ಅಂಬೇಡ್ಕರ್ ಹೆಸರು ಘನತೆಯ ಬದುಕನ್ನು ನೀಡುತ್ತದೆ: ಅಮಿತ್ ಶಾಗೆ ಪ್ರಿಯಾಂಕ್ ಖರ್ಗೆ ತಿರುಗೇಟು
ಬೆಂಗಳೂರು, ಡಿಸೆಂಬರ್ 18: ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ಈಗ ಫ್ಯಾಷನ್ ಆಗಿಬಿಟ್ಟಿದೆ. ಇದರ ಬದಲು ದೇವರ ಹೆಸರನ್ನು ಹೇಳಿದ್ದರೆ ಏಳು ಜನ್ಮದಲ್ಲಿ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎನ್ನುವ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ಖಂಡಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಹೇಳಿಕೆಯ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಅಮಿತ್ ಷಾ ಅವರು ಮಾನಸಿಕ ಅಸ್ವಸ್ಥರಾದಂತೆ ಕಾಣುತ್ತಿದೆ. ಅವರ ಮಾತು ಮತ್ತು ವರ್ತನೆ ಸಂಪೂರ್ಣ ದುರಹಂಕಾರದಿಂದ ಕೂಡಿದ್ದು ಅವರಿಗೆ ಅಧಿಕಾರದ ನಶೆ ಏರಿದೆ ಎಂದು ಕಿಡಿಕಾರಿದ್ದಾರೆ.

ಮಿಸ್ಟರ್ ಅಮಿತ್ ಷಾ ಅವರೇ, ದೇವರ ನಾಮವನ್ನು ಜಪಿಸುವುದರಿಂದ ಯಾರಿಗೂ ಏಳು ಜನ್ಮದಲ್ಲಿ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ ಎಂದು ನಮಗೆ ತಿಳಿದಿದೆ. ಆದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರು ತಳ ಸಮುದಾಯಗಳಿಗೆ ಚೈತನ್ಯ ನೀಡುತ್ತದೆ. ಅವರಿಗೆ ಸಾಮಾಜಿಕ, ಆರ್ಥಿಕ ಸಮಾನತೆಯ ಮೂಲಕ ಘನತೆಯ ಬದುಕನ್ನು ನೀಡುತ್ತದೆ. ಅದು ಈ ಜನ್ಮದಲ್ಲಿಯೇ ಎಂದರು.
ಬಹು ಮುಖ್ಯವಾಗಿ ಬಾಬಾಸಾಹೇಬರ ನಾಮವನ್ನು ಜಪಿಸುವುದರಿಂದ ನಮಗೆ ಮನುಸ್ಮೃತಿಯಿಂದ ಮುಕ್ತಿ ದೊರಕುತ್ತದೆ. ಬಾಬಾಸಾಹೇಬರ ಕಾರ್ಯಗಳು ಮತ್ತು ಆದರ್ಶಗಳು ಇಂದು ಹೆಚ್ಚು ಪ್ರಸ್ತುತವಾಗುತ್ತಿರುವುದು ಆರ್ಎಸ್ಎಸ್ ಸಿದ್ಧಾಂತಕ್ಕೆ ಮುಳುವಾಗಿದೆ. ಇದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತವರ ಸಹೋದ್ಯೋಗಿಗಳಿಗೆ ನುಂಗಲಾರದ ತುತ್ತಾಗಿದೆ ಎಂದು ಬಿಜೆಪಿ ನಾಯಕರ ವಿರುದ್ಧ ಲೇವಡಿ ಮಾಡಿದರು.

ಸಂಸತ್ತಿನಲ್ಲಿ ಅಥವಾ ಯಾವುದೇ ವೇದಿಕೆಯಲ್ಲಿ ಮಾತನಾಡುವಾಗ ಪ್ರತಿ ಬಾರಿಯೂ ಬಾಬಾಸಾಹೇಬರ ಹೆಸರನ್ನು ಉಲ್ಲೇಖಿಸಬೇಕು ಎಂಬುದು ಅಮಿತ್ ಷಾ ಅವರನ್ನು ಇನ್ನಿಲ್ಲದಂತೆ ಕಾಡುತ್ತಿರುವಂತಿದೆ. ಬಿಜೆಪಿಯು ಸಂವಿಧಾನ ವಿರೋಧಿಯಾಗಿದೆ. ಏಕೆಂದರೆ ಸಂವಿಧಾನವು ಆರ್ಎಸ್ಎಸ್ ಸಿದ್ಧಾಂತಕ್ಕೆ ವಿರುದ್ಧವಾಗಿ ಎಲ್ಲರಿಗೂ ಸಮಾನತೆಯನ್ನು ಪ್ರತಿಪಾದಿಸುತ್ತದೆ ಮತ್ತು ಶೋಷಿತ ವರ್ಗಗಳಿಗೆ ಬದುಕಿನ ಘನತೆಯನ್ನು ನೀಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.












Click it and Unblock the Notifications