ಬಿಜೆಪಿ ಕಾಲದ ಕಾಯ್ದೆಗಳು ಈ ಅಧಿವೇಶನದಲ್ಲಿ ವಾಪಸ್ ಇಲ್ಲ?: ಪರ-ವಿರೋಧ ಚರ್ಚೆ; ಏನಿದು ಸರ್ಕಾರದ "ಲೋಕ" ಲೆಕ್ಕಾಚಾರ?
ಬೆಂಗಳೂರು, ಜುಲೈ 05: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಸರ್ಕಾರ ತಂದ ಕಾಯ್ದೆಗಳ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದು, ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ನಿಷೇಧ ಕಾಯ್ದೆಗಳ ತಿದ್ದುಪಡಿ ಅಥವಾ ಹಿಂಪಡೆಯುವ ವಿಧೇಯಕವನ್ನು ಈ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.
ಈಗಾಗಲೇ ಸರ್ಕಾರ ರಚನೆಯ ಬೆನ್ನಲ್ಲೇ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ನಿಷೇಧ ಕಾಯ್ದೆಗಳನ್ನ ಕ್ಯಾಬಿನೆಟ್ ನಲ್ಲಿ ಕಾಂಗ್ರೆಸ್ ಸರ್ಕಾರ ಹಿಂಪಡೆಯಲು ನಿರ್ಧಾರ ಮಾಡಿದ್ದಾರೆ. ಆದರೆ, ತೀವ್ರ ವಿವಾದ ಹಾಗೂ ವಿರೋಧಕ್ಕೆ ಕಾರಣವಾಗಿದ್ದ ಈ ಕಾಯ್ದೆಗಳನ್ನ ಹಾಲಿ ನಡೆಯುತ್ತಿರುವ ಸದನದಲ್ಲಿ ಮಂಡಿಸುವ ಸಾಧ್ಯತೆ ಇಲ್ಲ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಆರಂಭದ ದಿನಗಳಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಯಾದ ಈ ಎರಡು ಕಾಯ್ದೆಗಳನ್ನ ಹಿಂಪಡೆಯುವ ಕುರಿತು ಅಧಿವೇಶನದಲ್ಲಿ ಮಸೂದೆಯನ್ನ ಮಂಡಿಸುವುದಾಗಿ ಕಾನೂನು ಹಾಗೂ ಸಂಸಧೀಯ ಸಚಿವರಾದ ಹೆಚ್ ಕೆ ಪಾಟೀಲ್ ಹೇಳಿದ್ದರು. ಆದರೆ, ಸಾಕಷ್ಟು ವಿರೋಧ ಹಾಗೂ ಗಡಿಬಿಡಿಯಲ್ಲಿ ಕಾಯ್ದೆಗಳನ್ನ ಮಂಡಿಸಲು ಸರ್ಕಾರ ಮುಂದಾಗಿಲ್ಲ, ತಜ್ಞರ ಅಭಿಪ್ರಾಯ ಸಂಗ್ರಹಕ್ಕೂ ಸರ್ಕಾರ ಮುಂದಾಗಿದೆ.
ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ನಿಷೇಧ ಕಾಯ್ದೆಗಳ ಕುರಿತು ಸಾಕಷ್ಟು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಈ ಎರಡು ಕಾಯ್ದೆಗಳನ್ನ ಸೂಕ್ಷ್ಮವಾಗಿದ್ದು, ಏಕಾಏಕಿ ಕಾಯ್ದೆಯನ್ನ ತಿದ್ದುಪಡಿ ಮಾಡುವುದರ ಬದಲು ಅಥವಾ ಹಿಂಪಡೆಯುವ ಬದಲು ಕಾನೂನು ತಜ್ಞರು ಹಾಗೂ ವಿವಿಧ ಸಮುದಾಯದ ಮುಖಂಡರ ಅಭಿಪ್ರಾಯ ಪಡೆದು ನಂತರ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕೆಂಬ ಉದ್ದೇಶದಿಂದ ಈ ಅಧಿವೇಶನದಲ್ಲಿ ಮಂಡಿಸದಿರುವ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಈಗಾಗಲೇ ಅಧಿವೇಶನ ಪ್ರಾರಂಭವಾಗಿ ಎರಡು ದಿನಗಳು ಕಳೆದಿದ್ದು, ಮೊದಲ ದಿನ ರಾಜ್ಯಪಾಲರು ಭಾಷಣವನ್ನ ನಡೆಸಿದ್ದು, ಎರಡನೇ ದಿನ ಗ್ಯಾರಂಟಿ ಅನುಷ್ಠಾನದ ಕುರಿತು ಬಿಜೆಪಿ ಸದಸ್ಯರು ಪಟ್ಟು ಹಿಡಿದು ಧರಣಿ ನಡೆಸಿದ್ದು, ಕಲಾಪ ಕಾಲಹರಣದಲ್ಲೇ ಮುಗಿದು ಹೋಗಿದೆ. ಇನ್ನೂ ಶುಕ್ರವಾರದಂದು ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದು, ಬಜೆಟ್ ಮಂಡನೆ ಬಳಿಕ ಬಜೆಟ್ ಕುರಿತು ವ್ಯಾಪಕವಾಗಿ ಚರ್ಚೆ ನಡೆಯಬೇಕಾಗಿದೆ. ಇಂತಹ ಸಂದರ್ಭದಲ್ಲಿ ವಿವಾದಾತ್ಮಕ ಕಾಯ್ದೆಗಳ ಬಗ್ಗೆ ಸದನದಲ್ಲಿ ಚರ್ಚೆ ಶುರುವಾದರೆ ಉಳಿದ ಕಲಾಪಕ್ಕೆ ಅಡ್ಡಿಯಾಗಬಹುದು ಎಂಬ ಕಾರಣದಿಂದ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಇನ್ನೂ ಈ ಎರಡು ಕಾಯ್ದೆಗಳ ಕುರಿತು ರಾಜ್ಯ ಸರ್ಕಾರದ ಸಂಪುಟದ ನಿರ್ಧಾರಕ್ಕೆ ವಿವಿಧ ಮಠಾಧೀಶರ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ನಾಯಕರು ಸಹ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ಗೋಹತ್ಯೆ ಹಾಗೂ ಮತಾಂತರ ನಿಷೇಧ ಕಾಯ್ದೆಗಳನ್ನು ಹಿಂಪಡೆದರೇ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ವಿವಿಧ ಮಠಗಳ ಮಠಾಧೀಶರು ಎಚ್ಚರಿಕೆ ನೀಡಿದ್ದಾರೆ.
ಇತ್ತ ಈ ಎರಡು ಕಾಯ್ದೆಗಳನ್ನ ಸದನದಲ್ಲಿ ಹಿಂಪಡೆದರೇ ಮುಂಬರುವ ಲೋಕಸಭಾ ಚುನಾವಣೆಯ ಮೇಲು ಪರಿಣಾಮ ಬೀರಬಹುದು ಎಂಬ ಚಿಂತನೆಯನ್ನ ಕಾಂಗ್ರೆಸ್ ಸರ್ಕಾರ ನಡೆಸಿದೆ. ಈಗಾಗಲೇ ಶಾಂತಲಿಂಗೇಶ್ವರ ಸಂಸ್ಥಾನ ಮಠದ ಸಾಂತಲಿಂಗೇಶ್ವರ ಶರೀಗಳು, ಸುಗೆಶ್ವರ ಸಂಸ್ಥಾನ ಮಠ ವೀರಭದ್ರ ಶ್ರೀಗಳು, ಮಾಶಾಳ ಸಿದ್ಧಲಿಂಗೇಶ್ವರ ಸಂಸ್ಥಾನ ಹಿರೇಮಠದ ಕೇದಾರ ಶ್ರೀಗಳು ಮಾತನಾಡಿ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಶುರು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಒಟ್ಟಾರೆ ಹಲವು ಲೆಕ್ಕಾಚಾರಗಳನ್ನ ಹಾಕಿಕೊಂಡಿದ್ದ ಕಾಂಗ್ರೆಸ್ ಸರ್ಕಾರ ಮುಂದಿನ ದಿನಗಳಲ್ಲಿ ಈ ಕಾಯ್ದೆಗಳನ್ನ ಹಿಂಪಡೆಯುವುದರಿಂದ ಆಗುವ ಪರಿಣಾಯಗಳ ಬಗ್ಗೆ ಚರ್ಚೆ ನಡೆಸಿದ್ದು, ಕಾದುನೋಡುವ ತಂತ್ರಕ್ಕೆ ಮುಂದಾಗಿದೆ. ಹೀಗಾಗಿ ಹಾಲಿ ಅಧಿವೇಶನದಲ್ಲಿ ವಿವಾದಾತ್ಮಕ ಈ ಎರಡು ಕಾಯ್ದೆಗಳನ್ನು ಮಂಡಿಸದೇ ಇರುವ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications