'ಮೊದಲು ಇವುಗಳ ವಿರುದ್ಧ ಹೋರಾಡಿ': ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ಸಲಹೆ
ಬೆಂಗಳೂರು, ಏಪ್ರಿಲ್ 03: ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಬಿಜೆಪಿ ನಾಯಕರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರ ಈ ಹೋರಾಟದ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಬಿಜೆಪಿ ನಾಯಕರು ಯಾವ ಸಮಸ್ಯೆ ವಿರುದ್ಧ ಮೊದಲು ಪ್ರತಿಭಟಿಸಬೇಕು ಎಂದು ಸಲಹೆ ನೀಡಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸವಿವರವಾಗಿ ಬರೆದುಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಬೆಲೆ ಏರಿಕೆಯ ಸಮಸ್ಯೆಗೆ ಮೂಲ ಕಾರಣೀಕರ್ತರ ಬಗ್ಗೆ ಬಿಜೆಪಿ ಪ್ರತಿಭಟಿಸುವುದಾದರೆ ನಾವೂ ಬೆಂಬಲಿಸುತ್ತೇವೆ. ದೇಶದ ಎಲ್ಲಾ ಬೆಲೆಗಳ ಏರಿಕೆಯ ಹಿಂದೆ ಮೋದಿಯವರ ಆರ್ಥಿಕ ಅನೀತಿಗಳ ಮಾಸ್ಟರ್ ಸ್ಟ್ರೋಕ್ಗಳ ಕಾರಣವಿದೆ ಎಂದು ಆರೋಪಿಸಿದ್ದಾರೆ.

* ಪಾಪ್ ಕಾರ್ನ್ ಮೇಲೂ ಜಿಎಸ್ಟಿ ಹೇರಿದಾಗ
* ಮಕ್ಕಳ ಪುಸ್ತಕ, ಪೆನ್ಸಿಲ್ ಗಳಲ್ಲೂ ತೆರಿಗೆ ಲೂಟಿ ಮಾಡಿದಾಗ
* 43,500 ಕೋಟಿ ಕನಿಷ್ಠ ಠೇವಣಿ ದಂಡವನ್ನು ವಸೂಲಿ ಮಾಡಿದಾಗ
* ಜೀವ ವಿಮೆಗೂ 18% ಜಿಎಸ್ಟಿ ಲೂಟಿ ಮಾಡಿದಾಗ
* ಜಿಎಸ್ಟಿ ಕಾರಣಕ್ಕಾಗಿ ಸಣ್ಣ ಉದ್ದಿಮೆಗಳು ಬಾಗಿಲು ಮುಚ್ಚಿದಾಗ, ಉದ್ಯೋಗ ಕಡಿತವಾದಾಗ ಭಾರತೀಯರ ಖರೀದಿ ಸಾಮರ್ಥ್ಯ ಕುಸಿದು, ಬದುಕು ಬರ್ಬರವಾದಾಗ ಬಿಜೆಪಿ ಸ್ನೇಹಿತರಿಗೆ ಜನಾಕ್ರೋಶ ಕಾಣಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕರಿಗೆ ನಿಜಕ್ಕೂ ಜನರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಪನೀರ್, ಮೊಸರು ಸೇರಿದಂತೆ ಎಲ್ಲಾ ಆಹಾರ ಪದಾರ್ಥಗಳ ಮೇಲಿನ ಜಿಎಸ್ಟಿ ತೆರವು ಮಾಡಿಸಲಿ. ಪೆಟ್ರೋಲ್, ಡೀಸೆಲ್ ಮೇಲಿನ ದರ ಇಳಿಸಿ ಕಚ್ಚಾ ತೈಲದ ಬೆಲೆ ಇಳಿಕೆಯ ಲಾಭವನ್ನು ಜನರಿಗೆ ವರ್ಗಾಯಿಸುವಂತೆ ಆಗ್ರಹಿಸಲಿ.

ಎಟಿಎಂ ಶುಲ್ಕ, ಕನಿಷ್ಠ ಠೇವಣಿ ದಂಡಗಳನ್ನು ತೆರವು ಮಾಡಿಸಲಿ. ಬಿಜೆಪಿಯವರು ಜನಾಕ್ರೋಶ ಪ್ರತಿಭಟನೆ ಮಾಡುವ ಮುನ್ನ ತಮ್ಮ ಆರ್ಎಸ್ಎಸ್ ಆಕ್ರೋಶದ ಬಗ್ಗೆ ಮಾತನಾಡಲಿ. ದೇಶದಲ್ಲಿನ ಆದಾಯ ಅಸಮಾನತೆ, ನಿರುದ್ಯೋಗ, ಬಡತನ, ದೂರದೃಷ್ಟಿ ಇಲ್ಲದ ಕೇಂದ್ರ ಸರ್ಕಾರದ ನೀತಿಗಳನ್ನು ಆರ್ಎಸ್ಎಸ್ ಕಟುವಾಗಿ ಟೀಕಿಸಿತ್ತು, ಈ ಬಗ್ಗೆ ಕರ್ನಾಟಕದ ಬಿಜೆಪಿ ನಾಯಕರಿಗೆ ಅರಿವಿದೆಯೇ? ಅರಿವಿಲ್ಲ ಎಂದಾದರೆ ಕೇಶವಕೃಪಾಕ್ಕೆ ತೆರಳಿ ಆರ್ಎಸ್ಎಸ್ ಆಕ್ರೋಶದ ಬಗ್ಗೆ ತಿಳಿದುಕೊಂಡು ರಾಜ್ಯದ ಜನತೆಗೆ ಉತ್ತರಿಸುವ ದಮ್ಮು ತಾಕತ್ತು ಪ್ರದರ್ಶಿಸಲಿ ಎಂದು ಆಗ್ರಹಿಸಿದ್ದಾರೆ.












Click it and Unblock the Notifications