ಕರ್ನಾಟಕದಲ್ಲಿ ಬಿಜೆಪಿ 17 ಕ್ಷೇತ್ರದಲ್ಲಿ ಗೆಲುವು; ವಿಜಯೇಂದ್ರ ಮೊದಲ ರಿಯಕ್ಷನ್ ಹೇಗಿತ್ತು?
ಬೆಂಗಳೂರು, ಜೂನ್ 04: ಬಿಜೆಪಿ ಮತ್ತು ಎನ್ಡಿಎ ಮಿತ್ರ ಕೂಟ 295ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ಸೇತರ ಪಕ್ಷ ಬಿಜೆಪಿ ಸತತವಾಗಿ ಮೂರನೇ ಬಾರಿಗೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವುದು ಪ್ರತಿಯೊಬ್ಬರೂ ಸಂತೋಷ ಪಡುವ ವಿಚಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.
ಬೆಂಗಳೂರು ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲೂ ಬಿಜೆಪಿ- ಜೆಡಿಎಸ್ ಪಕ್ಷ ಒಟ್ಟಾಗಿ ಚುನಾವಣೆ ಎದುರಿಸಿದ್ದು, 17 ಕ್ಷೇತ್ರಗಳಲ್ಲಿ ಬಿಜೆಪಿ, 2 ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷ ಗೆದ್ದಿವೆ. ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಭ್ರಮೆಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗಿದೆ ಎಂದು ಹೇಳಿದರು.

ತಮ್ಮ ಗ್ಯಾರಂಟಿಗಳ ಮೂಲಕ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಕಾಂಗ್ರೆಸ್ಸಿಗರ ಕನಸು ಇವತ್ತು ಭಗ್ನವಾಗಿದೆ ಎಂದ ಅವರು, ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಪಕ್ಷದ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಎರಡೂ ಪಕ್ಷಗಳ ಮುಖಂಡರು, ವಿಶೇಷವಾಗಿ ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ರಾಜ್ಯದ ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಗ್ಯಾರಂಟಿಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಹಿನ್ನಡೆ ಆಗಿತ್ತು. ಇದೆಲ್ಲವನ್ನೂ ಮೀರಿ ನಮ್ಮ ರಾಜ್ಯದ ಪ್ರಜ್ಞಾವಂತ ಮತದಾರರು ದೇಶದ ಭವಿಷ್ಯ ರೂಪಿಸುವ ಚುನಾವಣೆ, ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ದೃಷ್ಟಿಯಿಂದ ಸಂಪೂರ್ಣ ಬೆಂಬಲ ನೀಡಿದ್ದಾರೆ. ಆದ್ದರಿಂದ ನಮ್ಮ ರಾಜ್ಯದ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಕರುನಾಡಿನ ಹೆಮ್ಮೆಯ ಮತದಾರ ಬಂಧುಗಳಿಗೆ ಕೃತಜ್ಞತಾ ಪೂರ್ವಕ ಆತ್ಮೀಯ ಅಭಿನಂದನೆಗಳು.ಸ್ವಾತಂತ್ರ್ಯಾ ನಂತರ ಭಾರತವನ್ನು ವಿಶ್ವದ ಮುಂಚೂಣಿಗೆ ತಂದು ನಿಲ್ಲಿಸಿ ಆರ್ಥಿಕ ಹಾಗೂ ಉತ್ಪನ್ನ ಕ್ಷೇತ್ರದಲ್ಲಿ ಹೆಗ್ಗಳಿಕೆಯ ಸಾಧನೆ ಮಾಡುವ ಮೂಲಕ ರಾಷ್ಟ್ರ ಸುರಕ್ಷತೆಗಾಗಿ ಹತ್ತು-ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡು ಭಾರತೀಯರಲ್ಲಿ ಆತ್ಮವಿಶ್ವಾಸ ಹಾಗೂ ರಾಷ್ಟ್ರೀಯತೆಯ ಸ್ವಾಭಿಮಾನ ರೂಪಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನಿಟ್ಟ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವುದು ಭಾರತೀಯ ಜನತಾ ಪಾರ್ಟಿಯ ಹಾಗೂ ಎನ್.ಡಿ.ಎ ಮೈತ್ರಿಕೂಟದ ಮಹಾ ಸಂಕಲ್ಪವಾಗಿತ್ತು.
