ಮಹಾದಾಯಿ: ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹ
ಬೆಂಗಳೂರು, ಜನವರಿ 27: "ಮಹಾದಾಯಿ ವಿಚಾರವಾಗಿ ಸರ್ವಪಕ್ಷ ಸಭೆ ನಡೆಸಲಾಗಿದೆ. ಬಿಜೆಪಿ ಹೊರತುಪಡಿಸಿ ಉಳಿದವರೆಲ್ಲರೂ ಪ್ರಧಾನಿ ಮಧ್ಯಸ್ಥಿಕೆಗೆ ಹಾಗೂ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಆಗ್ರಹಿಸಿದ್ದಾರೆ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಸರ್ವಪಕ್ಷ ಸಭೆಯಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸುವಂತೆಯೂ ಒತ್ತಾಯ ಕೇಳಿ ಬಂದಿದೆ ಎಂದು ಹೇಳಿದ್ದಾರೆ.
"ಮಹಾದಾಯಿ ನ್ಯಾಯಾಧಿಕರಣ ಟ್ರಿಬ್ಯುನಲ್ ಹೊರಗೆ ಸಮಸ್ಯೆ ಪರಿಹಾರಕ್ಕೆ ಸೂಚಿಸಿತ್ತು. ಹೀಗಾಗಿ ಈ ಸಂಬಂಧ ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿತ್ತು. ಈ ಪತ್ರಕ್ಕೆ ಗೋವಾ ಮುಖ್ಯಮಂತ್ರಿ ಉತ್ತರ ಕೊಟ್ಟಿಲ್ಲ. ಅಕ್ಟೋಬರ್ ನಲ್ಲಿ ಮಹಾರಾಷ್ಟ್ರ ಸಿಎಂ ಪತ್ರ ಬರೆದಿದ್ದರು. ಮುಂಬೈನಲ್ಲಿ ಅವರು ಸಭೆ ಕರೆದಿದ್ದರು. ಅದಕ್ಕೂ ಮೊದಲು ರಾಜ್ಯದ ಸರ್ವಪಕ್ಷ ಸಭೆ ಕರೆದು ಚರ್ಚೆ ನಡೆಸಿದೆ," ಎಂದು ಅವರು ಇಲ್ಲಿಯವರೆಗೆ ನಡೆದಿದ್ದನ್ನು ವಿವರಿಸಿದ್ದಾರೆ.
ಮಹಾದಾಯಿ ನದಿ ನೀರಿನ ವಿವಾದ ಬಗೆಹರಿಸುವ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸಲು ನಾನು ಈಗಲೂ ಸಿದ್ಧ.
— CM of Karnataka (@CMofKarnataka) January 27, 2018
ನನ್ನ ಪತ್ರಕ್ಕೆ ಮೊದಲು ಗೋವಾ ಮುಖ್ಯಮಂತ್ರಿಯವರು ಉತ್ತರ ಕೊಡಲಿ. ಅವರು ಸಭೆ ಕರೆದರೆ, ಮಾತುಕತೆಗೆ ಸಿದ್ಧ ಎಂದು ಹೇಳಿದರೆ ಗೋವಾ ಕಾಂಗ್ರೆಸ್ಸಿಗರ ಜೊತೆ ನಾನು ಮಾತನಾಡುತ್ತೇನೆ; @siddaramaiah
"ಗೋವಾ ಕಾಂಗ್ರೆಸ್ ಒಪ್ಪಿಸಲು ಬಿಜೆಪಿ ಪದೇ ಪದೇ ಆಗ್ರಹಿಸಿದೆ. ಗೋವಾ ಮುಖ್ಯಮಂತ್ರಿ ಒಪ್ಪಿದರೆ, ಅಲ್ಲಿನ ಕಾಂಗ್ರೆಸ್ ಮುಖಂಡರನ್ನ ನಾನು ಒಪ್ಪಿಸುತ್ತೇನೆ. ಆದರೆ ಗೋವಾ ಸಿಎಂ ಯಾವುದಕ್ಕೂ ಮುಂದೆ ಬರಲಿಲ್ಲ. ಮಹಾರಾಷ್ಟ್ರ ಸಿಎಂ ಕರೆದ ಸಭೆಗೂ ಬರಲಿಲ್ಲ," ಎಂದು ಸಿದ್ದರಾಮಯ್ಯ ಅಸಮಧಾನ ವ್ಯಕ್ತಪಡಿಸಿದರು.
"ಯಡಿಯೂರಪ್ಪ ಬರೆದ ಪತ್ರಕ್ಕೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಪ್ರತಿಯಾಗಿ ಪತ್ರ ಬರೆದಿದ್ದರು. ಅದನ್ನು ಯಡಿಯೂರಪ್ಪ ಬಿಜೆಪಿಯ ಪರಿವರ್ತನಾ ಸಭೆಯಲ್ಲಿ ಓದಿದ್ದಾರೆ. ಅದರ ಮರು ದಿನವೇ ನಾನು ಗೋವಾ ಸಿಎಂಗೆ ಪತ್ರ ಬರೆದಿದ್ದೆ. ಆದರೆ ಅವರು ಅದಕ್ಕೆ ಉತ್ತರಿಸಿಲ್ಲ. ಮುಖ್ಯ ಕಾರ್ಯದರ್ಶಿ ಅವರ ಪತ್ರಕ್ಕೂ ಉತ್ತರ ಕೊಟ್ಟಿಲ್ಲ," ಎಂದು ಸಿದ್ದರಾಮಯ್ಯ ತಿಳಿಸಿದರು.
"ಗೋವಾ ಮುಖ್ಯಮಂತ್ರಿ ಯಾವಾಗ ಸಭೆ ಕರೆದರೂ ಹೋಗಲು ನಾನು ಸಿದ್ದ. ಬಿಜೆಪಿಯವರು ಮೊಸರಿನಲ್ಲಿ ಕಲ್ಲು ಹುಡುಕುತ್ತಾ ಇದ್ದಾರೆ. ಗೋವಾ ಸಿಎಂ ಮಾತುಕತೆಗೆ ಸಿದ್ದವಾಗಿದ್ದರೆ
ನಾವು ಅಲ್ಲಿನ ಕಾಂಗ್ರೆಸ್ ನವರ ಬಳಿ ಅಮೇಲೆ ಮಾತಾಡುತ್ತೇವೆ. ಅವರು ಮಾತುಕತೆಗೆ ಸಿದ್ದವಿಲ್ಲ. ಮೊದಲೇ ಮಾತಾಡಿ ಎಂದು ನಮಗೆ ಹೇಳುತ್ತಿದ್ದಾರೆ," ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

"ಪ್ರಧಾನಿ ಮಂತ್ರಿ ಬಳಿಗೆ ನಿಯೋಗ ಕರೆದುಕೊಂಡು ಹೋಗೋಣ ಎಂದರೆ ಅದಕ್ಕೆ ಬಿಜೆಪಿಯವರು ಒಪ್ಪುತ್ತಿಲ್ಲ. ಈಗಲೂ ನಾನು ರೆಡಿ ಇದ್ದೇನೆ. ರಾಜ್ಯದ ಜನರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಮತ್ತೆ ಪ್ರಧಾನಿ ಮಂತ್ರಿಗೆ ಪತ್ರ ಬರೆಯುತ್ತೇನೆ. ಪ್ರಧಾನಿ ಒಪ್ಪಿಕೊಂಡರೆ ಮತ್ತೆ ಸರ್ವ ಪಕ್ಷದ ನಿಯೋಗ ಹೋಗುತ್ತೇವೆ. ರೈತ ಮುಖಂಡರನ್ನು ಕರೆದುಕೊಂಡು ಹೋಗುತ್ತೇನೆ," ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.











Click it and Unblock the Notifications