ಚುನಾವಣೆ ಹಿನ್ನೆಲೆ 7 ಬಾರಿ ರಾಜ್ಯ ಪ್ರವಾಸ; ಮೋದಿ ಟೂರ್ ಡೀಲ್, ರಾಜ್ಯ ಬಿಜೆಪಿ ಸರಕಾರದ ಹೊಸ ಭ್ರಷ್ಟಾಚಾರ: ಡಿ.ಕೆ. ಸುರೇಶ್ ಆರೋಪ
ಬೆಂಗಳೂರು,ಮಾರ್ಚ್ 31: ಪ್ರಧಾನಿ ನರೇಂದ್ರ ಮೋದಿ ಅವರು ಮಾತೆತ್ತಿದರೆ ನಾ ಖಾವೂಂಗಾ, ನಾ ಖಾನೇದೂಂಗ ಎಂದು ಹೇಳುತ್ತಾರೆ. ಆದರೆ ಅವರ ಪ್ರವಾಸದ ಹೆಸರಲ್ಲಿ ರಾಜ್ಯ ಬಿಜೆಪಿ ನಾಯಕರು ಮೋದಿ ಟೂರ್ ಡೀಲ್ ನಡೆಸಿದ್ದಾರೆ. ಇದರಲ್ಲಿ 40 % ಅಲ್ಲ 300 % ಲೂಟಿ ಮಾಡಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು 7 ಬಾರಿ ರಾಜ್ಯ ಪ್ರವಾಸ ಮಾಡಿದ್ದು, ಅವರ ಈ ಪ್ರವಾಸದ ಕಾರ್ಯಕ್ರಮಗಳಲ್ಲಿ ಬಿಜೆಪಿ ನಾಯಕರು ಕೋಟಿ, ಕೋಟಿ ಲೂಟಿ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೆಂಪೇಗೌಡ ಪ್ರತಿಮೆ ವೆಚ್ಚ 59 ಕೋಟಿ. ಉದ್ಘಾಟನೆ ಕಾರ್ಯಕ್ರಮಕ್ಕೆ ಸರ್ಕಾರ 30 ಕೋಟಿ ರೂ. ಖರ್ಚು ಮಾಡಿ, ಲೂಟಿ ಹೊಡೆದಿದೆ.

ರಾಜ್ಯದ ಇತರ ಭಾಗಗಳ ಕಾರ್ಯಕ್ರಮಗಳಲ್ಲಿ ಎಷ್ಟು ಲೂಟಿ ಮಾಡಲಾಗಿದೆಯೋ? ಮೋದಿ ಅವರ ಸರ್ಕಾರಿ ಕಾರ್ಯಕ್ರಮಗಳಿಗೆ ಆಗಿರುವ ವೆಚ್ಚದ ಬಗ್ಗೆ ಮಾಧ್ಯಮಗಳು ಹಾಗೂ ಆರ್ಟಿಐ ಕಾರ್ಯಕ್ರತರು ಮಾಹಿತಿ ಹೊರತೆಗೆಯಬೇಕು ಎಂದು ಕರೆ ನೀಡಿದ ಅವರು, ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಪ್ರಧಾನ ಮಂತ್ರಿಗಳು, ಬಿಜೆಪಿ ರಾಷ್ಟ್ರೀಯ ನಾಯಕರು ದಂಡಯಾತ್ರೆ ಮಾಡುತ್ತಿದ್ದಾರೆ. ಈಗಾಗಲೇ ಪ್ರಧಾನಿಗಳು 7 ಬಾರಿ ರಾಜ್ಯಕ್ಕೆ ಬಂದಿದ್ದಾರೆ.
