Karnataka Rains: ಚಂಡಮಾರುತ ಪ್ರಸರಣ, ರಾಜ್ಯದಲ್ಲಿ ಮೇ 25ರಿಂದ ಭಾರೀ ಮಳೆ, ಹವಾಮಾನ ಮುನ್ಸೂಚನೆ
ಬೆಂಗಳೂರು, ಮೇ 23: ಕರ್ನಾಟಕದಾದ್ಯಂತ ಪೂರ್ವ ಮುಂಗಾರು ಮಳೆ ಚುರುಕಾಗಿದ್ದು, ವಿವಿಧೆಡೆ ಸಾಧಾರಣದಿಂದ ಭಾರೀ ಮಳೆ ಆಗುತ್ತಿದೆ. ಕಳೆದ ಎರಡು ದಿನಗಳಿಂದ ಕೊಂಚ ತಣ್ಣಗಾಗಿದ್ದ ಮಳೆರಾಯ ಮತ್ತೆ ಅಬ್ಬರಿಸಲು ಕಾಯುತ್ತಿದ್ದಾನೆ. ಶುಕ್ರವರದ ಹೊತ್ತಿಗೆ ಮಳೆ ಸ್ವಲ್ಪ ತಗ್ಗಿದೆ. ಮೇ 25ರಿಂದ ಮತ್ತೆ ಆರ್ಭಟಿಸುವ ಮುನ್ಸೂಚನೆ ಸಿಕ್ಕಿದೆ. 'ರೆಡ್ ಅಲರ್ಟ್'ನಿಂದ ಯೆಲ್ಲೋ ಅಲರ್ಟ್ಗೆ ಮರಳಿದ್ದ ಕರಾವಳಿ ಜಿಲ್ಲೆಗಳು ಇದೀಗ ಮತ್ತೆ 'ರೆಡ್ ಅಲರ್ಟ್' ಪಡೆದುಕೊಂಡಿವೆ. ಬದಲಾದ ಹವಾಮಾನದಿಂದಾಗಿ ಮೇ 25 ರಿಂದ ರಾಜ್ಯದಲ್ಲಿ ಮತ್ತೆ ಧಾರಾಕಾರ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 48 ಗಂಟೆ (ಮೇ 25) ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಲಿದ್ದು, ಮತ್ತೆ ಹಲವೆಡೆ ಗುಡುಗು, ಮಿಂಚು ಸಹಿತ ವ್ಯಾಪಕ ಮಳೆ ಆಗಲಿದೆ. ಮುಂದಿನ ಭಾನುವಾರದಿಂದ ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಅತ್ಯಧಿಕ ಭಾರೀ ಮಳೆ ಆಗಲಿದೆ. ಸುಮಾರು 200 ಮಿಲಿ ಮೀಟರ್ಗಿಂತಲೂ ಹೆಚ್ಚಿನ ಮಳೆ ಸಾಧ್ಯತೆ ಇದೆ. ಈ ಕಾರಣಕ್ಕೆ ಈ ಮೂರು ಜಿಲ್ಲೆಗಳಿಗೆ ಎರಡು ದಿನ 'ರೆಡ್ ಅಲರ್ಟ್' ಘೋಷಿಸಲಾಗಿದೆ.

ಮೇ 29ರವರೆಗಿನ ಅವಧಿಯಲ್ಲಿ ಬೆಳಗಾವಿ, ಧಾರವಾಡ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗಗ, ರಾಮನಗರ ಜಿಲ್ಲೆಗಳಲ್ಲಿ 110 ಮಿಲಿ ಮೀಟರ್ಗೂ ಹೆಚ್ಚಿನ ಮಳೆ ಆಗುವ ಸಂಭವವಿದೆ. ಒಂದೊಂದು ಜಿಲ್ಲೆಗಳಲ್ಲಿ ಒಂದೊಂದು ದಿನ ಭಾರೀ ಮಳೆ ಆಗುವ ಲಕ್ಷಣ ಇದೆ. ಈ ಕಾರಣದಿಂದ 'ಆರೆಂಜ್ ಅಲರ್ಟ್' ಕೋಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 5 ದಿನ ಮಳೆ ಸಂಭವ
ಇನ್ನುಳಿದಂತೆ ಕೆಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಉತ್ತಮ ಮಳೆ ಆಗಲಿದ್ದು, ಅವುಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಒಟ್ಟಾರೆ ಮುಂದಿನ ಐದರಿಂದ ಆರು ದಿನಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಆಗಲಿದೆ. ಮಳೆ ಬೀಳುವ ಪ್ರದೇಶಗಳಲ್ಲಿ ತಾಪಮಾನ ಕುಸಿಯಲಿದ್ದು, ಎಲ್ಲೆಡೆ ಮಬ್ಬು ವಾತಾವರಣ, ತಂಪು ಗಾಳಿ ಬೀಸಲಿದೆ. ಕರಾವಳಿ ಸೇರಿದಂತೆ ಒಳನಾಡಿನ ಕೆಲವೆಡೆ ಗಾಳಿ ಬೀಸುವಿಕೆ ಹೆಚ್ಚಾಗಲಿದೆ.