ಶತಕೋಟಿ ಭಾರತೀಯರ ಮನದಾಳದ ಅಪೇಕ್ಷೆಯಾಗಿತ್ತು, ಈ ನಿಟ್ಟಿನಲ್ಲಿ ಕರ್ನಾಟಕದ ಮತದಾರರು ನಿರೀಕ್ಷೆ ಮೀರಿ ಸ್ಪಂದಿಸಿ 19 ಸ್ಥಾನಗಳಲ್ಲಿ ಎನ್.ಡಿ.ಎ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಟ್ಟಿದ್ದೀರಿ ಇದಕ್ಕಾಗಿ ಅತ್ಯಂತ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇನ್ನುಳಿದ ಕ್ಷೇತ್ರಗಳಲ್ಲಿ ಗೆಲುವಿನ ದಡದ ಹತ್ತಿರದವರೆಗೂ ಕರೆತಂದು ಗಣನೀಯ ಪ್ರಮಾಣದಲ್ಲಿ ನಮ್ಮ ಎನ್.ಡಿ.ಎ ಅಭ್ಯರ್ಥಿಗಳನ್ನು ಬೆಂಬಲಿಸಿದ ಮತದಾರರಿಗೂ ಸಹ ಕೃತಜ್ಞತೆ ಸಲ್ಲಿಸುತ್ತೇನೆ.
ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹತ್ತು-ಹಲವು ಆಧಾರ ರಹಿತ ಅಪಪ್ರಚಾರಗಳ ನಡುವೆ ಹಾಗೂ ಕರ್ನಾಟಕದಲ್ಲಿ ಮತ ಬ್ಯಾಂಕ್ ಆಧಾರಿತ ಯೋಜನೆಗಳ ಹೆಸರಿನಲ್ಲಿ ಮತದಾರರನ್ನು ದಿಕ್ಕು ತಪ್ಪಿಸುವ ಕುತಂತ್ರದ ನಡುವೆಯೂ ಸಾಧಿಸಿದ ಈ ಗೆಲುವನ್ನು ರಾಜಕಾರಣದ ನೈಜ ಧರ್ಮವನ್ನು ಎತ್ತಿಹಿಡಿದು ಘನತೆ ಮೆರೆದ ಮತದಾರರಿಗೇ ಸಮರ್ಪಿಸುತ್ತಿದ್ದೇವೆ.
ಈ ಫಲಿತಾಂಶ ವಿಕಸಿತ ಭಾರತವನ್ನು ಕಟ್ಟುವ ಸಂಕಲ್ಪದ ವಿನಮ್ರ ಮನವಿಯನ್ನು ಮತದಾರರು ಪುರಸ್ಕರಿಸಿದ ಗೆಲುವಾಗಿದೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಹಾಗೂ ಮುಖಂಡರ ಅಹರ್ನಿಶಿ ಹೋರಾಟ ಹಾಗೂ ಪರಿಶ್ರಮ ಫಲ ನೀಡಿದೆ, ಈ ನಿಟ್ಟಿನಲ್ಲಿ ಕಾರ್ಯಕರ್ತ ಬಂಧುಗಳು ಹಾಗೂ ಪ್ರಮುಖರನ್ನು ಹೃದಯ ತುಂಬಿ ಅಭಿನಂದಿಸುವೆ. ಭವಿಷ್ಯತ್ತಿನಲ್ಲಿ ನಾಡು ಹಾಗೂ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ನೇತೃತ್ವದ ಎನ್.ಡಿ.ಎ ಸರ್ಕಾರದ ಕಾರ್ಯಕ್ರಮಗಳನ್ನು ಪ್ರತಿಯೊಬ್ಬ ಪ್ರಜೆಗೂ ತಲುಪಿಸುವ ಕಾರ್ಯದಲ್ಲಿ ನಾವು ನೀವೆಲ್ಲರೂ ಜೊತೆಯಾಗಿ ಕಾರ್ಯನಿರ್ವಹಿಸೋಣ ಎಂದರು.












Click it and Unblock the Notifications