ವಿಜಯಪುರ ಕಾಲೇಜಿನಲ್ಲಿ ಕಾಶ್ಮೀರಿ ವಿದ್ಯಾರ್ಥಿಗೆ ಹಲ್ಲೆ: ಸಿಎಂ, ಪಿಎಂಗೆ ದೂರು ಕೊಟ್ಟ ಗೆಳಯ
ಬೆಂಗಳೂರು, ಫೆಬ್ರವರಿ 19: ವಿಜಯಪುರದ ಅಲ್ ಅಮೀನ್ ವೈದ್ಯಕೀಯ ಕಾಲೇಜಿನಲ್ಲಿ ಕಾಶ್ಮೀರ ಮೂಲದ ಎಂಬಿಬಿಎಸ್ ಅನಂತನಾಗ್ನ ಮೇಲೆ ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿ ಹಲ್ಲೆ ನಡೆಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿಯ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ಹಲವು ಗಣ್ಯರಿಗೆ ಟ್ಯಾಗ್ ಮಾಡಿ ರಕ್ಷಣೆ ಕೋರಿದ್ದಾರೆ. ಕಾಶ್ಮೀರ ಮೂಲದ 2ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯ ಮೇಲೆ ಸ್ಥಳೀಯ 4ನೇ ವರ್ಷದ ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿ, ಕೋಣೆಯಲ್ಲಿ ಕೂಡಿಹಾಕಿ ಥಳಿಸಿದ್ದಾರೆ. ಕೂಡಲೇ ಇವರ ವಿರುದ್ಧ ಕ್ರಮ ಕೈಗೊಂಡು ತಮಗೆ ರಕ್ಷಣೆ ನೀಡಬೇಕು ಎಂದು ಆತನ ಸ್ನೇಹಿತ ಹಲವು ರಾಜಕೀಯ ಗಣ್ಯರಿಗೆ ಟ್ಯಾಗ್ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ನಾಸಿರ್ ಖುಹೇಹಮಿ ಅವರು, ಕರ್ನಾಟಕದ ಬಿಜಾಪುರದ ಅಲ್-ಅಮೀನ್ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿರುವ ಕಾಶ್ಮೀರದ ಅನಂತನಾಗ್ನ 2ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಹಮೀಮ್ ಮೇಲೆ 2019ರ ಬ್ಯಾಚ್ನ ಹಿರಿಯ ವಿದ್ಯಾರ್ಥಿಗಳು ಅತ್ಯಂತ ಕೆಟ್ಟದಾಗಿ ರ್ಯಾಗಿಂಗ್ ಮತ್ತು ದೈಹಿಕ ಹಲ್ಲೆ ಮಾಡಿದ್ದಾರೆ.

ನಿನ್ನೆ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ನಡೆಯುತ್ತಿದ್ದ 2022ನೇ ಬ್ಯಾಚ್ ಮತ್ತು ಹಳೆಯ ವಿದ್ಯಾರ್ಥಿಗಳ 2019ನೇ ಎಂಬಿಬಿಎಸ್ ಬ್ಯಾಚ್ಗಳ ನಡುವಿನ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಕಾಲೇಜು ಆಟದ ಮೈದಾನಕ್ಕೆ ಹಮೀಮ್ ಹೋದಾಗ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.ಕ್ರಿಕೆಟ್ ಪಂದ್ಯ ನೋಡಲು ಬೌಂಡರಿಯ ಲೈನ್ ಬಳಿ ನಿಂತಿದ್ದ ಹಮೀಮ್ಗೆ ಒಬ್ಬ ಹಿರಿಯ ವಿದ್ಯಾರ್ಥಿ ಬೌಂಡರಿಯಿಂದ ಹೊರಗೆ ನಿಲ್ಲುವಂತೆ ಹೇಳಿದನು. ಆಗ ಸರಿ ಎಂದು ಮೂದಾನದಿಂದ ದೂರ ಸರಿದುಕೊಂಡು ನಿಂತು ಅಲ್ಲಿಂದ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದನು. ಆದರೂ, ಹಿರಿಯ ವಿದ್ಯಾರ್ಥಿಗಳು ಅವನ ಮೇಲೆ ಜಗಳ ಆರಂಭಿಸುವುದಕ್ಕೆ ಮುಂದಾದರು.
ಕಳೆದ ವರ್ಷ ಹಮೀಮ್ ಪರೀಕ್ಷೆಯ ಸಮಯದಲ್ಲಿ ಊಟದ ವಿಚಾರಕ್ಕೆ ಮೆಸ್ನಲ್ಲಿ ಹಿರಿಯ ವಿದ್ಯಾರ್ಥಿಯಿಂದ ಕೋಪ ಎದುರಿಸಿದ್ದನು. ಇಲ್ಲಿಂದ ಟಾರ್ಗೆಟ್ ಮಾಡಿಕೊಂಡು ಹಮೀಮ್ಗೆ ಕಿರುಕುಳ ನೀಡುತ್ತಾ ಬರುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇನ್ನು, 2023ರ ಬ್ಯಾಚ್ ಕ್ರಿಕೆಟ್ ತಂಡದ ನಾಯಕನಾಗಿದ್ದ ಹಮೀಮ್, ಹಿರಿಯ ವಿದ್ಯಾರ್ಥಿಗಳ ತಂಡದ ಅತ್ಯಂತ ಬಲಿಷ್ಟ ಆಟಗಾರನಾಗಿ ಕಾಣಿಸಿಕೊಂಡಿದ್ದನು. ಹೀಗಾಗಿ, ಹಮೀಮ್ 2019-2022 ಬ್ಯಾಚ್ಗಳ ಹಿರಿಯ ವಿದ್ಯಾರ್ಥಿಗಳ ಪಂದ್ಯವನ್ನು ವೀಕ್ಷಣೆ ಮಾಡದಂತೆ ನಿರ್ಬಂಧ ವಿಧಿಸಿ ಅಲ್ಲಿಂದ ಹೋಗುವಂತೆ ಸೂಚಿಸಿದರು. ಇದಕ್ಕೆ ಹಮೀಮ್ ನಿರಾಕರಿಸಿದನು. ಜೊತೆಗೆ, ನಾನು ಈ ಮ್ಯಾಚ್ ಏಕೆ ನೋಡಬಾರದು ಎಂದು ಉತ್ತರ ಕೊಡುತ್ತಾ ನಿಂತನು. ಇದನ್ನು ಸಹಿಸಿಕೊಳ್ಳದ ಹಿರಿಯ ವಿದ್ಯಾರ್ಥಿಗಳು ಆತನುಗೆ ಮೌಖಿಕವಾಗಿ ಬೆದರಿಕೆ ಹಾಕಿದರು.
