ಬಿಎಸ್ವೈ, ಎಚ್ಡಿಕೆ ವಿರುದ್ಧ ಲೋಕಾಯುಕ್ತ ಎಫ್ಐಆರ್
ಬೆಂಗಳೂರು, ಮೇ 7 : ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 1.11 ಎಕರೆ ಜಮೀನು ಡಿನೋಟಿಫಿಕೇಶನ್ ಮಾಡಿದ್ದಾರೆ ಎಂದು ಆರೋಪಿಸಿ ಆರ್ಟಿಐ ಕಾರ್ಯಕರ್ತ ಜಯಕುಮಾರ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಬೆಂಗಳೂರಿನ ಗಂಗೇನಹಳ್ಳಿ ಬಳಿಯ ಮಠದಹಳ್ಳಿ ಬಡಾವಣೆ ವ್ಯಾಪ್ತಿಯಲ್ಲಿ 1.11 ಎಕರೆ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. [ರೇಣುಕಾಚಾರ್ಯ ವಿರುದ್ಧ ಲೋಕಾಯುಕ್ತ ತನಿಖೆ]

ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಜಯಕುಮಾರ್ ಹಿರೇಮಠ್ ಅವರು ಸಲ್ಲಿಸಿದ್ದ ದೂರಿನ ಅನ್ವಯ ಕುಮಾರಸ್ವಾಮಿ, ಯಡಿಯೂರಪ್ಪ, ವಿಮಲಾ, ಟಿ.ಎಸ್.ಚನ್ನಪ್ಪ, ರಾಜಶೇಖರಯ್ಯ ಎಂಬುವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 13(1)ಸಿ, ಡಿ ಹಾಗೂ ಐಪಿಸಿ 409, 418, 420, 120ಬಿ ನಿಯಮದ ಅಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. [ಶಾಸಕ ಮುನಿರತ್ನ ವಿರುದ್ಧ ಎಫ್ ಐಆರ್]
ಪ್ರಕರಣದ ವಿವರ : ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಮಠದಹಳ್ಳಿಯ ಸರ್ವೆ ನಂ. 7/1ಬಿ, 7/1ಸಿ ಹಾಗೂ 7/1ಡಿಗೆ ಸೇರಿದ ತಲಾ ಹದಿನೇಳು ಗುಂಟೆಯಂತೆ ಒಟ್ಟು 1.11 ಎಕರೆ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಲಾಗಿದೆ ಎಂಬುದು ಆರೋಪ.
ಈ ಜಮೀನಿನ ಮೂಲ ವಾರಸುದಾರರು ತಿಮ್ಮಾರೆಡ್ಡಿ. ಆದರೆ, ರಾಜಶೇಖರಯ್ಯ ಎಂಬುವವರು ಜಮೀನಿನ ಮಾಲೀಕ ನಾನೇ ಎಂದು ಸಿವಿಲ್ಕೋರ್ಟ್ನಿಂದ ಹಕ್ಕುದಾರಿಕೆ ಪಡೆದು, ಜಮೀನು ಡಿನೋಟಿಫೈ ಮಾಡುವಂತೆ 2007ರಲ್ಲಿ ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸಿದ್ದರು.
ಆಗ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ ಅವರು ಅರ್ಜಿಯನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದರು. ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಂದಿನ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸುಬೀರ್ ಹರಿಸಿಂಗ್ ಷಾರಾ ಬರೆದಿದ್ದರು.
2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆದ ನಂತರ ಜಮೀನು ಡಿನೋಟಿಫಿಕೇಶನ್ ಮಾಡಲಾಯಿತು. ನಂತರದ ದಿನಗಳಲ್ಲಿ ಜಮೀನನ್ನು ಕುಮಾರಸ್ವಾಮಿ ಅವರ ಅತ್ತೆ ವಿಮಲಾ ಹೆಸರಿಗೆ ಜಿಪಿಎ ಮಾಡಿಸಲಾಗಿತ್ತು. ಬಳಿಕ ವಿಮಲಾ ಅವರು ತಮ್ಮ ಪುತ್ರ ಚನ್ನಪ್ಪ ಹೆಸರಿಗೆ ಗಾಂಧಿನಗರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದಾರೆ.












Click it and Unblock the Notifications