂತೆ ಮತ್ತೆ ಸಕ್ರಿಯರಾಗಿರುವ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು, ಪರಮೇಶ್ವರ್ ಅವರ ಬಳಿ ಇರುವ ಬೆಂಗಳೂರು ಉಸ್ತುವಾರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಪರಮೇಶ್ವರ್ ಅವರು ಈಗಾಗಲೇ ಉಪಮುಖ್ಯಮಂತ್ರಿ ಜೊತೆಗೆ, ಗೃಹ ಮಂತ್ರಿ, ಬೆಂಗಳೂರು ಉಸ್ತುವಾರಿ, ತುಮಕೂರಿ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸುತಿದ್ದಾರೆ ಹಾಗಾಗಿ ಬೆಂಗಳೂರು ಉಸ್ತುವಾರಿ ಸ್ಥಾನವನ್ನು ತಮಗೆ ನೀಡಬೇಕು ಎಂದು ರಾಮಲಿಂಗಾ ರೆಡ್ಡಿ ಬೇಡಿಕೆ ಇಟ್ಟಿದ್ದಾರೆ.

ಮಗಳಿಗೆ ಟಿಕೆಟ್ ನೀಡಿದ್ದಕ್ಕೆ ಮಂತ್ರಿ ಸ್ಥಾನ ನಿರಾಕರಣೆ
ಕಳೆದ ಬಾರಿ ಗೃಹ ಸಚಿವರಾಗಿದ್ದ ರಾಮಲಿಂಗಾ ರೆಡ್ಡಿ ಅವರನ್ನು ಮೊದಲ ಸಂಪುಟ ವಿಸ್ತರಣೆ ಸಮಯದಲ್ಲಿ ನಿರ್ಲಕ್ಷಿಸಲಾಗಿತ್ತು. ಅವರ ಮಗಳು ಸೌಮ್ಯಾ ರೆಡ್ಡಿಗೆ ಟಿಕೆಟ್ ನೀಡಿದ ಕಾರಣ ಅವರಿಗೆ ಮಂತ್ರಿ ಸ್ಥಾನ ನಿರಾಕರಿಸಲಾಗಿದೆ ಎನ್ನಲಾಗಿತ್ತು. ಆದರೆ ಈಗ ರಾಮಲಿಂಗಾ ರೆಡ್ಡಿ ಅವರೇ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.

ಸ್ಥಳೀಯರಿಗೆ ಉಸ್ತುವಾರಿ ಸ್ಥಾನ ನೀಡಿದರೆ ಒಳಿತು
ಲೋಕಸಭೆ ಚುನಾವಣೆ ಸಮೀಪದಲ್ಲಿದ್ದು, ಬೆಂಗಳೂರಿನಲ್ಲಿ ಚುನಾವಣೆ ಗೆಲ್ಲಲು ಸ್ಥಳೀಯರಿಗೆ ಉಸ್ತುವಾರಿ ಸ್ಥಾನ ನೀಡಿದರೆ ಒಳ್ಳೆಯದು ಎಂಬ ವಾದವನ್ನು ರಾಮಲಿಂಗಾ ರೆಡ್ಡಿ ಮುಂದಿಟ್ಟಿದ್ದು, ಬಿಬಿಎಂಪಿ ಮೇಯರ್ ಸಹ ತಮ್ಮ ಬೆಂಬಲಿಗರೇ ಇರುವುದರಿಂದ ಬೆಂಗಳೂರು ಉಸ್ತುವಾರಿಯನ್ನು ತಮಗೆ ನೀಡಬೇಕು ಎಂದು ರೆಡ್ಡಿ ಅವರು ಬೇಡಿಕೆ ಇಟ್ಟಿದ್ದಾರೆ.

ಸುತಾರಾಂ ಕೊಡುವುದಿಲ್ಲ ಎಂದಿರುವ ಪರಮೇಶ್ವರ್
ಮೂರು ಖಾತೆಯನ್ನು ಹೊಂದಿದ್ದರೂ ಸಹ ಬೆಂಗಳೂರು ಉಸ್ತುವಾರಿ ಖಾತೆ ಬಿಟ್ಟುಕೊಡುವುದಿಲ್ಲ ಎಂದು ಪರಮೇಶ್ವರ್ ಅವರು ಹಠ ಹಿಡಿದಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಸೇರಿದಂತೆ ಕೆಲವು ಪರಮೇಶ್ವರ್ ಅವರಿಂದ ಬೆಂಗಳೂರು ಉಸ್ತುವಾರಿಯನ್ನು ವಾಪಸ್ ಪಡೆದು ಸ್ಥಳೀಯರಿಗೆ ನೀಡುವ ಬಗ್ಗೆ ಸಹಮತ ಹೊಂದಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೆ ಪರೇಶ್ವರ್ ವಿರೋಧವಿದೆ.

ಹಿರಿಯರು ಯಾರ್ಯಾರು ಆಕಾಂಕ್ಷಿಗಳು
ಎಚ್.ಕೆ.ಪಾಟೀಲ್, ರಾಮಲಿಂಗಾ ರೆಡ್ಡಿ, ಶಾಮನೂರು ಶಿವಶಂಕರಪ್ಪ ಸೇರಿದಂತೆ ಇನ್ನೂ ಕೆಲವು ಹಿರಿಯ ಕಾಂಗ್ರೆಸ್ ನಾಯಕರಿಗೆ ಈ ಬಾರಿ ಸಚಿವ ಸ್ಥಾನ ನೀಡಲಾಗಿಲ್ಲ. ರಾಮಲಿಂಗಾ ರೆಡ್ಡಿ ಹಾಗೂ ಎಚ್.ಕೆ.ಪಾಟೀಲ್ ಅವರು ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದು ಅವರಿಗೆ ಈ ಬಾರಿ ಸ್ಥಾನ ಸಿಗುವ ಸಾಧ್ಯತೆ ಇದೆ.

ರಾಮಲಿಂಗಾ ರೆಡ್ಡಿ v/s ಪರಮೇಶ್ವರ್
ಬಿಬಿಎಂಪಿ ಚುನಾವಣೆಯಲ್ಲಿ ಸಹ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಉಪಮುಖ್ಯಮಂತ್ರಿ ಪರಮೇಶ್ವರ್ ಎದುರುಬದುರಾಗಿದ್ದರು. ಆದರೆ ಅಂತಿಮ ವಿಜಯ ರಾಮಲಿಂಗಾ ರೆಡ್ಡಿ ಅವರದ್ದೇ ಆಯಿತು. ರಾಮಲಿಂಗಾರೆಡ್ಡಿ ಅವರ ಅಭ್ಯರ್ಥಿ ಗಂಗಾಂಬಿಕಾ ಅವರಿಗೆ ಮೇಯರ್ ಸ್ಥಾನ ನೀಡಲಾಯಿತು. ಪರಮೇಶ್ವರ್ ಅವರ ಬೆಂಬಲಿಗರಾದ ಸೌಮ್ಯಾ ಶಿವಕುಮಾರ್ ಅವರಿಗೆ ಸ್ಥಾನವನ್ನು ನಿರಾಕರಿಸಲಾಯಿತು.












Click it and Unblock the Notifications