ಹತ್ಯೆಗೀಡಾಗಿದ್ದ ಸೌಮ್ಯ ಕುಟುಂಬಕ್ಕೆ ನೆರವಿನ ಮಹಾಪೂರ
ಬಂಟ್ವಾಳ, ನ. 9 : ಬಾಳ್ತಿಲ ಗ್ರಾಮದ ಕೋರ್ಯ ಎಂಬಲ್ಲಿ ಕಳೆದ ವರ್ಷ ಅತ್ಯಾಚಾರಕ್ಕೀಡಾಗಿ, ಭೀಕರವಾಗಿ ಕೊಲೆಯಾಗಿದ್ದ ಕು. ಸೌಮ್ಯಳ ಕುಟುಂಬಕ್ಕೆ ಸಂಘ ಪರಿವಾರ ಹಾಗೂ ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ವತಿಯಿಂದ ವಿವಿಧ ರೂಪದಲ್ಲಿ ನೆರವು ನೀಡಿ ಶ್ಲಾಘನೆಗೆ ಪಾತ್ರವಾಗಿದೆ.
ಕೋರ್ಯ ಸೀತಾರಾಮ ಪುರುಷರವರ ಪುತ್ರಿ ಕು.ಸೌಮ್ಯ ತನ್ನ ಡಿ.ಎಡ್. ಪದವಿ ಮುಗಿಸಿ ಕೆಲಸಕ್ಕಾಗಿ ಸಂದರ್ಶನ ಎದುರಿಸಿ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಕೊಲೆಯಾಗಿದ್ದಳು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಸಿಬಿಐ ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂದು ಸೌಮ್ಯ ಪಾಲಕರು ಒತ್ತಾಯಿಸುತ್ತಿದ್ದಾರೆ.
ಸೌಮ್ಯಳ ಕುಟುಂಬಕ್ಕೆ ಆಕೆಯ ತಾಯಿ ಮತ್ತು ಮೂವರು ಮಕ್ಕಳ ಹೆಸರಿನಲ್ಲಿ ತಲಾ 25,000 ರೂ.ನಂತೆ ರೂ.1,00,000/- ಮೊತ್ತವನ್ನು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ವತಿಯಿಂದ ಠೇವಣಿ ಇಡಲಾಗಿದೆ. ಅಲ್ಲದೆ ಶ್ರೀರಾಮ ವಿದ್ಯಾಕೇಂದ್ರ ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದು, ಆ ಮಕ್ಕಳ ವಿದ್ಯಾಭ್ಯಾಸದ ಪೂರ್ಣ ಖರ್ಚನ್ನು ಭರಿಸಲಿದೆ. ಹಾಗೆಯೇ ಬಿ.ಜೆ.ಪಿ.ಯ ನಾಯಕರು ಸೌಮ್ಯಳ ಮನೆ ನಿರ್ಮಾಣಕ್ಕೆ ರೂ. 2,00,000 ನೆರವು ನೀಡಿದ್ದಾರೆ.

ದ.ಕ. ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ರವರು ವೈಯಕ್ತಿಕ ದೇಣಿಗೆ ರೂಪದಲ್ಲಿ ರೂ. 10,000 ಮತ್ತು ಗುರೂಜಿ ಸ್ವಸಹಾಯ ಸಂಘದ ವತಿಯಿಂದ ರೂ. 35,000 ವೆಚ್ಚದ ಶೌಚಾಲಯ ಕೊಠಡಿ ಹಾಗೂ ಸ್ನಾನಗೃಹ ನಿರ್ಮಾಣ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ರೂ. 80,000 ವೆಚ್ಚದಲ್ಲಿ ಮನೆಯ ವಿದ್ಯುದೀಕರಣವನ್ನು ಮಾಡಿಕೊಡುವುದರೊಂದಿಗೆ ಮಾನವೀಯತೆ ಮೆರೆದಿದ್ದಾರೆ. ಈ ಎಲ್ಲಾ ನೆರವನ್ನು ನೀಡಿದ ಸಂಘ ಪರಿವಾರದ ಹಿರಿಯರಿಗೆ ಕೋರ್ಯ ಸೀತಾರಾಮ ಪುರುಷರವರು ಕೃತಜ್ಞತೆ ಸಲ್ಲಿಸಿದ್ದಾರೆ.
ಇದೀಗ ಪೂರ್ಣಗೊಂಡಿರುವ ಮನೆಯ ಬೀಗದಕೈಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸೌಮ್ಯಳ ಕುಟುಂಬಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬಂಟ್ವಾಳ ಕ್ಷೇತ್ರ ಸಮಿತಿ ಬಿಜೆಪಿ ಅಧ್ಯಕ್ಷ ಜಿ.ಆನಂದ, ಪ್ರಧಾನ ಕಾರ್ಯದರ್ಶಿ ರಾಮ್ದಾಸ್ ಬಂಟ್ವಾಳ, ಜಿ.ಪಂ.ಸದಸ್ಯರಾದ ಚೆನ್ನಪ್ಪ ಕೊಟ್ಯಾನ್, ಸತೀಶ್ ಕುಂಪಲ, ತಾ.ಪಂ.ಸದಸ್ಯ ದಿನೇಶ್ ಅಮ್ಟೂರು, ಮಾಜಿ ಸದಸ್ಯ ಪುರುಷ ಸಾಲ್ಯಾನ್, ರಜಾಕ್, ಅಣ್ಣಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.












Click it and Unblock the Notifications