'ಯಾರೂ ಎಂಪಿ, ಎಂಎಲ್ಎ ಟಿಕೆಟ್ ಕೇಳಬಾರದೇ ರೇವಣ್ಣ?'
ಬೆಂಗಳೂರು, ಮಾರ್ಚ್ 08 : 'ಯಾರೂ ಸಹ ಎಂಪಿ, ಎಂಎಲ್ಎ ಟಿಕೆಟ್ ಕೇಳಬಾರದೇ?, ಯಾವ ಮಹಿಳೆಯರು ಸಹ ರಾಜಕಾರಣಕ್ಕೆ ಬರಬಾರದೇ?' ಎಂದು ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸಚಿವ ಎಚ್.ಡಿ.ರೇವಣ್ಣ ಅವರನ್ನು ಪ್ರಶ್ನಿಸಿದರು.
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಸುಮಲತಾ ಅಂಬರೀಶ್ ಅವರ ಬಗ್ಗೆ ನೀಡಿದ ಹೇಳಿಕೆಯನ್ನು ಎನ್.ರವಿಕುಮಾರ್ ಖಂಡಿಸಿದರು. 'ಸಿನಿಮಾ ಟಿಕೆಟ್ಗಳು ಮಾತ್ರ ಕಾರ್ಯಕರ್ತರಿಗೆ. ಎಂಪಿ, ಎಂಎಲ್ಎ ಟಿಕೆಟ್ಗಳು ನಿಮ್ಮ ಕುಟುಂಬಕ್ಕೆ ಮಾತ್ರವೇ?' ಎಂದು ಅವರು ಟೀಕಿಸಿದರು.
'ದೇವೇಗೌಡರ ಕುಟುಂಬದಿಂದ ಕರ್ನಾಟಕದಲ್ಲಿ 7 ರಿಂದ 8 ಸೀಟುಗಳನ್ನು ಪಡೆದಿದ್ದೀರಿ. ನಿಮ್ಮ ಕುಟುಂಬಕ್ಕೆ ಮಾತ್ರವೇ ಜೆಡಿಎಸ್ ಸೀಮಿತವಾಗಿದೆಯೇ?. ಇಡೀ ರಾಜ್ಯದ ರಾಜಕಾರಣ ನಿಮ್ಮ ಕುಟುಂಬದಿಂದ ಮಾತ್ರ ನಡೆಯುತ್ತಿದೆಯೇ?' ಎಂದು ಪ್ರಶ್ನೆ ಮಾಡಿದರು.

'ಸುಮಲತಾ ಅಂಬರೀಶ್ ಅವರ ಬಗ್ಗೆ ಎಚ್.ಡಿ.ರೇವಣ್ಣ ನೀಡಿರುವ ಹೇಳಿಕೆ ಖಂಡನೀಯ. ಹಿರಿಯ ರಾಜಕಾರಣಿಯಾಗಿ ಸುಮಲತಾ ಅಂಬರೀಶ್ ಅವರ ಬಗ್ಗೆ ಈ ರೀತಿಯಾಗಿ ಮಾತನಾಡಿರುವುದು ನೋವು ತಂದಿದೆ' ಎಂದು ಎನ್.ರವಿಕುಮಾರ್ ಹೇಳಿದರು.
'ಬೇರೆಯವರು ಯಾರು ಟಿಕೆಟ್ ಕೇಳಬಾರದೇ, ರಾಜಕೀಯಕ್ಕೆ ಬರಬಾರದೇ?. ಜೆಡಿಎಸ್ನ ಸಿದ್ದಾಂತವೇನು?. ಕುಮಾರಸ್ವಾಮಿ, ದೇವೇಗೌಡರು, ರೇವಣ್ಣ ದಕ್ಷಿಣ ಕರ್ನಾಟಕ ಎಲ್ಲಾ ಸೀಟು ಜೆಡಿಎಸ್ಗೆ ಬೇರೆಯವರು ಕೇಳುವಂತಿಲ್ಲ ಎಂದು ಸ್ಪಷ್ಟಪಡಿಸಬೇಕು. ನಮ್ಮ ಕುಟುಂಬಕ್ಕೆ ಮಾತ್ರ ಸೀಮಿತ ಎಂದು ಮೀಸಲಾಗಿಡಿ' ಎಂದು ಲೇವಡಿ ಮಾಡಿದರು.
'ಸುಮಲತಾ ಅಂಬರೀಶ್ ಅವರಿಗೆ ಆಗಿರುವ ಬೇಜಾರಿನಲ್ಲಿ ನಾವು ಭಾಗಿಯಾಗಿದ್ದೇವೆ. ಕರ್ನಾಟಕ ಮಹಿಳೆಯರು ಈ ಹೇಳಿಕೆಯನ್ನು ಖಂಡಿಸಬೇಕು. ರೇವಣ್ಣ ಅವರು ಸುಮಲತಾ ಅವರ ಬಗ್ಗೆ ನೀಡಿದ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಬೇಕು' ಎಂದು ರವಿ ಕುಮಾರ್ ಅಗ್ರಹಿಸಿದರು.












Click it and Unblock the Notifications