ಸರ್ಕಾರದಿಂದ ಪ್ರಧಾನಮಂತ್ರಿಗಳ ಪ್ರವಾಸದ ಡೀಲ್ ನಡೆಯುತ್ತಿದೆ. ಇದು 40% ಅಲ್ಲ 200% ಡೀಲ್ ನಡೆಯುತ್ತಿದೆ. ಪ್ರದಾನಿಗಳು ಇಲ್ಲಿ ತಕ್ಕಡಿ ಏಳಿಸಲು ರಾಜ್ಯಕ್ಕೆ ಆಗಮಿಸುತ್ತಿದ್ದರೆ, ಅವರ ಪ್ರವಾಸದ ಹೆಸರು ಹೇಳಿಕೊಂಡು ಬಿಜೆಪಿ ಸರ್ಕಾರ ಡೀಲ್ ಮಾಡುತ್ತಿದೆ. ಪ್ರಧಾನಮಂತ್ರಿಗಳು ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ಬಂದಾಗ ಇವರಿಗೆ ಕೆಂಪೇಗೌಡರ ಮೇಲೆ ಅಭಿಮಾನವಿದೆ ಎಂದು ಭಾವಿಸಿದ್ದೆವು. ಆದರೆ ಇವರು ಕೆಂಪೇಗೌಡರ ಹೆಸರಲ್ಲಿ ಡೀಲ್ ಮಾಡಿದ್ದಾರೆ ಎಂದು ಕಿಡಿಕಾರಿದರು.

ಕೇವಲ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ 30 ಕೋಟಿ ಬಿಲ್ ಮಾಡಿದ್ದಾರೆ. ಒಂದು ಕಾರ್ಯಕ್ರಮಕ್ಕೆ ಇಷ್ಟಾದರೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಮಂತ್ರಿಗಳ ಪ್ರವಾಸ ಹೆಸರಲ್ಲಿ ಎಷ್ಟು ಲೂಟಿ ಮಾಡಲು ಇವರು ಸಜ್ಜಾಗಿದ್ದಾರೆ. ಯಾರಿಗೂ ತಿನ್ನಲು ಬಿಡುವುದಿಲ್ಲ ಎಂದ ಪ್ರಧಾನಿ ಹೆಸರಿನಲ್ಲೇ ಲೂಟಿ ಮಾಡಿದ್ದಾರೆ. ಏರ್ ಪೋರ್ಟ್ ರಸ್ತೆ ಅಭಿವೃದ್ಧಿ ಮಾಡಲು ಅದು ರಾಜ್ಯ ಸರ್ಕಾರ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಅದಕ್ಕೆ 8.50 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಈ ರಸ್ತೆ ಎಂದಾದರೂ ಗುಂಡಿ ಬಿದ್ದಿತ್ತಾ? ಪ್ರಧಾನಮಂತ್ರಿಗಳು ಆ ರಸ್ತೆಯಲ್ಲಿ ಸಂಚಾರ ಮಾಡಿದರಾ? ಎಂದು ಪ್ರಶ್ನಿಸಿದರು.
ಎಲ್ಲೆಲ್ಲಿ ಪ್ರಧಾನಿಗಳು ಭೇಟಿ ನೀಡಿದ್ದಾರೆ, ಅಲ್ಲಿನ ಕಚೇರಿಗಳ ಬಾಗಿಲು ತಟ್ಟಿ ಎಷ್ಟು ಖರ್ಚು ಮಾಡಿದ್ದಾರೆ ಎಂದು ಪರಿಶೀಲಿಸಿ. ಇದು ಕೇವಲ ಪ್ರಧಾನಿ ಅವರ ಹೆಸರಲ್ಲಿ ಆಗಿರುವ ಲೂಟಿ. ಇನ್ನು ಅಮಿತ್ ಶಾ ಅವರ ಹೆಸರಲ್ಲಿ ಎಷ್ಟು ಲೂಟಿ ಮಾಡಿದ್ದಾರೋ ಗೊತ್ತಿಲ್ಲ. ಅಮಿತ್ ಶಾ ಅವರು 9 ಬಾರಿ ಬಂದಿದ್ದಾರೆ. ಪ್ರಧಾನಮಂತ್ರಿಗಳ ದಾವಣಗೆರೆ ಕಾರ್ಯಕ್ರಮಕ್ಕೆ ನಳೀನ್ ಕುಮಾರ್ ಕಟೀಲ್ ಅವರು ಎಷ್ಟು ಖರ್ಚು ಮಾಡಿದ್ದರು? ಇಲ್ಲಿ ಯಾಕೆ 30 ಕೋಟಿ ಬಿಲ್ ಮಾಡಿದ್ದಾರೆ? ಪ್ರಧಾನಮಂತ್ರಿಗಳು ಎಂಬ ಕಾರಣಕ್ಕೆ ಇವರ ಕಮಿಷನ್ ಪರ್ಸೆಂಟೇಜ್ ಹೆಚ್ಚಾಯ್ತಾ? ಚುನಾವಣಾ ಪ್ರಚಾರಕ್ಕೆ ಪರ್ಸೆಂಟೇಜ್ ಹೆಚ್ಚಾಯ್ತಾ?

