ಜೆಡಿಎಸ್ ಜೊತೆ ಮಾತುಕತೆ ನಡೆದಿಲ್ಲ; ಯಡಿಯೂರಪ್ಪ
ಬೆಂಗಳೂರು, ಮೇ 11; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನ ಮುಕ್ತಾಯಗೊಂಡಿದೆ. ಬುಧವಾರ ಸಂಜೆ ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಅಂದಾಜಿಸಿವೆ. ಸಮೀಕ್ಷೆಗಳ ಸಮೀಕ್ಷೆ ಪ್ರಕಾರ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರುವುದಿಲ್ಲ.
ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಜೆಡಿಎಸ್ ಪಕ್ಷದ ಸಹಕಾರ ಅಗತ್ಯವೇ? ಎಂಬ ಚರ್ಚೆಗಳು ಆರಂಭವಾಗಿದೆ. Poll of pollಗಳ ಪ್ರಕಾರ ಬಿಜೆಪಿ 97, ಕಾಂಗ್ರೆಸ್ 100, ಜೆಡಿಎಸ್ 25 ಮತ್ತು ಇತರರು 2 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 113.

ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದರು. ಗುರುವಾರ ಶಿವಮೊಗ್ಗದಲ್ಲಿ ಮಾತನಾಡಿದ ಅವರು, "ನಾವು 115 ರಿಂದ 117 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದೇವೆ. ಜೆಡಿಎಸ್ ಜೊತೆ ಯಾವುದೇ ಮಾತುಕತೆ ನಡೆದಿಲ್ಲ" ಎಂದು ಸ್ಪಷ್ಟಪಡಿಸಿದರು.
"ನಮಗೆ ನೂರಕ್ಕೆ ನೂರರಷ್ಟು ವಿಶ್ವಾಸವಿದೆ, ನಾವು ಗೆಲ್ಲುತ್ತೇವೆ. ಕರ್ನಾಟಕದ ಜನರ ನಾಡಿಮಿಡಿತ ನಮಗೆ ಗೊತ್ತಿದೆ. ಬಿಜೆಪಿಗೆ ಬಹುಮತ ಬರುತ್ತದೆ. ಸರ್ಕಾರ ರಚನೆ ಮಾಡುತ್ತೇವೆ" ಎಂದು ಬಿ. ಎಸ್. ಯಡಿಯೂರಪ್ಪ ಹೇಳಿದರು.

ಸಿಂಗಾಪುರಕ್ಕೆ ಪ್ರಯಾಣ; ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನ ಪೂರ್ಣಗೊಂಡ ಬಳಿಕ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಮತ ಎಣಿಕೆ ಕಾರ್ಯ ಮೇ 13ರ ಶನಿವಾರ ನಡೆಯಲಿದೆ. ಶನಿವಾರ ಅವರು ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ.
ಹುಬ್ಬಳ್ಳಿಯಲ್ಲಿ ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಮತದಾನೋತ್ತರ ಸಮೀಕ್ಷೆಗಳು ಕಳೆದ ಬಾರಿ ಕಾಂಗ್ರೆಸ್ 107ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿದ್ದವು. ಆದರೆ ಫಲಿತಾಂಶದ ದಿನ ಅದು ಉಲ್ಟಾ ಆಯಿತು" ಎಂದರು.
"ಈಗಲೂ ನಮಗೆ ಇದೇ ನಂಬಿಕೆ ಇದೆ. ನರೇಂದ್ರ ಮೋದಿ ಅವರ ಪ್ರಚಾರ ನಮಗೆ ಪ್ಲಸ್ ಆಗಿದೆ. ಯುವಕರು ಮತ್ತು ಮಹಿಳೆಯರು ಬಿಜೆಪಿ ಪರವಾಗಿ ಮತದಾನ ಮಾಡಿದ್ದಾರೆ. ನಮಗೆ ವಿಶ್ವಾಸವಿದೆ, ಸಂಪೂರ್ಣ ಬಹುಮತದೊಂದಿಗೆ ನಾವು ಸರ್ಕಾರ ರಚನೆ ಮಾಡುತ್ತೇವೆ" ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಮತಯಂತ್ರದಲ್ಲಿ ಭವಿಷ್ಯ ಭದ್ರ; ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಮೇ 13ರ ಶನಿವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಮತದಾನ ಪ್ರಮಾಣ ಅಧಿಕವಾಗಿದ್ದು, ಜನರು ತಮ್ಮ ತೀರ್ಪು ನೀಡಿದ್ದಾರೆ. ಆದರೆ ಯಾರಿಗೆ ಬೆಂಬಲ ಸಿಕ್ಕಿದೆ? ಎಂದು ಕಾದು ನೋಡಬೇಕು.
ಚುನಾವಣೋತ್ತರ ಸಮೀಕ್ಷೆಗಳ ಬಳಿಕ ರಾಜಕೀಯ ಪಕ್ಷಗಳು ಲೆಕ್ಕಾಚಾರದಲ್ಲಿ ಮುಳುಗಿವೆ. ಯಾರಿಗೆ ಬಹುಮತ ಬರಲಿದೆ? ಎಂಬುದು ಕುತೂಹಲ. ಅಲ್ಲದೇ ಯಾವ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರು? ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಲಿದೆ ಎಂದು ಹೇಳಿವೆ. ಇದು ನಾಯಕರ ಉತ್ಸಾಹವನ್ನು ಹೆಚ್ಚಿಸಿವೆ. ಆದರೆ ಸ್ಪಷ್ಟ ಬಹುಮತ ಬರುವುದಿಲ್ಲ ಎಂದು ಸಮೀಕ್ಷೆಗಳ ಸಮೀಕ್ಷೆಗಳು ಹೇಳಿವೆ. ಆದ್ದರಿಂದ ಎರಡೂ ಪ್ರಮುಖ ಪಕ್ಷಗಳ ನಾಯಕರು ನಮಗೆ ಗೆಲುವು ಎಂಬ ವಿಶ್ವಾಸದಲ್ಲಿದ್ದಾರೆ.
ಜನರು ಮತದಾನ ಮಾಡಿ ತಮ್ಮ ಕರ್ತವ್ಯ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಅವರು ಗೆಲ್ಲಬಹುದು, ಇವರು ಗೆಲ್ಲಬಹುದು ಎಂಬ ಲೆಕ್ಕಾಚಾರ, ಬೆಟ್ಟಿಂಗ್ ನಡೆಯುತ್ತಿದೆ. ಶನಿವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ರಾಜ್ಯದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರಲಿದೆ? ಎಂಬ ಸ್ಪಷ್ಟ ಚಿತ್ರಣ ಲಭ್ಯವಾಗುವ ನಿರೀಕ್ಷೆ ಇದೆ.












Click it and Unblock the Notifications