ತೀವ್ರ ವಿರೋಧದ ಮಧ್ಯೆ ವಿಧಾನ ಪರಿಷತ್ನಲ್ಲಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಅಂಗೀಕಾರ!
ಬೆಂಗಳೂರು, ಡಿ. 08: ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ ದೇಶಾದ್ಯಂತ ರೈತ ಸಮೂಹ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದೆ. ಅದೇ ಹಿನ್ನೆಲೆಯಲ್ಲಿ ಭಾರತ್ ಬಂದ್ಗೆ ರೈತ ಸಮೂಹ ಕರೆಯನ್ನೂ ಕೊಟ್ಟಿತ್ತು. ಭಾರತ್ ಬಂದ್ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವುದರಿಂದ ರೈತರ ಪರವಾಗಿ ವಿಧಾನ ಪರಿಷತ್ನಲ್ಲಿ ವಿಪಕ್ಷಗಳ ಸದಸ್ಯರು ಧ್ವನಿ ಎತ್ತಿದ್ದಾರೆ. ಕಳೆದ ಅಧಿವೇಶನದಲ್ಲಿಯೆ ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ 2020ನೇ ಸಾಲಿನ ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕದ ಮೇಲೆ ವಿಧಾನ ಪರಿಷತ್ನಲ್ಲಿ ಗಂಭೀರ ಚರ್ಚೆ ನಡೆಯಿತು. ಚರ್ಚೆಯ ಬಳಿಕ ವಿಧೇಯಕಕ್ಕೆ ಸರ್ಕಾರ ಪರಿಷತ್ನಲ್ಲಿಯೂ ಅಂಗೀಕಾರ ಪಡೆದುಕೊಂಡಿತು.
ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ರೈತರಿಗೆ ಅನ್ಯಾಯವಾಗುವ ಕೆಲಸವನ್ನು ಮಾಡಲು ನನ್ನಿಂದ ಸಾಧ್ಯವೇ ಇಲ್ಲ. ಎಲ್ಲ ರೀತಿಯಿಂದಲೂ ಪರಿಶೀಲನೆ, ಅದ್ಯಯನ ನಡೆಸಿದ ಬಳಿಕವೇ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈ ಬಗ್ಗೆ ಚರ್ಚೆಗೆ ನಾವು ಮುಕ್ತವಾಗಿದ್ದೇವೆ ಎಂದು ಹೇಳಿಕೆ ನೀಡಿದರು.

ಅನೇಕ ರಾಜ್ಯಗಳಲ್ಲಿ ನಿರ್ಬಂಧವಿಲ್ಲ
ವಿಧಾನಸಭೆಯಲ್ಲಿ ತಿದ್ದುಪಡಿಗಳೊಂದಿಗೆ ಅಂಗೀಕಾರವಾಗಿರುವ 2020ನೇ ಸಾಲಿನ ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕದ ಮೇಲೆ ವಿಧಾನ ಪರಿಷತ್ ಕಲಾಪದಲ್ಲಿ ನಡೆದ ಚರ್ಚೆಯಲ್ಲಿ ವೇಳೆ ಮಾತನಾಡಿದ ಯಡಿಯೂರಪ್ಪ ಅವರು, ಸೆಕ್ಷನ್ 79 ಎ ಮತ್ತು ಬಿ ನಿರ್ಬಂಧ ದೇಶದ ಅನೇಕ ರಾಜ್ಯಗಳಲ್ಲಿ ಇಲ್ಲ. ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲೂ ನಿರ್ಬಂಧ ಇಲ್ಲ ಎಂದು ಸಮಜಾಯಿಸಿ ನೀಡುವ ಪ್ರಯತ್ನ ಮಾಡಿದರು.

ಕೈಗಾರಿಕೆಯೂ ಬೆಳೆಯಬೇಕಲ್ಲ?
ಅಲ್ಲದೇ ನೀರಾವರಿ ಜಮೀನು ಖರೀದಿಸಿದಲ್ಲಿ ಕೃಷಿಯನ್ನೇ ಮಾಡಬೇಕು. ಬೇರೆ ಉದ್ದೇಶಗಳಿಗೆ ನೀರಾವರಿ ಭೂಮಿಯನ್ನು ಬಳಸುವಂತಿಲ್ಲ. ರೈತರಿಗೆ ಅನ್ಯಾಯವಾಗುವ ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ. ಎಲ್ಲವನ್ನೂ ನೋಡದ ಬಳಿಕವೇ ಬಿಲ್ ತರಲಾಗಿದೆ. ರೈತರು ಈಗ ಮೊದಲಿನಂತೆ ಇಲ್ಲ, ಬುದ್ದಿವಂತರಾಗಿದ್ದಾರೆ. ತಕ್ಷಣವೇ ಎಲ್ಲರೂ ಜಮೀನು ಮಾರಾಟ ಮಾಡುವುದಿಲ್ಲ ಎಂದರು.
ಶೆ. 2 ರಷ್ಟು ಭೂಮಿಯೂ ಕೈಗಾರಿಕೆಗೆ ಸಿಗುವುದಿಲ್ಲ. ಕೈಗಾರಿಕಾ ಕ್ಷೇತ್ರವೂ ಬೆಳೆಯಬೇಕಲ್ಲವೆ? ನೀವು ಕೂಡ ಎಲ್ಲ ಸದಸ್ಯರು ಇತರ ರಾಜ್ಯಗಳ ಕಾನೂನು ಬಗ್ಗೆ ಅಧ್ಯಯನ ಮಾಡಿ, ಚರ್ಚೆಗೆ ನಾವೂ ಸಿದ್ದರಿದ್ದೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಧಾನ ಪರಿಷತ್ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರಿಗೆ ಸವಾಲು ಹಾಕಿದರು.

