ಲೋಕಸಭೆ ಚುನಾವಣೆ ಹೊತ್ತಲ್ಲೇ ಕೆಪಿಸಿಸಿಗೆ ಮೇಜರ್ ಸರ್ಜರಿ: 5 ಕಾರ್ಯಾಧ್ಯಕ್ಷರ ನೇಮಕ- ಯಾರಿಗೆಲ್ಲಾ ಅವಕಾಶ?
ಬೆಂಗಳೂರು, ಮಾರ್ಚ್ 24: 2023 ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಸರ್ಕಾರ ರಚಿಸಿರುವ ಕಾಂಗ್ರೆಸ್ ಗೆ ಈ ಬಾರಿ ಲೋಕಸಭಾ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕನಿಷ್ಠ 20 ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಟಾರ್ಗೆಟ್ ನೀಡಿದ್ದು, ಈ ಟಾರ್ಗೆಟ್ ತಲುಪುವ ನಿಟ್ಟಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮೇಜರ್ ಸರ್ಜರಿ ಮಾಡಿದೆ.
ಹೌದು, ಲೋಕಸಭಾ ಚುನಾವಣಾ ದಿನಾಂಕ ಈಗಾಗಲೇ ಘೋಷಣೆಯಾಗಿದ್ದು, ಲೋಕಸಭೆ ಚುನಾವಣೆಯ ಸಮೀಪದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಐವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಶಾಸಕರಾದ ತನ್ವೀರ್ ಸೇಠ್, ವಿನಯ್ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಹಾಗೂ ವಸಂತ್ ಕುಮಾರ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಈ ಹಿಂದೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ನೇಮಕ ಮಾಡಲಾಗಿದ್ದ ಕಾರ್ಯಾಧ್ಯಕ್ಷರು ಸಚಿವ ಸ್ಥಾನಗಳನ್ನು ಪಡೆದಿರುವ ಹಿನ್ನೆಲೆಯಲ್ಲಿ ಆ ಸಚಿವರುಗಳಿಗೂ ಸಹ ಹೊಸ ಜವಾಬ್ದಾರಿಯನ್ನ ಕಾಂಗ್ರೆಸ್ ಹೈಕಮಾಂಡ್ ನೀಡಿದ್ದು, ಇದೀಗ ಬದಲಾವಣೆ ಮಾಡಲಾಗಿದೆ. ಆದರೆ ವಿಧಾನ ಪರಿಷತ್ ಸದಸ್ಯ ಸಲೀಮ್ ಅಹ್ಮದ್ ಅವರ ಬದಲಾಗಿ ಈ ಬಾರಿ ತನ್ವೀರ್ ಸೇಠ್ ಅವರಿಗೆ ಸ್ಥಾನ ನೀಡಲಾಗಿದೆ. ಉಳಿದಂತೆ ಒಕ್ಕಲಿಗ, ಲಿಂಗಾಯತ, ಬಂಟ ಸಮುದಾಯಕ್ಕೆ ಕಾರ್ಯಾಧ್ಯಕ್ಷ ಸ್ಥಾನವನ್ನ ನೀಡಲಾಗಿದೆ.
ಇನ್ನೂ ಐವರು ಕಾರ್ಯಾಧ್ಯಕ್ಷರನ್ನ ನೇಮಕ ಮಾಡಿರುವ ಕಾಂಗ್ರೆಸ್, ಲೋಕಸಭಾ ಚುನಾವಣೆ ಹಿನ್ನಲೇ ಮಹತ್ವದ ಜವಾಬ್ದಾರಿಯನ್ನ ನೀಡಿದೆ. ಜಿ.ಸಿ. ಚಂದ್ರಶೇಖರ್ ಅವರಿಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲಾ ಉಸ್ತುವಾರಿಯನ್ನ ಮಾಡಿದೆ. ತನ್ನೀರ್ ಸೇಠ್ ಅವರಿಗೆ ಮೈಸೂರು ನಗರ, ಮೈಸೂರು ಗ್ರಾಮೀಣ. ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಅಲ್ಪ ಸಂಖ್ಯಾತ ವಿಭಾಗ & ಸೇವಾದಳ ಉಸ್ತುವಾರಿಯನ್ನಾಗಿ ಮಾಡಿದೆ.
ವಿನಯ ಕುಲಕರ್ಣಿ ಅವರಿಗೆ ಬೆಳಗಾವಿ ನಗರ/ಗ್ರಾಮೀಣ, ಚಿಕ್ಕೋಡಿ. ಬಾಗಲಕೋಟೆ, ವಿಜಯಪುರ, ಗದಗ. ಹಾವೇರಿ, ಹುಬ್ಬಳ್ಳಿ ನಗರ, ಧಾರವಾಡ ಉಸ್ತುವಾರಿಯನ್ನ ಮಾಡಿದೆ. ಮಂಜುನಾಥ ಭಂಡಾರಿ ಅವರನ್ನ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಚಿಕ್ಕಮಗಳೂರು ಉತ್ತರ ಕನ್ನಡ ಯುವ ಕಾಂಗ್ರೆಸ್ & ಮಹಿಳಾ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ಮಾಡಿದೆ. ವಸಂತ ಕುಮಾರ್ ಅವರಿಗೆ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ ನಗರ ಮತ್ತು ಗ್ರಾಮಾಂತರ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳಿಗೆ ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಿದೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾರ್ಯಾಧ್ಯಕ್ಷರ ನೇಮಕ ಶೀಘ್ರ ಮಾಡಬೇಕು ಎಂಬ ಬೇಡಿಕೆ ಇತ್ತು. ಇದೀಗ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ನೂತನವಾಗಿ ಕಾರ್ಯಧ್ಯಕ್ಷರನ್ನ ನೇಮಕ ಮಾಡಿ ಆದೇಶ ಮಾಡಿದೆ.
ಪ್ರಚಾರ ಸಮಿತಿ ನೇಮಕ
ಮಂಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ವಿನಯ್ ಕುಮಾರ್ ಸೊರಕೆ ಅವರನ್ನು ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಡಾ. ಎಲ್ ಹನುಮಂತಯ್ಯ ಅವರನ್ನು ಸಹ -ಅಧ್ಯಕ್ಷ ಹಾಗೂ ರಿಜ್ವಾನ್ ಹರ್ಷದ್ ಅವರನ್ನು ಪ್ರಚಾರ ಸಮಿತಿ ಉಪ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.












Click it and Unblock the Notifications