Government Employee: ಬೆಂಗಳೂರಲ್ಲಿ ನಿವೃತ್ತ ಸರ್ಕಾರಿ ನೌಕರರ ಸಮಾವೇಶ, ಬೇಡಿಕೆಗಳು
ಬೆಂಗಳೂರು, ಮಾರ್ಚ್ 27: ಕರ್ನಾಟಕ ಸರ್ಕಾರ ಸರ್ಕಾರಿ ನೌಕರರು/ ಅಧಿಕಾರಿಗಳಿಗೆ ಹಲವು ಯೋಜನೆಗಳ ಮೂಲಕ ಅಗತ್ಯ ನೆರವು ನೀಡುತ್ತಿದೆ. ಆದರೆ ನಿವೃತ್ತ ಸರ್ಕಾರಿ ನೌಕರರಿಗೆ ಸರಿಯಾದ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ. ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ನಿವೃತ್ತ ಸರ್ಕಾರಿ ಉದ್ಯೋಗಿಗಳು ಬೆಂಗಳೂರಿನಲ್ಲಿ ಬೃಹತ್ ಸಮಾವೇಶನವನ್ನು ನಡೆಸಲಿದ್ದಾರೆ. ಸುಮಾರು 30 ಸಾವಿರ ಜನರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ. ಎಲ್. ಭೈರಪ್ಪ ಈ ಕುರಿತು ಮಾಹಿತಿ ನೀಡಿದ್ದಾರೆ. ಸಂಘದ ಸಂಘಟನೆ ದೃಷ್ಟಿಯಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಈ ಮಾದರಿ ಸಮಾವೇಶ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ರಾಜ್ಯಮಟ್ಟದ ನಿವೃತ್ತ ಸರ್ಕಾರಿ ಉದ್ಯೋಗಿಗಳ ಸಮಾವೇಶ ಏಪ್ರಿಲ್ 4ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಸಮಾವೇಶ ಮತ್ತು ರಾಜ್ಯ ಮಟ್ಟದ ಕಾರ್ಯಾಗಾರವನ್ನು ಆಯೋಜನೆ ಮಾಡಲಾಗಿದೆ. ಈ ಸಮಾವೇಶದ ಮೂಲಕ ಸರ್ಕಾರದ ಮುಂದೆ ನಿವೃತ್ತ ಸರ್ಕಾರಿ ಉದ್ಯೋಗಿಗಳು ಹಲವು ಬೇಡಿಕೆಗಳನ್ನು ಇಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶ ಉದ್ಘಾಟಿಸಲಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಹ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಿವೃತ್ತ ಸರ್ಕಾರಿ ಉದ್ಯೋಗಿಗಳ ಬೇಡಿಕೆಗಳು: ನಿವೃತ್ತ ಸರ್ಕಾರಿ ಉದ್ಯೋಗಿಗಳ ಬೃಹತ್ ಸಮಾವೇಶ ಏಪ್ರಿಲ್ 4ರಂದು ನಡೆಯಲಿದೆ. ಇದಕ್ಕೆ ಪೂರಕವಾಗಿ ಜಿಲ್ಲಾ ಮಟ್ಟದಲ್ಲಿ ಜಾಥಾವನ್ನು ನಡೆಸುವ ಮೂಲಕ ಸರ್ಕಾರಕ್ಕೆ ಬೇಡಿಕೆಗಳನ್ನು ನಿವೃತ್ತ ಸರ್ಕಾರಿ ಉದ್ಯೋಗಿಗಳು ಸಲ್ಲಿಸುತ್ತಿದ್ದಾರೆ. ಸಮಾವೇಶದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿಯೇ ತಮ್ಮ ಹಕ್ಕೋತ್ತಾಯಗಳನ್ನು ಹೇಳಲಿದ್ದಾರೆ.