ಇನ್ನೂ ಮೌಖಿಕ ಬೆದರಿಕೆಯಾಗಿ ಪ್ರಾರಂಭವಾದ ಜಗಳ ನಂತರ ಹಾಸ್ಟೆಲ್ಗೂ ವಿಸ್ತರಣೆಗೊಂಡಿತು. ಆಗ ಹಿರಿಯ ವಿದ್ಯಾರ್ಥಿಗಳು ಹಮೀಮ್ಗೆ ಅವಮಾನಿಸಿ ಅಲ್-ಹಮೀಮ್ಗೆ ಎಲ್ಲರಿಗೂ ಸೆಲ್ಯೂಟ್ ಮಾಡುವಂತೆ, ಹಾಡುಗಳನ್ನು ಹಾಡುವಂತೆ, ಮನರಂಜನೆಗಾಗಿ ನೃತ್ಯ ಮಾಡುವಂತೆ ರ್ಯಾಗಿಂಗ್ ಮಾಡಿದ್ದಾರೆ. ಮುಂದುವರೆದು ಬಲವಂತವಾಗಿ ತಮ್ಮ ಕಾರಿನೊಳಗೆ ಹತ್ತಿಸಲು ಪ್ರಯತ್ನಿಸಿ, ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದಾರೆ. ಆಗ ನೀವು ನನಗೆ ಕಿರುಕುಳ ನೀಡುತ್ತಿರುವುದು ಒಳ್ಳೆಯದಲ್ಲ, ಕಾಲೇಜು ನಿಯಮಗಳಿಗೆ ವಿರುದ್ಧವಾಗಿವೆ ಎಂದು ಹೇಳಿದಾಗ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಗಲಾಟೆ ಆಗುವುದನ್ನು ಗ್ರಹಿಸಿದ ಸ್ನೇಹಿತರು ವಿಡಿಯೋ ರೆಕಾರ್ಡ್ ಮಾಡಲು ಮುಂದಾದಾಗ ಅದನ್ನೂ ನಿರ್ಬಂಧಿಸಿದರು.
ಇದಾದ ನಂತರ 6-8 ಜನರ ಗುಂಪು ತಡರಾತ್ರಿ ಅವರ ಹಮೀಮ್ ಇರುವ ಹಾಸ್ಟೆಲ್ ಕೋಣೆಗೆ ನುಗ್ಗಿ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಅವನು ಕ್ಷಮೆಯಾಚಿಸುವ ವೀಡಿಯೊವನ್ನು ರೆಕಾರ್ಡ್ ಮಾಡುವಂತೆ ಹಮೀನ್ ಸ್ನೇಹಿತರಿಗೆ ಹೇಳಿದರು. 'ನೀವು ಇನ್ನೂ 4 ವರ್ಷಗಳು ಇಲ್ಲಿರಬೇಕು. ನಾವು ಸ್ಥಳೀಯರು - ನಿಮ್ಮ ಜೀವನವನ್ನು ನಾವು ಎಷ್ಟು ಭಯಾನಕಗೊಳಿಸಬಹುದು ಎಂದು ಊಹಿಸಿ' ಎಂದು ಕೊಲೆ ಬೆದರಿಕೆ ಹಾಕಿದ್ದಾರೆ. ಮುಂದಿನ 4 ವರ್ಷಗಳ ಕಾಲ ನಿಮಗೆ ಇಲ್ಲಿ ಕ್ರಿಕೆಟ್ ಆಡಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ಬರೆದಿದ್ದಾರೆ.
ಇನ್ನೂ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣ ಸಂಸ್ಥೆಗಳಲ್ಲಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ವಿದ್ಯಾರ್ಥಿಗಳ, ವಿಶೇಷವಾಗಿ ಸ್ಥಳೀಯರಲ್ಲದ ವಿದ್ಯಾರ್ಥಿಗಳ ಹಕ್ಕುಗಳು ಮತ್ತು ಸುರಕ್ಷತೆಯನ್ನು ಕಾಪಾಡಲು ಮಧ್ಯಪ್ರವೇಶಿಸಬೇಕು ಎಂದು ಕೋರಲಾಗಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿಗಳು ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ, ನ್ಯಾಯವನ್ನು ನೀಡಬೇಕು. ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ. ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳ, ವಿಶೇಷವಾಗಿ ಸ್ಥಳೀಯರಲ್ಲದ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಪ್ಪಿತಸ್ಥರೆಂದು ಕಂಡುಬಂದವರನ್ನು ತಕ್ಷಣವೇ ವಿಶ್ವವಿದ್ಯಾಲಯದಿಂದ ಹೊರಹಾಕಬೇಕು ಎಂದು ತಿಳಿಸಿದ್ದಾರೆ.












Click it and Unblock the Notifications