ಪಿಓಪಿ ಗಣೇಶನ ಕೊಂಡರೆ ಜೈಲಲ್ಲೇ ಕರಿಗಡಬು, ಮೋದಕ!
ಬೆಂಗಳೂರು, ಆಗಸ್ಟ್, 26: ಗಣೇಶ ಹಬ್ಬ ಬಂತು ಎಂಬ ಖುಷಿಯಲ್ಲಿ ಮಾರುಕಟ್ಟೆಯಲ್ಲಿ ಸಿಕ್ಕ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನನ್ನು ಮನೆಗೆ ತಂದು ಧಾಂ ಧೂಂ ಅಂತ ಪೂಜೆ ಮಾಡಿದರೆ ನಂತರ ನಿಮಗೆ ಪೊಲೀಸ್ ಠಾಣೆಯಲ್ಲಿ ಪೂಜೆ ಆಗಬಹುದು!
ಈ ಬಾರಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಪೂಜೆ ಮಾಡಿದ ಆರೋಪ ಸಾಬೀತಾದರೆ ಕನಿಷ್ಠ ಒಂದೂವರೆ ವರ್ಷದಿಂದ 6 ವರ್ಷದವರೆಗೆ ಜೈಲು ಶಿಕ್ಷೆ ಜತೆಗೆ ದಂಡ ಪಾವತಿಸಬೇಕು. ಶಿಕ್ಷೆ ನಂತರವೂ ಇದೇ ವರ್ತನೆ ಮುಂದುವರಿದರೆ ಆನಂತರದ ಪ್ರತಿ ದಿನಕ್ಕೆ ಗರಿಷ್ಠ ಐದು ಸಾವಿರ ರೂ.ವರೆಗೆ ದಂಡ ವಿಧಿಸುವ ಕಾನೂನು ಜಾರಿಯಾಗಿದೆ.[ಶಾಸ್ತ್ರಬದ್ಧವಾಗಿ ಗಣಪತಿಯನ್ನು ವಿಸರ್ಜಿಸುವ ಕ್ರಮ]
ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕರಾಮಾನಿಮಂ) ಆದೇಶ ಹೊರಡಿಸಿದೆ.

ವಿನಾಯಿತಿ ಇಲ್ಲ
ಗಣಪತಿ ಹಬ್ಬ ಒಂದೆರಡು ದಿನ ಇರುವಂತೆ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶನಿಗೆ ನಿಷೇಧ ಹೇರಿತ್ತಿದ್ದ ಮಂಡಳಿಗೆ ವಿನಾಯಿತಿ ನೀಡಬೇಕೆಂದು ಗಣೇಶ ತಯಾರಕರು ವಿನಂತಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಹಬ್ಬ 10 ದಿನ ಇರುವಾಗಲೇ ಮಂಡಳಿ ಸ್ಪಷ್ಟ ಆದೇಶ ನೀಡಿದೆ.

ಬಿಬಿಎಂಪಿಗೆ ಆದೇಶ
ಬಿಬಿಎಂಪಿ ಮತ್ತು ಎಲ್ಲಾ ನಗರಸಭೆ, ಪುರಸಭೆಗಳಿಗೆ ಆದೇಶ ನೀಡಲಾಗಿದ್ದು, ರಾಜ್ಯದಲ್ಲಿ ಎಲ್ಲಾ ಪಿಒಪಿ ಗಣೇಶ ಮೂರ್ತಿಗಳನ್ನು ತೆರವುಗೊಳಿಸಬೇಕೆಂದು ಮಂಡಳಿ ಸೂಚನೆ ನೀಡಿದೆ.

ವಿಸರ್ಜನೆಗೆ ಅವಕಾಶ ಇಲ್ಲ
ಮೂರ್ತಿಗಳನ್ನು ಮುಳುಗಿಸಲು ಯಾವುದೇ ಕೆರೆಗಳಲ್ಲಿ ಅವಕಾಶ ನೀಡುವುದಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.[ಗಣೇಶನ ಹಬ್ಬಕ್ಕೆ ಬದಲಾವಣೆ ನಿಮ್ಮಿಂದಲೇ ಆರಂಭವಾಗಲಿ!]

ಬಣ್ಣ ಲೇಪಿತ ವಿಗ್ರಹಕ್ಕೂ ನೋ ಪರ್ಮಿಟ್
'ಬಣ್ಣಲೇಪಿತ ವಿಗ್ರಹಗಳನ್ನು ಸಹ ನಿಷೇಧಿಸಲಾಗುವುದು. ಕಳೆದ ವರ್ಷ ತಯಾರಕರು ಮನವಿ ಮಾಡಿದ್ದರಿಂದ ಯಾವುದೇ ಪ್ರಕರಣಗಳನ್ನು ದಾಖಲಿಸಿರಲಿಲ್ಲ. ಆದರೆ ಈ ವರ್ಷದಿಂದ ಪ್ರಕರಣ ದಾಖಲಿಸಲು ಮಂಡಳಿ ತೀರ್ಮಾನ ತೆಗೆದುಕೊಂಡಿದೆ.

ಈಗಲೆ ಖರೀದಿ ಮಾಡಿದ್ದರೆ?
ಈಗಾಗಲೇ ಕೊಂಡುಕೊಂಡಿರುವ ಪಿಒಪಿ ಗಣೇಶ ಮೂರ್ತಿಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಜವಾಬ್ದಾರಿ ಕೊಂಡುಕೊಂಡವರ ಅಥವಾ ಮಾರಾಟ ಮಾಡಿದ್ದವರದ್ದೇ ಆಗಿರುತ್ತದೆ. ಇದಕ್ಕೆ ಬಿಬಿಎಂಪಿ ಅಥವಾ ಸ್ಥಳೀಯ ಆಡಳಿತ ಜವಾಬ್ದಾರರಾಗಿರುವುದಿಲ್ಲ.

ಯಾವ ಕಾನೂನುಗಳ ಆಧಾರ?
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶ ಮತ್ತು 1984ರ ಜಲ ಕಾಯ್ದೆಯ 33ಎ ಕಲಂ ಅನ್ವಯ ಪಿಒಪಿ ಗಣೇಶ ಬಳಕೆ ಮತ್ತು ವಿಸರ್ಜನೆ ನಿಷೇಧ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ.












Click it and Unblock the Notifications