ನಾಳೆ ಪೂರ್ಣ ಪ್ರಮಾಣದ ಸಂಪುಟ ಜಾರಿಯಾಗಲ್ಲ: ಸಿಎಂ
ಬೆಂಗಳೂರು, ಜೂನ್ 5: ಬುಧವಾರ ಮಧ್ಯಾಹ್ನ ಎರಡು ಗಂಟೆಗೆ ಕರ್ನಾಟಕ ಸರಕಾರದ ಸಂಪುಟ ವಿಸ್ತರಣೆ ನಡೆಯಲಿದೆ. ಆದರೆ ರಾಜಕೀಯ ಕಾರಣಗಳಿಗೆ ನಾಳೆ ಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ಬರುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಒಟ್ಟು 34 ಸಚಿವ ಸ್ಥಾನಗಳಲ್ಲಿ ಕೆಲವು ಸ್ಥಾನಗಳನ್ನು ತುಂಬುತ್ತಿಲ್ಲ ಎಂದು ಕುಮಾರಸ್ವಾಮಿ ವಿವರ ನೀಡಿದ್ದಾರೆ.
ಖಾತೆ ಹಂಚಿಕೆ ಸೂತ್ರದಂತೆ ಕಾಂಗ್ರೆಸಿಗೆ 22 ಮತ್ತು ಜೆಡಿಎಸ್ ಗೆ 12 ಸ್ಥಾನಗಳು ಎಂದು ನಿರ್ಧಾರವಾಗಿವೆ. ಜೆಡಿಎಸ್ ನ 12 ಸ್ಥಾನಗಳಲ್ಲಿ ಒಂದು ಬಿಎಸ್ಪಿ ಶಾಸಕ ಎನ್. ಮಹೇಶ್ ಅವರಿಗೆ ನೀಡಬೇಕಾಗಿದ್ದು ಒಟ್ಟು 11 ಸಚಿವ ಸ್ಥಾನಗಳು ಜೆಡಿಎಸ್ ಗೆ ಸಿಗಲಿವೆ.

ಇದರಲ್ಲಿ 8 ಸ್ಥಾನಗಳನ್ನಷ್ಟೇ ಭರ್ತಿ ಮಾಡಲು ನಿರ್ಧರಿಸಿದ್ದೇವೆ. ರಾಜಕೀಯ ಕಾರಣಗಳಿಗಾಗಿ ಕೆಲವು ಸ್ಥಾನಗಳನ್ನು ತುಂಬದೇ ಬಾಕಿ ಉಳಿಸಿಕೊಳ್ಳಲಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಎಲ್ಲಾ ಸಚಿವ ಸ್ಥಾನಗಳನ್ನು ಭರ್ತಿ ಮಾಡಿದರೆ ಸಚಿವಾಕಾಂಕ್ಷಿಗಳು ಬಂಡಾಯವೇಳಬಹುದು ಎಂಬ ಆತಂಕ ಜೆಡಿಎಸ್ ವರಿಷ್ಠರದ್ದಾಗಿದೆ. ಹೀಗಾಗಿ ಆಕಾಂಕ್ಷಿಗಳ ಮೂಗಿಗೆ ತುಪ್ಪ ಸವರಲು ಕೆಲವು ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲಿದ್ದಾರೆ.
ಕಾಂಗ್ರೆಸ್ ಪಾಳಯದಿಂದಲೂ ಕೆಲವು ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲಾಗುತ್ತದೆ ಎಂಬ ಮಾಹಿತಿ ಇದೆ.












Click it and Unblock the Notifications