KPSC: ಕೆಪಿಎಸ್ಸಿ ಭ್ರಷ್ಟ ಅಧಿಕಾರಿಗಳಿಗೆ ಕರವೇ ನಾರಾಯಣಗೌಡ್ರು ಎಚ್ಚರಿಕೆ!
ಕೆಪಿಎಸ್ಸಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕನ್ನಡದ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಪಿಎಸ್ಸಿಯಲ್ಲಿರುವ ಭ್ರಷ್ಟ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಿರುವ ಅವರು ಸಮಸ್ಯೆ ಸರಿಪಡಿಸದೇ ಇದ್ದರೆ ಮುಂದೆ ಆಗುವ ಅನಾಹುತಕ್ಕೆ ನೀವೆ ಹೊಣೆ ಎಂದಿದ್ದಾರೆ.
ಕೆಪಿಎಸ್ಸಿ ಪರೀಕ್ಷೆಯಲ್ಲಿ ಕನ್ನಡ ಅನುವಾದ ತಪ್ಪಾಗಿದ್ದ ಕಾರಣ ಉತ್ತರ ಬರೆಯಲು ಅಭ್ಯರ್ಥಿಗಳು ಪರದಾಡಿದ್ದರು. ಇದೀಗ ಕೆಪಿಎಸ್ಸಿ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿರುವ ಕರ್ನಾಟಕ ರಕ್ಷಣಾ ವೇದಿಕೆ, ವಿದ್ಯಾರ್ಥಿಗಳ ಹೋರಾಟಕ್ಕೆ ಕೈಜೋಡಿಸಿದೆ.

ಕನ್ನಡ ನೆಲದ ಮಕ್ಕಳಿಗೆ ಕೆಲಸ ಸಿಗಬೇಕು, ಕನ್ನಡ ರಾಮಯ್ಯ ಸಿದ್ದರಾಮಯ್ಯ ಎಂದು ಕರೆಯಲಾಗುತ್ತದೆ. ಕನ್ನಡದ ಮಕ್ಕಳಿಗೆ ಸಹಾಯ ಮಾಡಿ ಸರ್ವಕಾಲಕ್ಕೂ ನೆನಪಿಟ್ಟುಕೊಳ್ಳುವಂತೆ ಮಾಡಬೇಕು. ಸಿದ್ದರಾಮಯ್ಯನವರೇ ಕೂಡಲೇ ಕೆಪಿಎಸ್ಸಿ ಅಭ್ಯರ್ಥಿಗಳ ಸಮಸ್ಯೆಗೆ ಸ್ಪಂದಿಸಿ ಎಂದು ಮನವಿ ಮಾಡಿದ್ದಾರೆ.
ಕೆಪಿಎಸ್ಸಿ ಅಧಿಕಾರಿಗಳಿಗೆ ಎಚ್ಚರಿಕೆ
ಕರ್ನಾಟಕದ ನೆಲದಲ್ಲಿ ಕನ್ನಡಿಗರ ಮಕ್ಕಳಿಗೆ ಭವಿಷ್ಯವಿಲ್ಲ ಎಂದರೆ ನಾವು ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಕೆಪಿಎಸ್ಸಿ ಭ್ರಷ್ಟ ಅಧಿಕಾರಿಗಳಿಗೆ ಇದೇ ಕೊನೆಯ ಎಚ್ಚರಿಕೆ. ಪದೇ ಪದೇ ನಿಮ್ಮಿಂದ ಕನ್ನಡದ ಮಕ್ಕಳಿಗೆ ಅನ್ಯಾಯವಾಗುತ್ತಿದ್ದು, ಆ ಕೆಲಸದಲ್ಲಿ ಇರಲು ನೀವು ಯೋಗ್ಯರಲ್ಲ, ನೀವು ಇರಬೇಕಾಗಿರುವುದು ಪರಪ್ಪನ ಅಗ್ರಹಾರ ಜೈಲಿನಲ್ಲಿ. ಸಮಸ್ಯೆ ಸರಿಪಡಿಸದೇ ಇದ್ದರೆ ಸಾವಿರಾರು ಕರವೇ ಕಾರ್ಯಕರ್ತರು ಕೆಪಿಎಸ್ಸಿ ಕಚೇರಿಗೆ ನುಗ್ಗಲಿದ್ದಾರೆ, ಅಲ್ಲಿ ಆಗುವ ಅನಾಹುತಕ್ಕೆ ನೀವೇ ಹೊಣೆ. ಕನ್ನಡ ಮಕ್ಕಳ ಭವಿಷ್ಯಕ್ಕೆ ಸಮಾಧಿ ಕಟ್ಟಲು ಹೊರಟಿರುವ ನೀವೆ ಹೊಣೆ ಹೊತ್ತು ಸಮಸ್ಯೆಯನ್ನು ಸರಿಮಾಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಇದು ಕನ್ನಡಿಗರ ಅಳಿವು ಉಳಿವಿನ ಪ್ರಶ್ನೆ, ಕನ್ನಡಿಗರ ಮಕ್ಕಳ ಬದುಕು ಹಸನಗೊಳ್ಳಬೇಕಾದರೆ ಎಲ್ಲಾ ಕನ್ನಡಿಗರು ಕೆಪಿಎಸ್ಸಿ ಅಭ್ಯರ್ಥಿಗಳ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ನಾರಾಯಣಗೌಡ್ರು ಮನವಿ ಮಾಡಿದ್ದಾರೆ. ನಾಳೆ (ಫೆಬ್ರವರಿ 18) 11 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಕೆಎಎಸ್ ಮರುಪರೀಕ್ಷೆಯಲ್ಲೂ ಎಡವಟ್ಟುಗಳು ಮುಂದುವರೆದಿವೆ. ಕನ್ನಡ ಪದಗಳ ಅನುವಾದ ತಪ್ಪಾಗಿದ್ದು ಕನ್ನಡ ಮಾಧ್ಯಮ ಪರೀಕ್ಷಾರ್ಥಿಗಳಿಗೆ ಸಮಸ್ಯೆಯಾಗಿತ್ತು, ಶಬ್ದಕೋಶದಲ್ಲೇ ಇಲ್ಲದಿರುವ ಪದಗಳನ್ನು ಪರೀಕ್ಷೆಯಲ್ಲಿ ಕೊಟ್ಟರೆ ಅರ್ಥವಾಗುವುದಾದರೂ ಹೇಗೆ ಎಂದು ಕರವೇ ಆಕ್ರೋಶ ವ್ಯಕ್ತಪಡಿಸಿದೆ.
ಇಂದು (ಸೋಮವಾರ) ಸಂಜೆ 5 ಗಂಟೆಯಿಂದ ಮಂಗಳವಾರ ಸಂಜೆ 5 ಗಂಟೆಯವರೆಗೆ ಟ್ವಿಟರ್ ಅಭಿಯಾನ ಮಾಡುತ್ತಿದ್ದು, ಕೆಪಿಎಸ್ಸಿ ಪರೀಕ್ಷೆ ಫಲಿತಾಂಶವನ್ನು ತಡೆಹಿಡಿಯುವಂತೆ ಆಗ್ರಹಿಸಿದೆ. ಕನ್ನಡ ಮಾಧ್ಯಮ ಅಭ್ಯರ್ಥಿಗಳ ಜೊತೆ ತಾನು ನಿಲ್ಲುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಹೇಳಿದೆ.












Click it and Unblock the Notifications