ರಾಜ್ಯದ ಜನರಿಗೆ ಕರೆಂಟ್ ಶಾಕ್: ದರ ಏರಿಕೆಗೆ ಸಚಿವರು ಕೊಟ್ಟ ಕಾರಣವೇನು?
ಬೆಂಗಳೂರು, ಮಾರ್ಚ್ 20: ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ದಿಢೀರ್ ಕರೆಂಟ್ ಶಾಕ್ ಕೊಟ್ಟಿದೆ. ಏಕಾಏಕಿ ಮತ್ತೆ ವಿದ್ಯುತ್ ದರ ಹೆಚ್ಚಳ ಮಾಡಿ ಬೆಲೆ ಏರಿಕೆಯ ಬರೆ ಎಳೆದಿದೆ. ಪ್ರತಿ ಯೂನಿಟ್ಗೆ 36 ಪೈಸೆ ಹೆಚ್ಚಳ ಮಾಡಿ ಕೆಇಆರ್ಸಿ ಆದೇಶ ನೀಡಿದ್ದು, ಏಪ್ರಿಲ್ 1ರಿಂದ ರಾಜ್ಯಾದ್ಯಂತ ಹೊಸ ದರ ಜಾರಿಗೆ ಬರಲಿದೆ.
2025-26ನೇ ಸಾಲಿನಲ್ಲಿ 36 ಪೈಸೆ, 2026-27ನೇ ಸಾಲಿಗೆ 35 ಪೈಸೆ ಮತ್ತು 2027-28ಕ್ಕೆ 34 ಪೈಸೆ ಏರಿಕೆ ಮಾಡಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನಿರ್ಧರಿಸಿದೆ. ಸರ್ಕಾರ ಏಕಾಏಕಿ ಮತ್ತೆ ವಿದ್ಯುತ್ ದರ ಹೆಚ್ಚಳ ಮಾಡಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದಲ್ಲಿ ಎಲ್ಲಾ ದರವೂ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಮಹಿಳೆಯರಿಗೆ ಬಸ್ ಉಚಿತ ನೀಡಿ ಬಳಿಕ ಬಸ್ ದರವನ್ನು ಹೆಚ್ಚಿಸಿತು. ಬಳಿಕ ಮೆಟ್ರೋ ದರ ದುಪ್ಪಟ್ಟು ಹೀಗೆ ಒಂದಾದ ಮೇಲೊಂದು ದರ ಏರಿಕೆ ಮಾಡಿದರೆ ಹೇಗೆ? ಇರುವ ಸಂಬಳದಲ್ಲಿ ಬದುಕು ನಡೆಸುವುದು ಹೇಗೆ ಎಂದು ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ವಿದ್ಯುತ್ ದರ ಏರಿಕೆಯ ಬಗ್ಗೆ ಇಂಧನ ಸಚಿವ ಕೆ.ಜೆ ಜಾರ್ಜ್ ಮಾತನಾಡಿದ್ದು, 2002ರಲ್ಲಿ ನಮ್ಮ ಕೆಇಬಿ ಇತ್ತು. ಆಗ ಆಗಿನ ಸರ್ಕಾರ ಅದನ್ನು ವಿವಿಧ ವಿಭಾಗಗಳನ್ನಾಗಿ ಮಾಡಿದರು. ಈ ಸಮಯದಲ್ಲಿ ನಮ್ಮ ಕೆಇಬಿನಲ್ಲಿದ್ದ ಸುಮಾರು ಮೂವತ್ತು ಸಾವಿರ ಉದ್ಯೋಗಿಗಳನ್ನು ಬೇರೆ ಬೇರೆ ಎಸ್ಕಾಂಗಳಿಗೆ ಕೊಟ್ಟರು. ಅವತ್ತು ಅವರಿಗೆ ಕೊಡಬೇಕಾದ ಪಿಂಚಣಿ ಹಾಗೂ ಗ್ರ್ಯಾಚುಟಿ ಹಣವನ್ನು ಕೆಪಿಟಿಸಿಎಲ್ಗೆ ಒಪ್ಪಿಸಿದರು.
ಕೆಪಿಟಿಸಿಎಲ್ಗೆ ಉದ್ಯೋಗಿಗಳಿಗೆ ಕೊಟ್ಟರೂ ಸರ್ಕಾರ ಕೆಪಿಟಿಸಿಎಲ್ಗೆ ದುಡ್ಡು ಕೊಡುತ್ತಿತ್ತು. ಸುಮಾರು ಹನ್ನೆರಡು ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರ ಕೊಟ್ಟಿದೆ. ಹಳೆಯ ಉದ್ಯೋಗಿಗಳು ಇನ್ನೂ ಇದ್ದಾರೆ. ಅವರು ನಿವೃತ್ತಿ ಆಗುವ ಹೊತ್ತಿದೆ ಪಿಂಚಣಿ ಹಾಗೂ ಗ್ರ್ಯಾಚುಟಿ ಹಣವನ್ನು ಕೊಡಬೇಕಲ್ಲಾ ಈ ಹಿನ್ನೆಲೆಯಲ್ಲಿ ದರ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಇನ್ನು ರಾಜ್ಯದಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ ಲೋಡ್ ಶೆಡ್ಡಿಂಗ್ ಕೂಡ ಶುರುವಾಗಿದ್ದು, ಜನ ಹೈರಾಣಾಗಿ ಹೋಗುತ್ತಿದ್ದಾರೆ. ದುರಸ್ತಿ ಕಾರ್ಯದ ನೆಪದಲ್ಲಿ ದಿನಗಟ್ಟಲೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ. ಈಗಾಗಲೇ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಕಡಿಮೆಯಾಗಿದ್ದು, ನಿರೀಕ್ಷೆಯಂತೆ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಹೀಗಾಗಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದ್ದು, ದರ ಹೆಚ್ಚಾದರೂ ಕೂಡ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ












Click it and Unblock the Notifications