ಗೆದ್ದ ಜಾರಕಿಹೊಳಿ ಪ್ರಭಾವ, ಮಹಿಳಾ ಘಟಕ ಅಧ್ಯಕ್ಷೆ ಸ್ಥಾನದಿಂದ ಲಕ್ಷ್ಮಿ ಹೆಬ್ಬಾಳ್ಕರ್ಗೆ ಕೊಕ್
Recommended Video

ಬೆಳಗಾವಿ, ನವೆಂಬರ್ 02: ಬೆಳಗಾವಿ ರಾಜಕಾರಣದಲ್ಲಿ ಜಾರಕಿಹೊಳಿ ಸಹೋದರರ ಮೇಲುಗೈ ಆಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನದಿಂದ ಕೊಕ್ ನೀಡಲಾಗಿದೆ.
ಲಕ್ಷ್ಮಿ ಹೆಬ್ಬಾಳ್ಕರ್ ಅವರು ಜಾರಕಿಹೊಳಿ ಸಹೋದರರನ್ನು ರಾಜಕೀಯವಾಗಿ ವಿರೋಧಿಸಿದ್ದಕ್ಕೆ ಅವರ ತಲೆದಂಡ ನೀಡಲಾಗಿದೆ ಎಂದು ಈ ಘಟನೆಯನ್ನು ವಿಶ್ಲೇಷಿಸಲಾಗುತ್ತಿದೆ.
ಕೆಪಿಸಿಸಿ ಮಹಿಳಾ ಘಟಕದ ನೂತನ ಅಧ್ಯಕ್ಷೆಯಾಗಿ ಪುಷ್ಪಾ ಅಮರಾನಾಥ್ ಅವರನ್ನು ಆಯ್ಕೆ ಮಾಡಲಾಗಿದೆ. ಪುಷ್ಪಾ ಅವರು ಮೈಸೂರು ನಗರದವರಾಗಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಸಿದ್ದರಾಮಯ್ಯ ಅವರ ಬೆಂಬಲಿಗರಾಗಿ ಇವರು ಗುರುತಿಸಿಕೊಂಡಿದ್ದರು.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಮುಂದುವರೆಯಲು ಆಸಕ್ತಿ ವಹಿಸಿದ್ದರು, ಜೊತೆಗೆ ಇದರ ಜೊತೆಗೆ ಇನ್ನೂ ನಾಲ್ಕು ಜನ ರೇಸಿನಲ್ಲಿ ಇದ್ದರು.

ಜಾರಕಿಹೊಳಿ ಸಹೋದರರೊಂದಿಗೆ ವೈರತ್ವ
ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣೆ ವಿಷಯವಾಗಿ ಜಾರಕಿಹೊಳಿ ಸಹೋದರರ ವಿರೋಧ ಕಟ್ಟಿಕೊಂಡ ಕಾರಣ ಅವರೇ ಪ್ರಭಾವ ಬಳಸಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಮಹಿಳಾ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದಾರೆ ಎನ್ನಲಾಗಿದೆ.

ದಿನೇಶ್ ಗುಂಡೂರಾವ್ ಸೂಚನೆ
ಕೆಪಿಸಿಸಿ ಮಹಿಳಾ ಘಟಕದ ಕಾರ್ಯಮಂಡಳಿಯನ್ನು ಬದಲಾಯಿಸುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕಾಂಗ್ರೆಸ್ ಹೈಕಮಾಂಡ್ಗೆ ಈ ಮೊದಲೇ ಮನವಿ ಮಾಡಿದ್ದರು ಎನ್ನಲಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬಹಳ ವರ್ಷಗಳಿಂದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ತಿಂಗಳಿನಿಂದಲೂ ನಡೆದಿತ್ತು ಸಂದರ್ಶನ
ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನಕ್ಕೆ ಆಯ್ಕೆ ಮಾಡಲು ಒಂದು ತಿಂಗಳ ಹಿಂದೆಯೇ ಕೆಲವು ಮಹಿಳಾ ಆಕಾಂಕ್ಷಿಗಳ ಸಂದರ್ಶನ ನಡೆದಿತ್ತು ಎನ್ನಲಾಗಿದೆ. ಹೈಕಮಾಂಡ್ನ ತಂಡವೊಂದು ದೆಹಲಿಯಲ್ಲಿಯೇ ಸಂದರ್ಶನ ನಡೆಸಿ ಇದೀಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆದೇಶದಂತೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.

ರೇಸಿನಲ್ಲಿ ಇದ್ದವರು ಯಾರ್ಯಾರು?
ಮೈಸೂರು ಮೂಲಕ ಪುಷ್ಪಾ ಅಮರನಾಥ್, ನಾಗಲಕ್ಷ್ಮೀ ಚೌಧರಿ, ಕಮಲಾಕ್ಷಿ ರಾಜಣ್ಣ, ಶಾರದಾ ಗೌಡ, ಗೀತಾ ರಾಜಣ್ಣ ಸೇರಿದಂತೆ 12 ಮಹಿಳಾ ನಾಯಕಿಯರ ಸಂದರ್ಶನ ನಡೆದಿದೆ. ಸ್ವತಃ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಮುಂದುವರೆಯುವ ಬಯಕೆ ಇದೆ ಎನ್ನಲಾಗಿತ್ತು.











Click it and Unblock the Notifications