Karnataka Rain: ಮಾರ್ಚ್ 20ರ ಬಳಿಕ ರಾಜ್ಯದ ಈ ಭಾಗದಲ್ಲಿ ಮಳೆ!
ಬೇಸಿಗೆಯ ತಾಪಕ್ಕೆ ಕರ್ನಾಟಕ ರಾಜ್ಯದ ಜನ ಕಂಗಾಲಾಗಿದ್ದಾರೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಮಸ್ಯೆ ಶುರುವಾಗಿದೆ. ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ಮಳೆ ಬಂದ್ರೆ ಸಾಕಪ್ಪಾ ಎನ್ನುವಂತಾಗಿದೆ.
ಎಲ್ ನಿನೋ ಪ್ರಭಾವ ಕಡಿಮೆಯಾಗುತ್ತಿದ್ದು ಈ ಬಾರ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಬಗ್ಗೆ ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಮಳೆ ಬರುತ್ತೆ ಆದರೆ ಯಾವಾಗ ಬರುತ್ತೆ ಅನ್ನೋದು ಜನರ ಪ್ರಶ್ನೆಯಾಗಿದೆ.

ಜೂನ್ ಬಳಿಕ ಮುಂಗಾರು ಶುರುವಾಗಲಿದ್ದು ರಾಜ್ಯದಲ್ಲಿ ಉತ್ತಮ ಮಳೆ ಸುರಿಯುವ ಮುನ್ಸೂಚನೆ ಇದೆ. ಆದರೆ ಅದಕ್ಕೂ ಮುನ್ನವೇ ರಾಜ್ಯದಲ್ಲಿ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಸೂಚನೆ ಸಿಕ್ಕಿದೆ.
ಮಾರ್ಚ್ 20ರ ಬಳಿಕ ಮಳೆ ಸಾಧ್ಯತೆ?
ಮಾರ್ಚ್ ಅಂತ್ಯದವರೆಗೆ ಜಾಗತಿಕ ಮುನ್ಸೂಚನೆ ವ್ಯವಸ್ಥೆ (GFS) ಮಳೆ ಸಂಗ್ರಹ ಹಂಚಿಕೆ ಪ್ರಕಾರ, ಮಾರ್ಚ್ 20 ರ ಬಳಿಕ ರಾಜ್ಯದ ಹಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕೊಡಗು ಮತ್ತು ದಕ್ಷಿಣ ಕನ್ನಡದ ಘಟ್ಟಗಳ ಭಾಗದಲ್ಲಿ 15 ರಿಂದ 20 ಎಂಎಂ ಲಘು ಮಳೆಯನ್ನು ನಿರೀಕ್ಷೆ ಮಾಡಲಾಗಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಒಣ ಹವೆ ಮುಂದುವರೆಯುವ ಸಾಧ್ಯತೆ ಇದೆ.
ಸುಳ್ಯ, ಮಡಿಕೇರಿ, ಭಾಗಮಂಡಲ, ವಿರಾಜಪೇಟೆ ಪ್ರದೇಶಗಳಲ್ಲಿ ಮಾರ್ಚ್ 20ರ ನಂತರ ಲಘು ಮಳೆಯಾಗುವ ಸಾಧ್ಯತೆ ಇದೆ.
ಎಲ್ ನಿನೋ ಪ್ರಭಾವ ಕಡಿಮೆ
ಹವಾಮಾನ ತಜ್ಞರ ಹೇಳಿಕೆಗಳ ಪ್ರಕಾರ ಎಲ್ ನಿನೋ ಪ್ರಭಾವ ಕಡಿಮೆಯಾಗುತ್ತಿದ್ದು ಈ ಬಾರಿ ಜಾಗತಿಕವಾಗಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಕೂಡ ಮೇ - ಜೂನ್ ವೇಳೆಗೆ ಮಳೆಗಾಲ ಶುರುವಾಗಲಿದ್ದು, ವಾಡಿಕೆಯಂತೆ ಉತ್ತಮ ಮಳೆ ಬೀಳಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಎಲ್ ನಿನೋ ಬಳಿಕ ಲಾ ನಿನಾ ಪರಿಸ್ಥಿತಿ ಆರಂಭವಾಗಲಿದ್ದು, ಲಾ ನಿನಾ ಹೆಚ್ಚಿನ ಮಳೆಗೆ ಕಾರಣವಾಗಲಿದೆ. ಆದರೆ ಅದಕ್ಕೂ ಮುನ್ನ ಈ ಬಾರಿ ಬೇಸಿಗೆ ತಾಪ ಹೆಚ್ಚಿರಲಿದ್ದು ಅದನ್ನು ದಾಟಬೇಕಿದೆ. ಕೂಲ್ ಸಿಟಿ ಎನಿಸಿಕೊಂಡಿದ್ದ ಬೆಂಗಳೂರ ಈ ಬಾರಿ ಬೇಸಿಗೆ ತಾಪಕ್ಕೆ ಬಳಲಿದೆ. ದಾಖಲೆಯ ಉಷ್ಣಾಂಶ ದಾಖಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಹೆಚ್ಚುವ ಭೀತಿ ಇದೆ.












Click it and Unblock the Notifications