ಟೊಮೇಟೊ ರಕ್ಷಣೆ ಮಾಡಲು ನೂತನ ವಿಧಾನ ಕಂಡುಕೊಂಡ ರೈತರು
ನವದೆಹಲಿ, ಜುಲೈ 20: ಟೊಮೇಟೊ ಬೆಲೆ ಗಗನಮುಖಿಯಾಗಿರುತ್ತಿರುವುದರಿಂದ ಹಲವೆಡೆ ಟೊಮೇಟೊ ತುಂಬಿದ್ದ ವಾಹನ, ಟೊಮೇಟೊ ಬೆಳೆದ ಹೊಲ ಎಲ್ಲೆಡೆ ಟೊಮೇಟೊ ಕಳ್ಳತನವಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಹಳ್ಳಿಯೊಂದರ ರೈತರಿಬ್ಬರು ತಮ್ಮ ಟೊಮೇಟೊ ಬೆಳೆ ರಕ್ಷಣೆ ಮಾಡಲು ಹೊಸ ವಿಧಾನವೊಂದನ್ನು ಕಂಡುಕೊಂಡಿದ್ದಾರೆ.
ಟೊಮೇಟೊ ಬೆಲೆ ಗಗನಕ್ಕೇರಿದ್ದರಿಂದ ಮೈಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಕುಪ್ಪೆ ಗ್ರಾಮದ ಇಬ್ಬರು ರೈತರು ತಮ್ಮ ಜಮೀನಿನಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಟೊಮೇಟೊ ಬೆಳೆಗೆ ರಕ್ಷಣೆ ನೀಡಿದ್ದಾರೆ ಎಂದು ಡಿಎಚ್ ವರದಿ ಮಾಡಿದೆ.

9ನೇ ತರಗತಿವರೆಗೆ ಓದಿರುವ ನಾಗೇಶ್ ಹಾಗೂ ಬಿಎ ಪದವಿ-ಐಟಿಐ ಓದಿರುವ ಕೃಷ್ಣ ಅವರು ತಮ್ಮ ಎಂಟು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮಾಡುತ್ತಿದ್ದಾರೆ. ಟೊಮೇಟೊ ಬೆಳೆದಿರುವ ಎರಡೂವರೆ ಎಕರೆ ಜಮೀನಿನಲ್ಲಿ ಅವರು ಒಂದು ಕ್ಯಾಮೆರಾ ಹಾಗೂ ಟೊಮೇಟೊ ಕೊಯ್ಲಿಗೆ ಸಿದ್ಧವಾಗಿರುವ ಒಂದು ಎಕರೆ ಜಮೀನಿನಲ್ಲಿ ಮತ್ತೊಂದು ಕ್ಯಾಮೆರಾ ಅಳವಡಿಸಿದ್ದಾರೆ.
ಟೊಮೇಟೊಗೆ ಉತ್ತಮ ಬೆಲೆಯೊಂದಿಗೆ ನಾವು ಈಗ 5 ಲಕ್ಷ ರೂಪಾಯಿ ಗಳಿಸಿದ್ದೇವೆ. ಎರಡು ವಾರಗಳ ಹಿಂದೆ ಟೊಮೇಟೊ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಹಿಡಿದು ಬಿಳಿಕೆರೆ ಪೊಲೀಸರಿಗೆ ಒಪ್ಪಿಸಲಾಗಿತ್ತು. ಬೆಳೆಗಳಿಗೆ ಕಾವಲು ಕಾಯಲು ಕಾರ್ಮಿಕರಿಲ್ಲದ ಕಾರಣ ವಾರದ ಹಿಂದೆಯೇ ಈ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಬೆಳೆಗಳ ಮೇಲೆ ನಿಗಾ ಇಡಲು ಮೊಬೈಲ್ಗೆ ಸಂಪರ್ಕ ಕಲ್ಪಿಸಲಾಗಿದೆ ಎಂದರು.
