ರಾಜ್ಯ ರಾಜಕೀಯದಲ್ಲಿ ಆಗಲಿದೆಯೇ ಮತ್ತೊಂದು ಮಹಾ ಮೈತ್ರಿ?
ಶೀಘ್ರದಲ್ಲೇ ನಡೆಯಲಿರುವ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣಾ ಫಲಿತಾಂಶವು, ಮುಂದಿನ ವರ್ಷದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಮೈತ್ರಿ ಏರ್ಪಡಲು ಸಹಾಯ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು, ಮಾರ್ಚ್ 20: ಮುಂದಿನ ತಿಂಗಳ 9ರಂದು ನಡೆಯಲಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಗಳ ನಂತರ, ರಾಜ್ಯ ರಾಜಕಾರಣದಲ್ಲಿ ಮಹತ್ವದ ಮಹಾ ಮೈತ್ರಿಯೊಂದು ರೂಪುಗೊಳ್ಳಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೌದು. 2018ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಾಗೂ ಜೆಡಿಎಸ್ ಪಕ್ಷಗಳು ಪರಸ್ಪರ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಒಟ್ಟಿಗೆ ಚುನಾವಣೆ ಎದುರಿಸಲಿವೆ ಎಂದ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದು, ರಾಜಕೀಯಾಸಕ್ತರಲ್ಲಿ ಭಾರೀ ಕುತೂಹಲ ಹುಟ್ಟುಹಾಕಿವೆ.[ನಾಮಪತ್ರ ಸಲ್ಲಿಕೆ: ಚಿತ್ರಗಳಲ್ಲಿ ಉಪಚುನಾವಣೆ ರಂಗು]
ತರಲಿದೆ ಭಾರೀ ಬದಲಾವಣೆ
ಸದ್ಯಕ್ಕಿರುವ ಉಪ ಚುನಾವಣೆಗಳು, ಕಾಂಗ್ರೆಸ್ ಹಾಗೂ ಬಿಜೆಪಿ ಪಾಲಿಗೆ ಇವರೆಡೂ ಪ್ರತಿಷ್ಠೆಯ ಕಣಗಳಾಗಿ ರೂಪುಗೊಂಡಿವೆ. ರಾಜ್ಯ ಮಾತ್ರವಲ್ಲ, ರಾಷ್ಟ್ರಮಟ್ಟದ ನಾಯಕರೂ ಈ ಚುನಾವಣೆಯನ್ನು ದೂರದಿಂದಲೇ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಹಾಗಾಗಿ, ಈ ಚುನಾವಣೆಗಳು ಇಡೀ ರಾಜ್ಯದ ಜನತೆಯ ಗಮನ ಸೆಳೆದಿವೆ. ಈ ಚುನಾವಣಾ ಫಲಿತಾಂಶವು ಮುಂದಿನ ರಾಜಕೀಯ ಬದಲಾವಣೆಗಳೆ ನಾಂದಿ ಹಾಡಲಿದೆ ಎಂದು ಹೇಳಲಾಗಿದೆ.
ಮೈತ್ರಿಯಾದರೆ, ಕಾಂಗ್ರೆಸ್ ಗೇನು ಲಾಭ?
ಕಾಂಗ್ರೆಸ್ ಪಕ್ಷಕ್ಕೆ ಈ ಎರಡೂ ಉಪ ಚುನಾವಣೆಗಳು ಪ್ರತಿಷ್ಠಿತ ವಿಚಾರವಾಗಿದೆ. ಏಕೆಂದರೆ, ಪ್ರಾಂತ್ಯಗಳಲ್ಲಿ ಪ್ರಭಾವಿ ನಾಯಕ ವಿ. ಶ್ರೀನಿವಾಸ್ ಪ್ರಸಾದ್ ಅವರನ್ನು ಪಕ್ಷದಿಂದ ಕಳೆದುಕೊಂಡ ನಂತರ ಈ ಕ್ಷೇತ್ರದಲ್ಲಿ ಅದು ಗೆಲ್ಲಲೇ ಬೇಕಿರುವ ಒತ್ತಡದಲ್ಲಿ ಸಿಲುಕಿದೆ. ಹಾಗಾನೇದರೂ ಈ ಚುನಾವಣೆಯ ಫಲಿತಾಂಶವು ಕಾಂಗ್ರೆಸ್ ಪಕ್ಷದ ವಿರುದ್ಧ ಬಂದರೆ, ಮುಂದಿನ ಚುನಾವಣೆಗೆ ಇದು ಎಚ್ಚರಿಕೆ ಗಂಟೆಯಾಗಿ ಪರಿಣಮಿಸಲಿದೆ. ಹಾಗಾಗಿ, ಮೈತ್ರಿ ಅನಿವಾರ್ಯವಾಗಲಿದೆ ಎಂದು ಹೇಳಲಾಗಿದೆ.[ನಾಮಪತ್ರ ಸಲ್ಲಿಕೆ ವೇಳೆ ಮಾತಿನ ಚಕಮಕಿ-ಲಘುಲಾಠಿ ಪ್ರಹಾರ]
ಮೈತ್ರಿಯಾದರೆ, ಜೆಡಿಎಸ್ ಗೇನು ಲಾಭ?