ಭಾರೀ ಮಳೆ ಹೆಚ್ಚಾಗಲು ಕಾರಣವೇನು?
ದಕ್ಷಿಣ ಕೊಂಕಣ-ಗೋವಾ ಕರಾವಳಿಯ ಮಧ್ಯ ಅರೇಬ್ಬಿ ಸಮುದ್ರದ ಮೇಲಿಂದ ಉತ್ತರ ತೆಲಂಗಾಣದವರೆಗೆ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಇದು ಹೀಗೆ ಮುಂದುವರಿದರೆ ಚಂಡಮಾರುತದ ಪರಿಚಲನೆಯಾಗಿ ಬದಲಾಗಬಹುದು. ಸದ್ಯ ಅದು ಸರಾಸರಿ ಸಮುದ್ರ ಮಟ್ಟದಿಂದ 1.5 ಮತ್ತು 5.8 ಕಿ.ಮೀ ಎತ್ತರದಲ್ಲಿದೆ. ಬಂಗಾಳಕೊಲ್ಲಿ ಭಾಗದಲ್ಲಿ ಸಣ್ಣ ಪುಟ್ಟ ಬದಲಾವಣೆಗಳು, ಸ್ಟ್ರಫ್ ಸೃಷ್ಟಿಯಾಗಿದೆ. ಈ ಕಾರಣದಿಂದ ಕರ್ನಾಟಕದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುತ್ತಿದೆ.
ಮುಂಗಾರು ಮಳೆ ಆರಂಭದ ಅಪ್ಡೇಟ್ಸ್
ಮುಂದಿನ 2-3 ದಿನಗಳಲ್ಲಿ ಕೇರಳದಲ್ಲಿ ಮಾನ್ಸೂನ್ ಆರಂಭಕ್ಕೆ ಅನುಕೂಲಕರ ವಾತಾವರಣ ಇದೆ. ಈ ಬಾರಿ ಮೂರು ನಾಲ್ಕು ದಿನ ಮೊದಲೇ ಮಾನ್ಸೂನ್ ಮಾರುತುಗಳು ಕೇರಳ ಪ್ರವೇಶಿಸಬಹುದು. ದಕ್ಷಿಣ ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶಗಳಲ್ಲಿ, ಲಕ್ಷದ್ವೀಪ ಪ್ರದೇಶದ ಕೆಲವು ಭಾಗಗಳು, ಕೇರಳ, ಕರ್ನಾಟಕ, ತಮಿಳುನಾಡು ಹಾಗೂಬಂಗಾಳ ಕೊಲ್ಲಿಯ ದಕ್ಷಿಣ ಮತ್ತು ಮಧ್ಯ ಭಾಗಗಳಲ್ಲಿ ನೈಋತ್ಯ ಮಾನ್ಸೂನ್ ಪ್ರವೇಶಕ್ಕೆ ಉತ್ತಮ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ನೆನ್ನೆ ಸುರಿದ ಮಳೆ ಪ್ರಯಾಣ, ವಿವರ
ಉತ್ತರ ಕನ್ನಡದ ಕಾರವಾರದಲ್ಲಿ 156.5 ಮಿಲಿ ಮೀಟರ್, ಬೆಳಗಾವಿ ಖಾನಾಪುರದಲ್ಲಿ 106, ಹೊನ್ನಾವರ 92.5 ಬೀದರ್ 86.5, ಉತ್ತರ ಕನ್ನಡದ ಅಸ್ನೋಟಿ 85 ಮಿಲಿ ಮೀಟರ್ ಮಳೆ ದಾಖಲಾಗಿದೆ. ಉಳಿದಂತೆ ಉತ್ತರ ಕನ್ನಡ ಕುಮಟಾದಲ್ಲಿ 70 ಮಿ.ಮೀ., ಚಿಂಚೋಳಿ 70 ಮಿ.ಮೀ., ಉಡುಪಿಯ 50 ಕೋಟ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಲ್ಲಿ 40, ಮಂಗಳೂರು 40, ಬೀದರ್ ನ ಮಂಠಾಳ 40, ಬೆಳಗಾವಿಯ ಲೋಂಡಾ 40, ಉಡುಪಿಯ ಸಿದ್ದಾಪುರ 30, ಪಣಂಬೂರು ಆಬ್ಸಿ 30, ಶಿವಮೊಗ್ಗದ ಆಗುಂಬೆ 30, ತ್ಯಾಗರ್ತಿ 30, ದಕ್ಷಿಣ ಕನ್ನಡದ ಮಾಣಿ 30, ಉತ್ತರ ಕನ್ನಡದ ಜೋಯಿಡ 30, ಬಾಗಲಕೋಟೆ ಕಲಾದಗಿ 30, ಬಾಗಲಕೋಟೆ ರಬಕವಿಯಲ್ಲಿ 30, ಬೆಳಗಾವಿ ಸೇಡಬಾಳ 3, ಧಾರವಾಡ ಹುಬ್ಬಳ್ಳಿ 3, ವಿಜಯಪುರ ಇಂಡಿ 30, ಬೆಳಗಾವಿ ಅಥಣಿ 30, ಕೊಪ್ಪಳದ ತಾವರಗೇರಾ 30, ಬಾಗಲಕೋಟೆಯ ಬಾದಾಮಿಯಲ್ಲಿ 30, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಲ್ಲಿ 20 ಮಿಲಿ ಮೀಟರ್ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತನ್ನ ವರಿದಯಲ್ಲಿ ತಿಳಿಸಿದೆ.












Click it and Unblock the Notifications