ಟೊಮೇಟೊ ಕಾಯುತ್ತಿದ್ದ ರೈತನ ಕೊಲೆ:
ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯಲ್ಲಿ ಟೊಮೆಟೊ ಬೆಳೆಗೆ ಕಾವಲು ಕಾಯುತ್ತಿದ್ದ ವೇಳೆ ನಿದ್ದೆಗೆ ಜಾರಿದ ರೈತನ ಕತ್ತು ಹಿಸುಕಿ ಅಪರಿಚಿತರು ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಕಳೆದ ಏಳು ದಿನಗಳಲ್ಲಿ ಈ ಪ್ರದೇಶದಲ್ಲಿ ವರದಿಯಾದ ಎರಡನೇ ಸಾವು ಇದು. ದೇಶಾದ್ಯಂತ ಟೊಮೆಟೋ ಬೆಳೆಗೆ ಬೆಲೆ ಏರಿಕೆಯಾಗಿರುವ ಸಂದರ್ಭದಲ್ಲಿಯೇ ಈ ದಾರುಣ ಘಟನೆಗಳು ವರದಿಯಾಗುತ್ತಿವೆ.
ಟೊಮೇಟೊ ಬೆಳೆದು ಲಾಭ ಮಾಡಿದ ಪೊಲೀಸ್:
ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿರುವ ಬೈರೇಶ್ ವೃತ್ತಿಯಲ್ಲಿ ಪೊಲೀಸ್ ಪ್ರವೃತ್ತಿಯಲ್ಲಿ ರೈತನಾಗಿದ್ದಾರೆ. ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಬಸ್ತಿಹಳ್ಳಿ ಗ್ರಾಮದ ಬೈರೇಶ್ ಈ ಬಾರಿ ತಮ್ಮ ಒಂದು ಎಕರೆ ಆರು ಗುಂಟೆ ಜಾಗದಲ್ಲಿ ಟೊಮೊಟೊ ಬೆಳೆದಿದ್ದು, ನಿರೀಕ್ಷೆಗೂ ಮೀರಿದ ಆದಾಯಗಳಿಸಿದ್ದಾರೆ. ಟೊಮೆಟೊ ದರ ಏರಿಕೆ ದಿನಗಳೂ ಸೇರಿದಂತೆ ಬೈರೇಶ್ ಟೊಮೆಟೊ ಬೆಳೆಯಿಂದ ಈವರಗೆ 20 ಲಕ್ಷ ರೂಪಾಯಿ ಆದಾಯ ಗಳಿಸಿದ್ದರು.
ದಿನ ಕಳೆದಂತೆ ಟೊಮೊಟೋ ದರ ಹೆಚ್ಚಾಗುತ್ತಲೇ ಇದೆ. ಯಾವಾಗ ಒಂದು ಕೆ.ಜಿ.ಗೆ ನೂರು ರೂಪಾಯಿ ದಾಟಿತೋ ಆಗಿನಿಂದಲೇ ಬೆಳೆದ ಬೆಳೆ ರಕ್ಷಣೆ ಮಾಡೋದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಜಮೀನಿನಲ್ಲಿ ದೊಣ್ಣೆ ಹಿಡಿದುಕೊಂಡು ರೈತರು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಕಳ್ಳರಿಂದ ಟೊಮಾಟೋ ರಕ್ಷಣೆಗೆ ರೈತರು ಹೊಸ ಯೋಜನೆ ರೂಪಿಸಿಕೊಂಡಿದ್ದಾರೆ. ರಾತ್ರಿ ಹಗಲು ಟೊಮೆಟೋ ಬೆಳೆಯ ಹೊಲ ಕಾಯುತ್ತಿರುವ ರೈತರು ಕಳ್ಳರ ಹಾವಳಿ ತಡೆಗೆ ಹರಸಾಹಸಪಡುವಂತಾಗಿದೆ.
ಟೊಮೆಟೋಗೆ ಬಂಪರ್ ದರ ಸಿಕ್ಕಿರುವುದರಿಂದ ಹೊಲಗಳಲ್ಲಿ ಕಳ್ಳರ ಕಾಟ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೈತರು ದೊಣ್ಣೆ, ಕೋಲುಗಳನ್ನು ಹಿಡಿದು ಜಮೀನು ಸುತ್ತು ಹಾಕುತ್ತಿದ್ದಾರೆ. ಅಪರಿಚಿತರು ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕಣ್ಣಿಡಲು ಪ್ರಾರಂಭಿಸಿದ್ದಾರೆ.












Click it and Unblock the Notifications