ಕೆಂಪೇಗೌಡ ಪ್ರತಿಮೆಗೆ 58 ಕೋಟಿ ಖರ್ಚಾಗದ್ದು, ಉದ್ಘಾಟನೆಗೆ 30 ಕೋಟಿ ಖರ್ಚು ಮಾಡಿದ್ದಾರೆ. ಇವರು ಪ್ರತಿಮೆ ಮಾಡುತ್ತಿರುವುದೇ ಈ ರೀತಿ ಲೂಟಿ ಮಾಡಲು. ರಾಜ್ಯದ ಮಹನೀಯರ ಪ್ರತಿಮೆ ಹೆಸರಲ್ಲಿ ಬಿಜೆಪಿ ಸರ್ಕಾರ ಲೂಟಿ ಮಾಡುತ್ತಿದೆ. ಮಾಧ್ಯಮಗಳು ಈ ವಿಚಾರವಾಗಿ ತನಿಖೆ ಮಾಡಬೇಕು. ರಾಜ್ಯದ ಎಲ್ಲ ಕಡೆ ಕಾರ್ಯಕ್ರಮಗಳಲ್ಲಿ ಎಷ್ಟೆಷ್ಟು ಲೂಟಿ ಮಾಡಿದ್ದಾರೆ ಎಂದು ದಾಖಲೆ ಪಡೆಯಿರಿ ಎಂದು ಆರ್ ಟಿಐ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ.'
ಈ ಸಂದರ್ಭದಲ್ಲಿ ಬಿಜೆಪಿಯವರು ಒಕ್ಕಲಿಗರನ್ನು ಬಿಜೆಪಿಯವರು ಟಾರ್ಗೆಟ್ ಮಾಡುತ್ತಿದ್ದು, ಒಕ್ಕಲಿಗ ಸಮುದಾಯ ಅವರ ಜತೆ ಹೋಗುತ್ತದಾ ಎಂದು ಮಾಧ್ಯಮಗಳು ಕೇಳಿದಾಗ, 'ಕೆಂಪೇಗೌಡರ ಹೆಸರಲ್ಲಿ ಇವರು ಎಷ್ಟು ಲೂಟಿ ಮಾಡಿದ್ದಾರೆ ಎಂಬುದನ್ನು ಮಾಹಿತಿ ನೀಡಿದ್ದೇನೆ. ಒಕ್ಕಲಿಗರಲ್ಲ ಯಾವುದೇ ಸಮುದಾಯದವರು ಕೂಡ ಬಿಜೆಪಿಯವರ ಜತೆ ಹೋಗುವುದಿಲ್ಲ. ರಾಜ್ಯದ ಇತಿಹಾಸದಲ್ಲೇ ಇಷ್ಟು ದೊಡ್ಡ ಭ್ರಷ್ಟಾಚಾರ ನಡೆದಿರಲಿಲ್ಲ. ಅವರು ಪ್ರತಿ ಹುದ್ದೆಗಳಿಗೆ ಹಣ ನಿಗದಿ ಮಾಡಿದ್ದಾರೆ ಎಂದು ಹೇಳಿದರು.












Click it and Unblock the Notifications