ಅತ್ತ, ಜೆಡಿಎಸ್ ಪಕ್ಷವು ಈ ಎರಡೂ ಉಪ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿಲ್ಲ. ಇದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳುವ ಇರಾದೆಯನ್ನು ಪಕ್ಷ ಹೊಂದಿದೆ ಎಂಬುದರ ಮುನ್ಸೂಚನೆ ಎಂದು ಹೇಳಲಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆ ಸ್ಪಷ್ಟ ಬಹುಮತ ಬರುವುದು ಬಹುತೇಕ ಅಸಾಧ್ಯವಿರುವುದರಿಂದ ಈಗಾಗಲೇ ಸತತ 10 ವರ್ಷಗಳ ಕಾಲ ಅಧಿಕಾರದಿಂದ ದೂರ ಉಳಿದಿರುವ ಜೆಡಿಎಸ್, ಕಾಂಗ್ರೆಸ್ ಜತೆ ಕೈ ಜೋಡಿಸಿದರೆ, ಮುಂದಿನ ಚುನಾವಣೆಯಲ್ಲಿ ಅನುಕೂಲವಾಗಬಹುದು ಎಂದು ಹೇಳಲಾಗುತ್ತಿದೆ.
ನಾಯಕರೊಬ್ಬರ ನಕಾರಾತ್ಮಕ ವರಸೆ
ರಾಜಕೀಯ ವಲಯದಲ್ಲಿ ಎದ್ದಿರುವ ಈ ಮೈತ್ರಿ ಊಹಾಪೋಹಗಳನ್ನು ಕಾಂಗ್ರೆಸ್ ಪಕ್ಷವು ತಳ್ಳಿಹಾಕಿದೆ. ಒನ್ ಇಂಡಿಯಾದೊಂದಿಗೆ ಮಾತನಾಡಿರುವ ಎಐಸಿಸಿಯ ಹಿರಿಯ ನಾಯಕರೊಬ್ಬರು, ''ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡ ಇತಿಹಾಸವೇ ಇಲ್ಲ. ಯಾವುದೇ ಕಾರಣಕ್ಕೂ ನಾವು ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡುವುದಿಲ್ಲ'' ಎಂದು ತಿಳಿಸಿದ್ದಾರೆ.[ರಂಗೇರಿದೆ ಕಣ: ಘಟಾನುಘಟಿಗಳಿಂದ ನಾಮಪತ್ರ ಸಲ್ಲಿಕೆ]
ಗೆದ್ದೇ ಗೆಲ್ಲುತ್ತೇವೆಂಬ ವಿಶ್ವಾಸ
ಇತ್ತ, ಬಿಜೆಪಿಯ ನಾಯಕರೊಬ್ಬರು, ಕಾಂಗ್ರೆಸ್-ಜೆಡಿಎಸ್ ನಡುವಿನ ಮಹಾ ಮೈತ್ರಿಯ ಬಗ್ಗೆ ಉತ್ತರ ನೀಡಿದ್ದು, ''ಚುನಾವಣೆಯಲ್ಲಿ ಯಾರಿಗೆ ಸೋಲುತ್ತೇವೆ ಎಂಬ ಭಯ ಇರುತ್ತದೆಯೋ, ಅವರು ಮಾತ್ರ ಮೈತ್ರಿಯ ಲೆಕ್ಕಾಚಾರ ಮಾಡುತ್ತಾರೆ. ಆದರೆ, ಬಿಜೆಪಿಯ ವಿಚಾರ ಹಾಗಿಲ್ಲ. ಬಿಜೆಪಿಯು ಮುಂದಿನ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತದೆ ಎಂಬ ಲೆಕ್ಕಾಚಾರದಲ್ಲಿದೆ. ಹಾಗಾಗಿ, ನಮಗೆ ಮೈತ್ರಿಯ ಆಲೋಚನೆಯಿಲ್ಲ. ಇನ್ನು, ಉಪಚುನಾವಣೆಗಳಲ್ಲಿ ಜೆಡಿಎಸ್ ಸ್ಪರ್ಧಿಸದಿರುವುದು ಕಾಂಗ್ರೆಸ್ ಜತೆ ಮೈತ್ರಿಯ ಮುನ್ಸೂಚನೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ''ಉಪಚುನಾವಣೆಗಳಲ್ಲಿ ಜೆಡಿಎಸ್ ಸ್ಪರ್ಧಿಸದಿರಲು ಆ ಪಕ್ಷಕ್ಕೆ ಸೂಕ್ತ ಅಭ್ಯರ್ಥಿಗಳು ಸಿಗದಿರುವ ಕಾರಣವಿರಬಹುದು. ಆದರೆ, ಇದು ಮೈತ್ರಿಯ ಮುನ್ಸೂಚನೆಯಂತೂ ಖಂಡಿತವಲ್ಲ ಎಂದು ಅನ್ನಿಸುತ್ತದೆ'' ಎಂದು ತಿಳಿಸಿದ್ದಾರೆ.