ಎಲ್ಲರೂ ಮಾರಾಟ ಮಾಡುತ್ತಾರೆ!
ಜಮೀನನ್ನು ಯಾರು ಬೇಕಾದರೂ ಖರೀದಿ ಮಾಬಹುದು ಎಂದು ಅವಕಾಶ ನೀಡಿದರೆ ಎಲ್ಲರೂ ಖರೀದಿ ಮಾಡುತ್ತಾರೆ. ಆಗ ಎಲ್ಲರೂ ಹೊಲ ಗದ್ದೆಯನ್ನು ಮಾರಾಟ ಮಾಡುತ್ತಾರೆ. ರೈತರು ದುಡಿದಿದ್ದರಿಂದಲೇ ನಾವು ವರ್ಷಗಟ್ಟಲೇ ಲಾಕ್ಡೌನ್ ಇದ್ದರೂ ಮನೆಯಲ್ಲಿ ಕುಳಿತು ನೆಮ್ಮದಿಯಿಂದ ಊಟ ಮಾಡಿದ್ದೇವೆ. ಅವರು ಕೆಲಸ ಮಾಡುವುದನ್ನು ನಿಲ್ಲಿಸಿದ್ದರೆ ನಾವು ಊಟ ಮಾಡಲು ಸಾಧ್ಯವಿತ್ತೆ? ಇಂತಹ ರೈತರನ್ನು ಭೂ ಸುಧಾರಣಾ ಕಾಯ್ದೆ ಮೂಲಕ ಒಕ್ಕಲೆಬ್ಬಿಸಬಾರದು ಎಂದು ಜೆಡಿಎಸ್ ಸದಸ್ಯ ಬಸವರಾಜ್ ಹೊರಟ್ಟಿ ಆಗ್ರಹಿಸಿದರು.

ದಿ. ದೇವರಾಜ್ ಅರಸು ನೆನಪಿಸಿಕೊಂಡ ಹೊರಟ್ಟಿ
ಭೂ ಸುಧಾರಣೆ ಕುರಿತು ಅರಸು ತಂದಿದ್ದ ಬಿಲ್ ಉತ್ತಮವಾಗಿತ್ತು. ಭೂ ರಹಿತರಿಗೆ ಭೂಮಿ ಕೊಡುವ ಕಾನೂನು ಮಾಡಿದ್ದರು. ಸಾಮಾಜಿಕ ನ್ಯಾಯ ಕಾಪಾಡುವ ಭಾವನೆಯಿಂದ ಕಾನೂನು ರಚಿಸಲಾಗಿತ್ತು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಈಗ ಕಾನೂನು ಮಾಡಲಾಗುತ್ತಿದೆ. ಸೊಸೈಟಿ ಮಾಡಿ ಭೂಮಿ ಖರೀದಿಗೆ ಅವಕಾಶ ನೀಡಲಾಗಿದೆ. ಒಳ್ಳೆ ದರ ಬಂದರೆ ಅವರಿಗೆಲ್ಲಾ ಭೂಮಿ ಮಾರಾಟ ಮಾಡಿ ಬಿಡುತ್ತಾರೆ. ನಂತರ ಅಲ್ಲಿ ಕೃಷಿ ಬದಲು ನಾಗರೀಕರಣ ಆಗಲಿದೆ ಎಂದು ಬಸವರಾಜ್ ಹೊರಟ್ಟಿ ತಮ್ಮ ಆತಂಕ ವ್ಯಕ್ತಪಡಿಸಿದರು.
Recommended Video

ಟಾಟಾ-ಬಿರ್ಲಾ ಭೂಮಿ ಖರೀದಿ ಮಾಡಲ್ಲ
ನಮ್ಮ ರಾಜ್ಯಕ್ಕೆ ಟಾಟಾ-ಬಿರ್ಲಾ ಬಂದು ಸಾವಿರಾರು ಎಕರೆ ಭೂಮಿ ಖರೀದಿ ಮಾಡುವುದು ಸಾಧ್ಯವಿಲ್ಲ. 5 ಸದಸ್ಯರ ಕುಟುಂಬಕ್ಕೆ 54 ಎಕರೆ ಮಾತ್ರ ಸೀಮಿತ. ಅದೂ ಕೂಡ ನೀರಾವರಿ ಇದ್ದರೆ ನೀವರಾವರಿಗೇ ಬಳಸಬೇಕು. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಕೃಷಿ ಕ್ಷೇತ್ರದ ಉನ್ನತೀಕರಣಕ್ಕೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಿಧೇಯಕದ ಮೇಲೆ ಮಾತನಾಡಿದರು.
ಸಿಎಂ ಇಬ್ರಾಹಿಂ ಮಾತನಾಡಿ, ಕೇಂದ್ರ ರೈತರ ಜೊತೆ ಮಾತುಕತೆಗೆ ಮುಂದಾಗಿದೆ ಅದು ಆಗುವವರೆಗೂ ಕಾಯಬಹುದಲ್ಲ, ಯಾಕೆ ತರಾತುರಿ? ಕಾದು ನೋಡಿ ಎಂದು ಒತ್ತಾಯಿಸಿದರು. ಚರ್ಚೆಯ ಬಳಿಕ ಧ್ವನಿಮತದ ಮೂಲಕ ವಿಧೇಯಕ ಅಂಗೀಕಾರವಾಯಿತು.












Click it and Unblock the Notifications