ನೂರಾರು ಕೋಟಿ ಮೌಲ್ಯದ ಜಮೀನು ಹಗರಣ: ಯಡಿಯೂರಪ್ಪ, ಕುಮಾರಸ್ವಾಮಿಗೆ ದಿನೇಶ್ ಗುಂಡೂರಾವ್ ತರಾಟೆ
ಬೆಂಗಳೂರು, ಸೆಪ್ಟೆಂಬರ್ 17: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ವಿಚಾರ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಪ್ರಕರಣದಲ್ಲಿ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿದ್ದು, ಇದೀಗ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಬಿಡಿಎಗೆ ಸೇರಿದ ನೂರಾರು ಕೋಟಿ ಬೆಲೆಬಾಳುವ 55,000 ಚದರ ಅಡಿ ಭೂಮಿಯ ಡಿನೋಟಿಫೈ. ಒಂಭತ್ತು ವರ್ಷಗಳ ಹಿಂದೆಯೇ ಲೋಕಾಯುಕ್ತದಲ್ಲಿ ದಾಖಲಾದ ಈ ಪ್ರಕರಣದಲ್ಲಿ ಮೊದಲ ಆರೋಪಿ ಯಡಿಯೂರಪ್ಪ. ಎರಡನೇ ಆರೋಪಿ ಕುಮಾರಸ್ವಾಮಿ ಎಂದು ಸಚಿವ ದಿನೇಶ್ ಗುಂಡೂರಾವ್ ಗುಡುಗಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಈ ಜಂಟಿ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿಗಳೇ ಶಾಮೀಲಾಗಿದ್ದಾರೆ. ಒಂಭತ್ತು ವರ್ಷಗಳಿಂದ ಈ ಪ್ರಕರಣ ಲೋಕಾಯುಕ್ತದಲ್ಲಿ ಯಾಕೆ ಮೂಲೆಗುಂಪಾಗಿದೆ? ಇದರ ಹಿಂದೆ ಯಾರ ಒತ್ತಡವಿದೆ? ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
ನೂರಾರು ಕೋಟಿ ಮೌಲ್ಯದ ಜಮೀನು ಡಿನೋಟಿಫೈ ಮಾಡುವಲ್ಲಿ ಯಡಿಯೂರಪ್ಪ ಹಿಂದೆ ಇದ್ದದ್ದು ಬಿಜೆಪಿ ರಾಜ್ಯಾಧ್ಯಕ್ಷ, ಭ್ರಷ್ಟಾಚಾರದ ಪಿತಾಮಹ ವಿಜಯೇಂದ್ರ ಅವರೇ ಅಲ್ಲವೇ? ಪ್ರಕರಣದಲ್ಲಿ ಎರಡನೇ ಆರೋಪಿ ಆಗಿರುವ ಕುಮಾರಸ್ವಾಮಿ ರಾಜೀನಾಮೆ ನೀಡುವುದು ಯಾವಾಗ?ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೇಳಿದ್ದಾರೆ.

ಇನ್ನು ಮುಡಾ ಹಗರಣದಲ್ಲಿ ಬೀದಿಗಿಳಿದು ಹೋರಾಟ ಮಾಡಿದವರು, ಪಾದಯಾತ್ರೆ ಮಾಡಿದವರು ಈ ಪ್ರಕರಣದ ಬಗ್ಗೆ ಏನು ಹೇಳುತ್ತಾರೆ? ಈ ಬಗ್ಗೆ ಯಡಿಯೂರಪ್ಪ & ಕುಮಾರಸ್ವಾಮಿಯವರು ರಾಜ್ಯದ ಜನತೆಗೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಈ ಹಿಂದೆ ಈ ಬಗ್ಗೆ ಮಾತನಾಡಿದ್ದ ದಿನೇಶ್ ಗುಂಡೂರಾವ್, ಮಾನ್ಯ ಕುಮಾರಸ್ವಾಮಿಯವರೆ, ಮುಖ್ಯಮಂತ್ರಿಗಳಾಗಿದ್ದವರ ಸಹಿಯೇ ಫೋರ್ಜರಿಯಾಗುವುದನ್ನು ಪ್ರಪಂಚದ ಎಂಟನೇ ಅದ್ಭುತ ಎಂದು ಭಾವಿಸಬೇಕೆ.? ಅಥವಾ ನಿಮ್ಮ ಆಡಳಿತದಲ್ಲಿ ನಿಮ್ಮ ಸಹಿಯನ್ನೇ ಫೋರ್ಜರಿ ಮಾಡುವಷ್ಟು ಅರಾಜಕತೆಯ ಆಡಳಿತ ನಿಮ್ಮದಾಗಿತ್ತು ಎಂದು ಭಾವಿಸಬೇಕೆ ಎಂಬುದನ್ನು ದಯವಿಟ್ಟು ಹೇಳಿಬಿಡಿ. ಎಲ್ಲಾದರೂ ಮುಖ್ಯಮಂತ್ರಿಗಳ ಸಹಿ ಫೋರ್ಜರಿ ಆಗಲು ಸಾಧ್ಯವೇ.? ಈಗ ಹೇಳಿ ನಿಮ್ಮನ್ನು 'ನಕಲಿ ಶಾಮ' ಎನ್ನದೆ ಬೇರೇನು ಹೇಳಬೇಕು.? ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದರು.












Click it and Unblock the Notifications