Basanagouda Yatnal: ಬಜೆಟ್ ಎರಡು ಗಂಟೆ ನೀರು ಕುಡಿದು ಕುಡಿದು ಓದೋದು ಅಷ್ಟೇ.. ನಿರೀಕ್ಷೆ ಏನೂ ಇಲ್ಲ- ಯತ್ನಾಳ್ ವ್ಯಂಗ್ಯ
ಬೆಂಗಳೂರು ಮಾರ್ಚ್ 5: ಮಾರ್ಚ್ 7ರಂದು ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ರಾಜ್ಯದಲ್ಲಿ ಈ ಬಾರಿ ಬಜೆಟ್ ಬಗ್ಗೆ ಹಲವಾರು ನಿರೀಕ್ಷೆಗಳು ಇವೆ. ಆದರೆ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಬಜೆಟ್ನಲ್ಲಿ ಯಾವುದೇ ನಿರೀಕ್ಷೆ ಇಲ್ಲ ಎಂದಿದ್ದಾರೆ.
ಹೌದು.. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, 'ನಮ್ಮ ರಾಜ್ಯದ ದೊಡ್ಡ ಸಮಸ್ಯೆ ಕೃಷ್ಣಾ ನೀರಾವರಿ. ನೀರಾವರಿ ಯೋಜನೆಗೆ ಹಣ ಕೊಟ್ಟಿಲ್ಲ. ಸುಮಾರು ಒಂದು ಲಕ್ಷ ಕೋಟಿಗಿಂತಲೂ ಹೆಚ್ಚು ಹಣ ಬೇಕು. ಕೇವಲ ಗ್ಯಾರಂಟಿಯಿಂದಲೇ ಸರ್ಕಾರ ದಿವಾಳಿಯಾಗಿದೆ. ಯಾವುದೇ ಅಭಿವೃದ್ಧಿ ಕಾಮಗಾರಿಗಳೂ ನಡೆಯುತ್ತಿಲ್ಲ. ಹೀಗಿರುವಾಗ ನಾವು ಆ ಬಜೆಟ್ ನಲ್ಲಿ ನಿರೀಕ್ಷೆ ಇಡುವುದು ಏನಿದೆ?' ಎಂದು ಮರುಪ್ರಶ್ನೆ ಮಾಡಿದ್ದಾರೆ.

'ಕಳೆದ ಬಾರಿ ನಮಗೆ ಬಿಜಾಪುರ ವೈನ್ ಪಾರ್ಕಿಗೆ ನೂರು ಕೋಟಿ ರೂಪಾಯಿ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದರು. ಒಂದು ರೂಪಾಯಿ ಕೊಡಲಿಲ್ಲ. ಅಂದರೆ ಬಜೆಟ್ ಸುಮ್ಮನೆ ಒಂದು ಎರಡು ಗಂಟೆ ನೀರು ಕುಡಿದು ಕುಡಿದು ಓದೋದು ಅಷ್ಟೆ. ಇದರಿಂದ ಕರ್ನಾಟಕಕ್ಕೆ ಏನೋ ಆಗುತ್ತೆ ಅನ್ನೋ ನಿರೀಕ್ಷೆ ನಾವೇನು ಇಟ್ಟಿಲ್ಲ' ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಕಡೆಯ ಬಜೆಟ್?
ಇನ್ನೂ ಕಾಂಗ್ರೆಸ್ನಲ್ಲಿನ ಒಳಜಗಳನ್ನು ನೋಡುವುದಾದರೆ ಸಿದ್ದರಾಮಯ್ಯ ಅವರ ಕಡೆಯ ಬಜೆಟ್ ಇದಾಗುತ್ತದೆ ಎನ್ನುವ ಲಕ್ಷಣಗಳು ಕಾಣಿಸುತ್ತಿವೆ. ಅಕ್ಟೋಬರ್ ಗೆ ಅವರ ಅಧಿಕಾರ ಅವಧಿ ಅಂತ್ಯ ಆಗುತ್ತೆ. ಡಿಕೆ ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಅನ್ನೋ ವಿಚಾರಗಳ ಚರ್ಚೆಯ ಬಗ್ಗೆ ಮಾತನಾಡಿದ ಯತ್ನಾಳ್, 'ಅದು ಅವರ ಪಕ್ಷದ ವಿಚಾರ. ಆದರೆ ನನಗೆ ಡಿಕೆ ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಎಂದು ಅನಿಸುವುದಿಲ್ಲ' ಎಂದಿದ್ದಾರೆ.
