ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಈಶ್ವರಪ್ಪ ಮಾಡಿದ ವಿನಂತಿ ಏನು?
ಬೆಂಗಳೂರು, ಜುಲೈ 21 : ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತದ ಮೇಲಿನ ಚರ್ಚೆ ನಡೆಯುತ್ತಿದೆ. ಸೋಮವಾರ ಚರ್ಚೆಯನ್ನು ಮುಗಿಸಿ ಮತಕ್ಕೆ ಹಾಕಬೇಕು ಎಂದು ತೀರ್ಮಾನಿಸಲಾಗಿದೆ.
ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ವಿಶ್ವಾಸಮತದ ಚರ್ಚೆಯನ್ನು ಮುಗಿಸಲಿದ್ದಾರೆಯೇ? ಕಾದು ನೋಡಬೇಕು. ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರು ಉಭಯ ಪಕ್ಷದ ನಾಯಕರಿಗೆ ಟ್ವಿಟರ್ ಮೂಲಕ ಮನವಿಯನ್ನು ಮಾಡಿದ್ದಾರೆ.

"ನಾಳೆ ಮತ್ತೆ ಸದನದಲ್ಲಿ ಚಂದ್ರಗುಪ್ತ ಮೌರ್ಯನ ಕಾಲದಿಂದ ಇವತ್ತಿನ ತನಕ ಕಥೆ ಹೇಳಿ ಸದನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬಾರದು ಎಂದು ಎಲ್ಲಾ ಕಾಂಗ್ರೆಸ್, ಜೆಡಿಎಸ್ ಶಾಸಕರಲ್ಲೂ ಮತ್ತು ಮೇಧಾವಿಗಳಾದ ಸಮನ್ವಯ ಸಮಿತಿ ಅಧ್ಯಕ್ಷರಲ್ಲೂ ನನ್ನ ಕಳಕಳಿಯ ವಿನಂತಿ" ಎಂದು ವ್ಯಂಗ್ಯವಾಡಿದ್ದಾರೆ.
ಗುರುವಾರ ವಿಶ್ವಾಸಮತದ ಮೇಲೆ ವಿಧಾನಸಭೆಯಲ್ಲಿ ಚರ್ಚೆ ಆರಂಭವಾಯಿತು. ಅಂದೇ ಮುಗಿಯಲಿದೆ ಎಂದು ವಿರೋಧ ಪಕ್ಷ ಬಿಜೆಪಿ ನಿರೀಕ್ಷೆ ಮಾಡಿತ್ತು. ಆದರೆ, ಶುಕ್ರವಾರ ರಾತ್ರಿ 8 ಗಂಟೆಯಾದರೂ ಚರ್ಚೆ ಪೂರ್ಣಗೊಳ್ಳದೇ ಸೋಮವಾರಕ್ಕೆ ಕಲಾಪ ಮುಂದೂಡಲಾಯಿತು.

ಕಾದು ನೋಡುತ್ತೇವೆ : ಸೋಮವಾರದ ಕಲಾಪದ ಬಗ್ಗೆ ಮಾತನಾಡಿರುವ ಪ್ರತಿಪಕ್ಷ ನಾಯಕ ಬಿ. ಎಸ್. ಯಡಿಯೂರಪ್ಪ, "ಎಲ್ಲರ ಗಮನ ನಾಳೆ ಸುಪ್ರೀಂಕೋರ್ಟ್ ಏನು ತೀರ್ಪು ಕೊಡಬಹುದು ಎನ್ನುವುದರ ಮೇಲಿದೆ.
ಈಗಾಗಲೇ ಸುಪ್ರೀಂಕೋರ್ಟ್ ಶಾಸಕರಿಗೆ ಸದನಕ್ಕೆ ಬರಬೇಕು ಅಂತ ಬಲವಂತ ಮಾಡಬಾರದು ಎಂದು ಹೇಳಿದೆ. ಎಚ್. ಡಿ. ಕುಮಾರಸ್ವಾಮಿ ಅವರು ಅನಗತ್ಯ ವಿಳಂಬ ಮಾಡಬಾರದು. ವಿಶ್ವಾಸ ಮತ ಮಾಡುವ ಭರವಸೆಯನ್ನು ಸ್ಪೀಕರ್ ಮತ್ತು ಸಿಎಂ ಕೊಟ್ಟಿದ್ದಾರೆ. ನಾವು ನಾಳೆಯ ತನಕ ಕಾದು ನೋಡುತ್ತೇವೆ" ಎಂದರು.












Click it and Unblock the Notifications