ಗೌರಿ ಲಂಕೇಶ್ ಮೇಲೆ ಗುಂಡು ಹಾರಿಸಿದ ಶಂಕಿತ ಎಸ್ಐಟಿ ವಶಕ್ಕೆ
ಬೆಂಗಳೂರು, ಜೂನ್ 12: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಇಂದು ಎಸ್ಐಟಿ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.
ಸಿಂಧಗಿ ಮೂಲದ ಪರಶುರಾಮ್ ವಾಗ್ಮೋರೆ (26) ಎಂಬಾತನನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದು, 3ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನನ್ನು ವಿಚಾರಣೆಗೆ 14 ದಿನಗಳ ಕಾಲ ಎಸ್ಐಟಿಯ ವಶಕ್ಕೆ ನೀಡಿದೆ.
ಗೌರಿ ಲಂಕೇಶ್ ಹಂತಕ ಕರ್ನಾಟಕ ಪೊಲೀಸರ ಸೆರೆಯಲ್ಲಿ?
ಪರಶುರಾಮ್ ವಾಗ್ಮೋರೆಯೇ ಗೌರಿ ಲಂಕೇಶ್ ಅವರ ಮೇಲೆ ಗುಂಡು ಹಾರಿಸಿದ್ದು, ಎನ್ನಲಾಗಿದ್ದು ಈತನನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ. ಈತನ ಚಹರೆ ಗೌರಿ ಹಂತಕನೊಂದಿಗೆ ಹೋಲುತ್ತಿದ್ದು, ಬಂಧಿಸಿದ ಸಮಯದಲ್ಲಿ ಆತನ ಬಳಿ ಯಾವುದೇ ಆಯುಧಗಳಿರಲಿಲ್ಲ ಎಂದು ಎಸ್ಐಟಿ ಹೇಳಿದೆ.
ಪರಶುರಾಮ್ನು ಸಿಂಧಗಿಯಲ್ಲಿ ಆರು ವರ್ಷದ ಹಿಂದೆ ತಹಿಶೀಲ್ದಾರ್ ಕಚೇರಿ ಎದುರು ಧ್ವಜ ಹಾರಿಸಿದ್ದ ಪ್ರಕರಣದಲ್ಲಿ ಆರನೇ ಆರೋಪಿ ಆಗಿದ್ದ ಎನ್ನಲಾಗಿದೆ. ಆದರೆ ಆ ಪ್ರಕರಣದ ನಂತರ ಆತ ಬಹಿರಂಗವಾಗಿ ಹೆಚ್ಚಿಗೆ ಕಾಣಿಸಿಕೊಂಡಿಲ್ಲ. ಸಿಂಧಗಿಯಲ್ಲಿ ಕಂಪ್ಯೂಟರ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ.
ಇದೇ ಸಮಯದಲ್ಲಿ ಮತ್ತೊಬ್ಬ ಆರೋಪಿ ಸುನಿಲ್ ಅಗಸರ ಎಂಬಾತನನ್ನೂ ಎಸ್ಐಟಿ ವಶಕ್ಕೆ ಪಡೆದಿರುವ ಶಂಕೆ ಇದ್ದು. ಆತನನ್ನು ಜೂನ್ 10ರಂದೇ ಬಂಧಿಸಲಾಗಿದೆ ಎನ್ನಲಾಗಿದೆ.
ಗೌರಿ ಲಂಕೇಶ್ ಅವರನ್ನು ಕಳೆದ ವರ್ಷ ಸೆಪ್ಟೆಂಬರ್ 05ರಂದು ರಾಜರಾಜೇಶ್ವರಿ ನಗರದ ಅವರ ನಿವಾಸದ ಬಳಿಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಎಸ್ಐಟಿ ವಹಿಸಿಕೊಂಡಿದೆ.
ಎಸ್ಐಟಿಯು ಮೊದಲಿಗೆ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಎಂಬಾತನನ್ನು ಬಂಧಿಸಿತ್ತು. ಆ ನಂತರ ಭಗವಾನ್ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಮೂರು ಜನರನ್ನು ಬಂಧಿಸಿತ್ತು ಕೊನೆಗೆ ಇವರೇ ಗೌರಿ ಹತ್ಯೆಯನ್ನೂ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿ ತನಿಖೆ ಮಾಡಲಾಗುತ್ತಿದೆ.