ಪಿಎಸ್ಸೈ ಬಂಡೆ: ಪರಿಹಾರ ಮೊತ್ತ 50ಕ್ಕೇರಿಸಿದ ಸಿದ್ದು
ಗುಲ್ಬರ್ಗ, ಜ.16:ಇಂದು ಮುಂಜಾನೆ ದೆಹಲಿ ತಲುಪಿದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುತಾತ್ಮ ಪಿಎಸ್ಸೈ ಮಲ್ಲಿಕಾರ್ಜುನ ಬಂಡೆ ಅವರ ಕುಟುಂಬಕ್ಕೆ ಸರಕಾರದ ವತಿಯಿಂದ 50 ಲಕ್ಷ ರೂ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ಇದಕ್ಕೂ ಮುನ್ನ ಇಂದು ಬೆಳಗ್ಗೆ ಗುಲ್ಬರ್ಗಾದಲ್ಲಿ ಮೃತ ಬಂಡೆ ಅವರ ಅಂತಿಮ ದರುಶನ ಪಡೆದ ಗೃಹ ಸಚಿವ ಜಾರ್ಜ್ ಅವರು ಸರಕಾರದಿಂದ ಪರಿಹಾರ ಮೊತ್ತವನ್ನು 15 ರಿಂದ 25 ಲಕ್ಷ ರೂ. ಗೆ ಏರಿಸುವುದಾಗಿ ತಿಳಿಸಿದ್ದರು.

ಖಜೂರಿನ ಹೊರವಲಯದಲ್ಲಿರುವ ಬಂಡೆ ಅವರ ತೋಟದಲ್ಲಿ ವೀರಶೈವ ಸಂಪ್ರದಾಯಂತೆ ಜತೆಗೆ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳನ್ನು ಪೂರೈಸಲು ಜಿಲ್ಲಾಡಳಿತ ಮತ್ತು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಇಂದು ಬೆಳಗ್ಗೆ ನಗರದ ಜಿಲ್ಲಾ ಸಶಸ್ತ್ರ ಪೊಲೀಸ್ ಮೈದಾನದಲ್ಲಿ (DAR) ಮಲ್ಲಿಕಾರ್ಜುನರ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಇದೀಗ ಶವಯಾತ್ರೆ ಖಜೂರಿ ಗ್ರಾಮದತ್ತ ತೆರಳಿದೆ. ಮಾರ್ಗಮಧ್ಯೆ, ಬಂಡೆ ಶವವನ್ನು ನೋಡಿ ಗ್ರಾಮಸ್ಥರು ಕಂಬಿಗರೆಯುತ್ತಿದ್ದಾರೆ.
ಈ ಮಧ್ಯೆ, ಇಂದು ಬೆಳಗ್ಗೆ DAR ಗ್ರೌಂಡ್ಸ್ ನಲ್ಲಿ ಮಲ್ಲಿಕಾರ್ಜುನ ಬಂಡೆ ಅಂತಿಮ ದರುಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಗೃಹ ಸಚಿವ ಕೆಜೆ ಜಾರ್ಜ್ ಅವರು ಬಂಡೆ ಕುಟಂಬಕ್ಕೆ ನೀಡಲಾಗುವ ಪರಿಹಾರ ಮೊತ್ತದ ಬಗ್ಗೆ ಎದ್ದಿರುವ ವಿವಾದದ ಬಗ್ಗೆ ಕೆಲ ವಿಷಯಗಳ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.
* ಬಂಡೆ ಕುಟುಂಬಕ್ಕೆ ನೀಡಲಾಗುವ ಮೊತ್ತವನ್ನು 15 ಲಕ್ಷ ರೂ. ನಿಂದ 25 ಲಕ್ಷ ರೂ. ಗೆ ಏರಿಸಿರುವಾಗಿ ಸಚಿವ ಜಾರ್ಜ್ ತಿಳಿಸಿದ್ದಾರೆ.
* ಪರಿಹಾರ ಮೊತ್ತದ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಯಾಗಿದೆ. ಈ 25 ಲಕ್ಷ ರೂ. ಮೊತ್ತ ಸರಕಾರದ ವತಿಯಿಂದ ನೀಡಲಾಗುವ ಮೊತ್ತ. ಇದನ್ನು ಹೊರತುಪಡಿಸಿ ಇಲಾಖೆಯು ಸೇವಾ ನಿಯಮಗಳಿಗೆ ಅನುಗುಣವಾಗಿ ಪರಿಹಾರ ನೀಡಲಿದೆ.
* ಬಂಡೆ ಅವರು ನಿವೃತ್ತಿಯಾಗುವ ದಿನದವರೆಗಿನ ಅಷ್ಟೂ ಸಂಬಳವನ್ನು ಕಾಲಕಾಲಕ್ಕೆ ಇಲಾಖೆಯು ಅವರ ಕುಟಂಬಕ್ಕೆ ಪಾವತಿಸಲಿದೆ. ಇವೆರಡೂ ಸೇರಿದರೆ ಅಂದಾಜು 50 ಲಕ್ಷ ರೂ. ಗೆ ತಲುಪಬಹುದು.
* ಇದಲ್ಲದೆ ಹುತಾತ್ಮ ಬಂಡೆ ಅವರ ಪತ್ನಿ ಮಲ್ಲಮ್ಮ ಅವರು ರಾಜ್ಯದ ಯಾವುದೇ ಭಾಗದಲ್ಲಿ ಕೇಳಿದರೂ ಅವರಿಗಾಗಿ ಸರಕಾರ ಉಚಿತಯ ನಿವೇಶನ ನೀಡಲಿದೆ.
* ಆಮ್ ಆದ್ಮಿ ಪಕ್ಷದ ಮಾದರಿ ಇದಕ್ಕಿದ್ದಂತೆ 1 ಕೋಟಿ ರೂ. ನೀಡಲು ಬರುವುದಿಲ್ಲ. ವಿವೇಚನೆ ಬಳಸಿ ಸೂಕ್ತ ಪರಿಹಾರ ನೀಡುವುದು ಸರಕಾರದ ಆದ್ಯಕರ್ತವ್ಯ. ಅದರಂತೆ ಪರಿಹಾರ ನೀಡಲಾಗುವುದು ಎಂದೆಲ್ಲಾ ಗೃಹ ಸಚಿವ ಜಾರ್ಜ್ ಅವರು ಇಂದು ಬೆಳಗ್ಗೆ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications