ಭಾನುವಾರದ ನಂತರ ಕರ್ನಾಟಕದಲ್ಲಿ ಮ್ಯಾಗಿ ಮಾರಾಟವಿಲ್ಲ
ಬೆಂಗಳೂರು, ಜೂ. 06 : ಭಾನುವಾರದ ನಂತರ ಕರ್ನಾಟಕದಲ್ಲಿ ಮ್ಯಾಗಿ ಮಾರಾಟ ಮಾಡುವಂತಿಲ್ಲ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಆದೇಶ ನೀಡಿದರು. ಮ್ಯಾಗಿಯಲ್ಲಿ ವಿಷಕಾರಿ ಅಂಶಗಳಿರುವ ಬಗ್ಗೆ ಸಿಎಫ್ಟಿಆರ್ನಿಂದ ವರದಿ ತರಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಶನಿವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು, ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ಮ್ಯಾಗಿ ಉತ್ಪಾದನೆಯನ್ನು ಸ್ಥಗಿತಗೊಳಿಸಲು ಸೂಚನೆ ನೀಡಲಾಗಿದೆ. ಅಂಗಡಿಗಳಿಲ್ಲಿರುವ ಮ್ಯಾಗಿಯನ್ನು ಭಾನುವಾರದೊಳಗೆ ವಾಪಸ್ ಪಡೆಯಲು ಸೂಚಿಸಲಾಗಿದೆ ಎಂದರು. [ನಂಜನಗೂಡು ಮ್ಯಾಗಿ ಘಟಕಕ್ಕೆ ಬೀಗ]

ರಾಜ್ಯದಲ್ಲಿ ಭಾನುವಾರದ ನಂತರ ಎಲ್ಲಿಯೂ ಮ್ಯಾಗಿ ಮಾರಾಟವಾದಂತೆ ನೋಡಿಕೊಳ್ಳಬೇಕು. ಈ ಆದೇಶವನ್ನು ಉಲ್ಲಂಘನೆ ಮಾಡಿದರೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಚಿವರು ವಿವರಣೆ ನೀಡಿದರು. ಮ್ಯಾಗಿ ಮಾರಾಟದ ಬಗ್ಗೆ ನಿಗಾವಹಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಗಸ್ತುಪಡೆಯನ್ನು ರಚಿಸಲಾಗುತ್ತದೆ ಎಂದು ತಿಳಿಸಿದರು. [ಮ್ಯಾಗಿ ಮಾರಾಟ ವಾಪಸ್ ಪಡೆದ ನೆಸ್ಲೆ ಕಂಪನಿ]
ವರದಿಗಾಗಿ ಕಾಯುತ್ತಿದ್ದೇವೆ : ಮ್ಯಾಗಿಯಲ್ಲಿ ವಿಷಕಾರಿ ಅಂಶಗಳಿವೆಯೇ? ಎಂಬ ಬಗ್ಗೆ ವರದಿ ಕೇಳಲಾಗಿತ್ತು. ರಾರ್ಬಟ್ಸ್ ಟೆಕ್ನಾಲಜಿ ಸಂಸ್ಥೆ ವಿಷಕಾರಿ ಅಂಶಗಳಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ವರದಿ ಇನ್ನೂ ಇಲಾಖೆಗೆ ಬಂದಿಲ್ಲ. ವರದಿ ಬಂದ ನಂತರ ಮ್ಯಾಗಿಯ ಮಾದರಿಯನ್ನು ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್ಟಿಆರ್ಐ)ಗೆ ಕಳುಹಿಸುವ ಕುರಿತು ತೀರ್ಮಾನಿಸಲಾಗುತ್ತದೆ ಎಂದರು.
ಮೂರು ಖಾಸಗಿ ಪ್ರಯೋಗಾಲಯಗಳಿಗೆ ಮ್ಯಾಗಿ ಮಾದರಿಯನ್ನು ಕಳುಹಿಸಿಕೊಡಲಾಗಿದೆ. ಅಲ್ಲಿನ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ವರದಿ ಬಂದ ನಂತರ ರಾಜ್ಯದಲ್ಲಿ ಮ್ಯಾಗಿ ನಿಷೇಧಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು.












Click it and Unblock the Notifications