Karnataka Poll: ಮತದಾರರನ್ನು ಸೆಳೆಯಲು ಅಂತಿಮ ಕಸರತ್ತು: ಹಂಚಿಕೆ ಮಾಡುತ್ತಿದ್ದ ಕೋಟ್ಯಂತರ ಹಣ ವಶ
ಮತದಾನಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು ಕೊನೆಯ ಹಂತದಲ್ಲಿ ಮತದಾರರನ್ನು ಸೆಳೆಯಲು ಎಲ್ಲಾ ಅಭ್ಯರ್ಥಿಗಳು ಕೊನೆ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ. ಅಕ್ರಮ ತಡೆಗಟ್ಟಲು ಅಧಿಕಾರಿಗಳು ಕೂಡ ತಯಾರಾಗಿದ್ದು, ರಾಜ್ಯದ ಹಲವೆಡೆ ಕೋಟ್ಯಂತರ ಹಣ ಮತ್ತು ಉಡುಗೊರೆಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿನಲ್ಲಿ ಮತದಾರರಿಗೆ ಹಂಚಲು ಸಾಗಿಸಲಾಗುತ್ತಿತ್ತು ಎನ್ನಲಾದ 1.90 ಕೋಟಿ ರುಪಾಯಿ ಹಣವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಗರದ ಅಕ್ಕಿಪೇಟೆಯ ಬಾಲಾಜಿ ಮೆಡಿಕಲ್ಸ್ ಬಳಿ ಈ ಹಣವನ್ನು ವಶಕ್ಕೆ ಪಡೆಯಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ದಾಖಲೆ ಇಲ್ಲದ 15 ಲಕ್ಷ ರುಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ. ಚಿಕ್ಕೋಡಿ ತಾಲೂಕಿನ ಮಾಂಜರಿ ಚೆಕ್ಪೋಸ್ಟ್ ಬಳಿ ಅಧಿಕಾರಿಗಳು ಹಣವನ್ನು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದಿಂದ ಬರುತ್ತಿದ್ದ ಕಾರಿನಲ್ಲಿ ಚೀಲದಲ್ಲಿ ಹಣವನ್ನು ಇಡಲಾಗಿತ್ತು. ಹಣದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ.
ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ. ವೀರೇಂದ್ರ ಬೆಂಬಲಿಗರು ಮತದಾರರಿಗೆ ಕೂಪನ್ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಾಹಿತಿ ತಿಳಿದ ತಕ್ಷಣವೇ ಚುನಾವಣಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಅಭ್ಯರ್ಥಿ ಮತ್ತು ಕಾರ್ಯಕರ್ತರನ್ನು ವಿಚಾರಣೆಗೆ ಒಳಪಡಿಸಲು ಚುನಾವಣಾಧಿಕಾರಿಗಳು ನಿರ್ಧರಿಸಿದ್ದಾರೆ.
ಚಿಕ್ಕಬಳ್ಳಾಪುರದ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ ಸಂಬಂಧಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಮತ್ತು ಚುನಾವಣಾಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ ಹಣ ಮತ್ತು ವಸ್ತುಗಳು ಸಿಕ್ಕಿಲ್ಲ ಎನ್ನಲಾಗಿದ್ದು ಬರಿಗೈನಲ್ಲಿ ವಾಪಸಾಗಿದ್ದಾರೆ. ಪ್ರದೀಪ್ ಈಶ್ವರ್ ಸಂಬಂಧಿ ಶ್ರೀಧರ್ ಮನೆಯಲ್ಲಿ ಹಣ ಇದೆ ಎನ್ನುವ ಶಂಕೆಯ ಮೇಲೆ ಸರ್ಚ್ ವಾರೆಂಟ್ ಪಡೆದು ಶೋಧ ಕಾರ್ಯಾಚರಣೆ ನಡೆಸಿದ್ದರು.












Click it and Unblock the Notifications