ಆನೇಕಲ್ ವಸತಿ ಶಾಲೆಯಲ್ಲಿ ಪ್ರಾಂಶುಪಾಲರ ಪಾನಗೋಷ್ಠಿ
ಬೆಂಗಳೂರು, ಜೂ. 27 : ಆನೇಕಲ್ ತಾಲೂಕಿನ ಎಲ್ಲಮ್ಮನ ಪಾಳ್ಯದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರು, ಭದ್ರತಾ ಸಿಬ್ಬಂದಿ ವಿರುದ್ಧ ಶಾಲೆಯ ಮಕ್ಕಳ ಪೋಷಕರ ಹಿತರಕ್ಷಣಾ ಸಮಿತಿ ಪೊಲೀಸರಿಗೆ ದೂರು ನೀಡಿದೆ. ಪ್ರಾಂಶುಪಾಲರು, ಭದ್ರತಾ ಸಿಬ್ಭಂದಿ ಮತ್ತು ಇತರರು ಶಾಲೆಯ ಆವರಣದಲ್ಲಿ ಕುಡಿತ, ನೃತ್ಯ, ಅಶ್ಲೀಲ ಮಾತುಗಳ ಪ್ರಯೋಗ, ಟಿವಿ ವೀಕ್ಷಣೆ ಮಾಡುತ್ತಾ ವಿದ್ಯಾರ್ಥಿನಿಯರಿಗೆ ತೊಂದರೆ ನೀಡುತ್ತಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಿತರಕ್ಷಣಾ ಸಮಿತಿ ನೀಡಿರುವ ದೂರಿನ ಅನ್ವಯ ಆನೇಕಲ್ ಪೊಲೀಸರು ವಸತಿ ಶಾಲೆಯ ಭದ್ರತಾ ಸಿಬ್ಬಂದಿ ಕಾರ್ತಿಕ್ ನನ್ನು ಬಂಧಿಸಿ ಆತನ ಹೇಳಿಕೆ ಪಡೆದಿದ್ದಾರೆ. ಶಾಲೆಯ ಪ್ರಾಂಶುಪಾಲ ಮಲ್ಲಿಕಾರ್ಜುನ ಸ್ವಾಮಿ (52) ಪೊಲೀಸರ ಮುಂದೆ ಹಾಜರಾಗಿ, ತನ್ನದೇನು ತಪ್ಪಿಲ್ಲವೆಂದೂ ಈ ಆರೋಪದಲ್ಲಿ ಕುತಂತ್ರ ಆಡಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಶಾಲೆಯಲ್ಲಿ ಕುಡಿತ, ಡ್ಯಾನ್ಸ್ : ವಸತಿ ಶಾಲೆಯ ಪ್ರಾಂಶುಪಾಲ ಮಲ್ಲಿಕಾರ್ಜನ ಸ್ವಾಮಿ, ಭದ್ರತಾ ಸಿಬ್ಬಂದಿ ಕಾರ್ತಿಕ್ ತಮ್ಮ ಇತರ ಗೆಳೆಯರೊಂದಿಗೆ ಸೇರಿ ರಾತ್ರಿ ಹೊತ್ತಿನಲ್ಲಿ ಶಾಲೆಯ ಆವರಣದಲ್ಲಿ ಕುಡಿತ, ನೃತ್ಯ, ಅಶ್ಲೀಲ ಮಾತುಗಳ ಪ್ರಯೋಗ, ಟಿವಿ ವೀಕ್ಷಣೆ ಮಾಡುತ್ತಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವಿದ್ಯಾರ್ಥಿನಿಯರ ಫೋಟೋಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿಯುವ ಕಾರ್ತಿಕ್ ಅವರ ಜೊತೆ ಅನುಚಿತವಾಗಿ ವರ್ತಿಸುತ್ತಾರೆ ಎಂದು ಪೋಷಕರು ದೂರಿದ್ದಾರೆ.
ಭದ್ರತಾ ಸಿಬ್ಬಂದಿ ಕಾರ್ತಿಕ್ ಪ್ರಾಂಶುಪಾಲರ ಕುರ್ಚಿಯಲ್ಲಿ ತಾನೇ ಕುಳಿತು ಆಡಳಿತ ನಡೆಸುವುದು, ಅನುಚಿತವಾಗಿ ವರ್ತಿಸುತ್ತೇನೆ. ಆದ್ದರಿಂದ ಈತನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಮತ್ತು ಈತನ ಕೃತ್ಯಗಳಿಗೆ ಬೆಂಬಲ ನೀಡುವ ಪ್ರಾಂಶುಪಾಲ ಮಲ್ಲಿಕಾರ್ಜುನಸ್ವಾಮಿಯವರ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.
ಶಾಲೆಯ ಭದ್ರತಾ ಸಿಬ್ಬಂದಿ ಮತ್ತು ಪ್ರಾಂಶುಪಾಲರ ವಿರುದ್ಧ ಪೋಷಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ. ಮುನಿಯಲ್ಲಪ್ಪ ಅವರು ಆನೇಕಲ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಕಾರ್ತಿಕ್ ನನ್ನು ಬಂಧಿಸಿರುವ ಪೊಲೀಸರು ಆತನ ಹೇಳಿಕೆ ಪಡೆದಿದ್ದಾರೆ. ಪ್ರಾಂಶುಪಾಲ ಮಲ್ಲಿಕಾರ್ಜುನ ಸ್ವಾಮಿ ನನ್ನದು ತಪ್ಪಿಲ್ಲ, ಇದು ನನ್ನ ವಿರುದ್ಧ ಮಾಡಿರುವ ಷಡ್ಯಂತ್ರ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.












Click it and Unblock the Notifications