'ಡಿಕೆ ಶಿವಕುಮಾರ್ ಅವರು ಮಹಾಕುಂಭ ಮೇಳ, ಹಲವಾರು ದೇವಸ್ಥಾನ ಸುತ್ತಾಡುತ್ತಿದ್ದಾರೆ. ಆದರೆ ಅವರಿಗೆ ಅಧಿಕಾರ ಸಿಗೋವರೆಗೂ ನಮ್ಮ ಹಿಂದೂ ದೇವರು ಬೇಕು, ಅಧಿಕಾರ ಸಿಕ್ಕ ಬಳಿಕ ಸಾಬರು ಅಧಿಕಾರ ಮಾಡುತ್ತಾರೆ. ಹೀಗಾಗಿ ನಮ್ಮ ದೇವರು ಒಲಿಯೋದಿಲ್ಲ' ಎಂದು ಯತ್ನಾಳ್ ಕಿಡಿ ಕಾರಿದ್ದಾರೆ.
'ಈಗ ಎಲ್ಲರೂ ದೇಶದಲ್ಲಿ ಹಿಂದುತ್ವ ಜಪ ಮಾಡುತ್ತಿದ್ದಾರೆ. ಆಮ್ ಆದ್ಮಿ ಪಾರ್ಟಿಯವರೂ ಕೂಡ ದೆಹಲಿಯಲ್ಲಿ ಹಿಂದುತ್ವ ಜಪ ಮಾಡಿದ್ದರು. ರಾಜ್ಯದಲ್ಲಿ ಇವರೂ ಮಾಡುತ್ತಿದ್ದಾರೆ. ನಾಟಕ ಮಾಡುವವರಿಗೆ ದೇವರು ಒಮ್ಮೆಲೇ ಅಸ್ತು ಅನ್ನುವುದಿಲ್ಲ' ಎಂದು ಕುಟುಕಿದ್ದಾರೆ.
'ಬಿಜೆಪಿಗೆ ಡಿಕೆ ಶಿವಕುಮಾರ್ ಬರಲ್ಲ'
ಅಮಿತ್ ಶಾ ಅವರೊಂದಿಗೆ ಡಿಕೆ ಶಿವಕುಮಾರ್ ಅವರು ಒಟ್ಟಿಗೆ ಕುಳಿತ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ಗೆ ಬ್ಲಾಕ್ ಮೇಲೆ ಮಾಡಲು ಕುಳಿತುಕೊಂಡಿದ್ದರು. ಬಿಜೆಪಿ ಸೇರಲು ಅಲ್ಲ. ಹುಷಾರ್ ನನ್ನನ್ನು ಸಿಎಂ ಮಾಡದೇ ಇದ್ದರೆ ನಾನು ಬಿಜೆಪಿಗೆ ಹೋಗುತ್ತೇನೆ ಎಂದು ಸಂಕೇತ ಕೊಡಲು ಬಂದಿದ್ರು ಅಷ್ಟೆ. ನಾವೇನ್ ಅವರನ್ನು ಪಕ್ಷಕ್ಕೆ ತೆಗೆದುಕೊಳ್ಳುವುದಿಲ್ಲ. ಅವರನ್ನ ತೆಗೆದುಕೊಂಡರೆ ನಮ್ಮ ಪರಿಸ್ಥಿತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ ಯತ್ನಾಳ್.
ಭ್ರಷ್ಟಕುಟುಂಬದ ವಿರುದ್ಧ ನಮ್ಮ ಹೋರಾಟ ನಿರಂತರ
ರಾಜ್ಯಾಧ್ಯಕ್ಷ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಯತ್ನಾಳ್ ಭ್ರಷ್ಟ ಕುಟುಂಬದ ವಿರುದ್ಧ ನಮ್ಮ ಹೋರಾಟ ಯಾವಾಗಲೂ ಇರುತ್ತದೆ. ನಾನು ಯಾರಿಗೂ ಬೆದರಿಲ್ಲ. ಯಾರಿಗೂ ಅಂಜಲ್ಲ. ಕುಟುಂಬ ರಾಜಕಾರಣದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಇರುತ್ತದೆ ಎಂದು ಯತ್ನಾಳ್ ಹೇಳಿದ್ದಾರೆ.












Click it and Unblock the Notifications