ಕೆಎಎಸ್ ನೇಮಕಾತಿ ಹಗರಣ: ಸಂದರ್ಶನಕ್ಕೆ ಅನುಮತಿ ಕೋರಿದ ಕೆಪಿಎಸ್ಸಿ
ಬೆಂಗಳೂರು, ಜೂನ್ 13: ಕೆಪಿಎಸ್ಸಿ 2011ನೇ ಸಾಲಿನಲ್ಲಿ ಕೆಎಎಸ್ ನೇಮಕಾತಿಗೆ ನಡೆಸಿದ ಮುಖ್ಯ ಒಪರೀಕ್ಷೆಯಲ್ಲಿ ಅಕ್ರಮ ನಡೆದಿಲ್ಲ. ಹೀಗಾಗಿ ಮುಖ್ಯ ಪರೀಕ್ಷೆ ಮೌಲ್ಯಮಾಪನದ ಆಧಾರದಲ್ಲಿ ಅಭ್ಯರ್ಥಿಗಳ ಸಂದರ್ಶನಕ್ಕೆ ಅವಕಾಶ ನೀಡುವಂತೆ ಕೆಪಿಎಸ್ಸಿ ಹೈಕೋರ್ಟ್ಗೆ ಕೋರಿದೆ.
ಕೆಪಿಎಸ್ಸಿ 2011ನೇ ಸಾಲಿನ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಿತ್ತು. ಅದರಲ್ಲಿ ಅಕ್ರಮ ನಡೆದಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು. ಮುಖ್ಯ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನ ಅನುಸಾರ ಹೈಕೋರ್ಟ್ ವಿಚಾರಣೆ ಮುಂದಾಗಿದೆ.
ಕೆಪಿಎಸ್ ಸಿ ಹಗರಣ: ಕಲಬುರಗಿ ಪ್ರಾಚಾರ್ಯರ ಮನೇಲಿ ಸಿಕ್ತು 45.70 ಲಕ್ಷ
ಕೆಲ ಅವಕಾಶ ವಂಚಿತ ಹಾಗೂ ಆಯ್ಕೆಯಾದ ಅಭ್ಯರ್ಥಿಗಳು ಸಲ್ಲಿಸಿರುವ ಮಧ್ಯಂತರ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠ ಮುಂದೆ ಕೆಪಿಎಸ್ಸಿ ಪರ ವಕೀಲ ಪಿ.ಎಸ್. ರಾಜಗೋಪಾಲ್ ಮಂಗಳವಾರ ವಾದ ಮಂಡಿಸಿದರು.
ಮುಖ್ಯ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆದಿರುವ ಬಗ್ಗೆ ಸಿಐಡಿ ವರದಿಯಲ್ಲಿ ವಿವರಿಸಿಲ್ಲ. ಹೀಗಿರುವಾಗ ಸಂಪೂರ್ಣ ಪರೀಕ್ಷೆಯನ್ನು ರದ್ದುಪಡಿಸಿ ಹೊಸದಾಗಿ ಪರೀಕ್ಷೆ ನಡೆಸಲು ಅವಕಾಶವಿಲ್ಲ. ಒಂದೊಮ್ಮೆ ಮುಖ್ಯ ಪರೀಕ್ಷೆಯ ಮೌಲ್ಯಮಾಪನವನ್ನು ನ್ಯಾಯಾಲಯ ಒಪ್ಪುವುದಿಲ್ಲವೆಂದಾದರೆ ಆ ಪರೀಕ್ಷೆಗಳ ಮರುಮೌಲ್ಯಮಾಪನ, ಸಂದರ್ಶನ ಹೊಸದಾಗಿ ನಡೆಸಬಹುದೇ ಹೊರತು ಸಂಪೂರ್ಣ ಪರೀಕ್ಷೆಗಳನ್ನೇ ರದ್ದುಪಡಿಸಲು ಅವಕಾಶವಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಮುಖ್ಯ ಪರೀಕ್ಷೆಗಳು ಹಾಗೂ ಸಂದರ್ಶನದಲ್ಲಿ ಅಕ್ರಮ ನಡೆದಿದೆ. ಮುಖ್ಯ ಪರೀಕ್ಷೆಗೂ ಮುನ್ನವೇ ಆಯೋಗದ ಸದಸ್ಯರು ಹಾಗೂ ಅಭ್ಯರ್ಥಿಗಳ ನಡುವೆ ಟೆಲಿಫೋನ್ ಸಂಭಾಷಣೆಗಳು ನಡೆದಿವೆ ಎಂದು ಅವಕಾಶವಂಚಿತ ಅಭ್ಯರ್ಥಿಗಳ ಪರ ವಕೀಲರು ವಾದಿಸಿದರು. ವಾದ ಪ್ರತಿವಾದದ ಬಳಿಕ ಅಂತಿಮವಾಗಿ ನ್ಯಾಯಪೀಠ ತೀರ್ಪು ಕಾದಿರಿಸಿದೆ.