ದಕ್ಷಿಣ ಕನ್ನಡದ ನಿವೃತ್ತ ಸರ್ಕಾರಿ ಉದ್ಯೋಗಿಗಳು ಈ ಸಮಾವೇಶಕ್ಕೆ ಪೂರಕವಾಗಿ ಸಭೆಯನ್ನು ಸಹ ಕರೆದಿದ್ದಾರೆ. ಜುಲೈ 1,2022 ರಿಂದ ಜುಲೈ 31, 2024ರ ಅವಧಿಯಲ್ಲಿ ನಿವೃತ್ತರಾದ ಸರ್ಕಾರಿ ನೌಕರ/ ಅಧಿಕಾರಿಗಳಿಗೆ 7ನೇ ವೇತನ ಆಯೋಗದ ಲೆಕ್ಕಾಚಾರದಲ್ಲಿ ನಿವೃತ್ತಿ ಉಪಲಬ್ಧಗಳನ್ನು ಪಾವತಿಸುವ ಸಂದರ್ಭದಲ್ಲಿ ಆರ್ಥಿಕ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ. ಈ ಅವಧಿಯಲ್ಲಿ ರಾಜ್ಯಾದ್ಯಂತ 26,743 ನೌಕರರು ನಿವೃತ್ತರಾಗಿದ್ದಾರೆ ಎಂದು ತಿಳಿದುಬಂದಿದೆ.
ಏಪ್ರಿಲ್ 4ರಂದು ನಡೆಯುವ ಸಮಾವೇಶದಲ್ಲಿ 7ನೇ ವೇತನ ಆಯೋಗದ ಲೆಕ್ಕಾಚಾರದಲ್ಲಿ ನಿವೃತ್ತಿ ಉಪಲಬ್ಧಗಳನ್ನು ಪಾವತಿ ಮಾಡುವುದರಲ್ಲಿ ಆಗಿರುವ ತಾರತಮ್ಯದ ಕುರಿತು ನಿವೃತ್ತ ಸರ್ಕಾರಿ ನೌಕರರು ರಾಜ್ಯ ಸರ್ಕಾರದ ಗಮನ ಸೆಳೆಯಲಿದ್ದಾರೆ. ನಿವೃತ್ತ ಉದ್ಯೋಗಿಗಳಿಗೆ ಸರಿಯಾದ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಲಿದ್ದಾರೆ.
ನಿವೃತ್ತ ಸರ್ಕಾರಿ ನೌಕರರ ಬೇಡಿಕೆಗಳು
* 7ನೇ ವೇತನ ಆಯೋಗದ ಅಂತಿಮ ವರದಿಯಲ್ಲಿ ನಿವೃತ್ತ ನೌಕರರಿಗೆ ಶಿಫಾರಸು ಮಾಡಿರುವ ಎಲ್ಲಾ ಅಂಶಗಳನ್ನು ಸರ್ಕಾರ ವಿಳಂಬಗೊಳಿಸದೇ ಜಾರಿ ಮಾಡುವುದು.
* ನಿವೃತ್ತ ನೌಕರರು ಮತ್ತು ಕುಟುಂಬದವರಿಗೆ ಸಂಧ್ಯಾ ಕಿರಣ ಹೊಸ ಆರೋಗ್ಯ ಯೋಜನೆಯನ್ನು ಜಾರಿಗೊಳಿಸುವುದು.
* 70 ರಿಂದ 80 ವರ್ಷ ವಯೋಮಿತಿಯ ನಿವೃತ್ತ ನೌಕರರಿಗೆ ಮೂಲ ಪಿಂಚಣಿಯ ಶೇ 10ರಷ್ಟು ಹೆಚ್ಚುವರಿ ಆರ್ಥಿಕ ಸೌಲಭ್ಯವನ್ನು ನೀಡುವುದು.
* 2022ರ ಜುಲೈ 1 ರಿಂದ 2024ರ ಜುಲೈ 31ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ರಜೆ ನಗದೀಕರಣ ಸೌಲಭ್ಯವನ್ನು ನೀಡುವುದು.
* ಸಂಧ್ಯಾ ಕಿರಣ ಹೊಸ ಆರೋಗ್ಯ ಯೋಜನೆಯನ್ನು ಜಾರಿಗೊಳಿಸುವ ತನಕ ಮಾಸಿಕ 500 ರೂ. ವೈದ್ಯಕೀಯ ಭತ್ಯೆಯನ್ನು ನೀಡಬೇಕು.
* ಡಿಜಿಸಿಆರ್ ಸೌಲಭ್ಯಗಳನ್ನು ಮಂಜೂರು ಮಾಡಬೇಕು.












Click it and Unblock the Notifications