ಶ್ರೀಗಳ ಕೇಸ್, ವಿಚಾರಣೆಯಿಂದ ಹಿಂದೆ ಸರಿದ ಜಡ್ಜ್
ಬೆಂಗಳೂರು, ಜ. 7 : ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಮತ್ತೊಬ್ಬರು ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಈ ಹಿಂದೆ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದರು.
ರಾಘವೇಶ್ವರ ಶ್ರೀಗಳು ತಮ್ಮ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ಮೇಲ್ಮನವಿಯ ವಿಚಾರಣೆ ಮಂಗಳವಾರ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ, ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆಯಿತು. [ಶ್ರೀಗಳ ಪ್ರಕರಣ, ವಿಚಾರಣೆಯಿಂದ ಹಿಂದೆ ಸರಿದ ಜಡ್ಜ್]
ಬೆಳಗ್ಗೆ ಶ್ರೀಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ. ಆಚಾರ್ಯ ಅವರು, ನನ್ನ ಕಕ್ಷಿದಾರರು ಅತ್ಯಾಚಾರ ಎಸಗಿಲ್ಲ. ಇದೆಲ್ಲಾ ಸುಳ್ಳು ಆರೋಪ ಎಂದು ಪ್ರತಿಪಾದಿಸಿದರು. ಶ್ರೀಗಳ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರ್ಟ್ಗೆ ಮನವಿ ಮಾಡಿದರು. [ರಾಘವೇಶ್ವರ ಶ್ರೀಗಳಿಗೆ ನಿಷ್ಠ : ಹವ್ಯಕ ಮಹಾಮಂಡಲ]

ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣದ ಸಿಐಡಿ ತನಿಖೆ ನಡೆಯುತ್ತಿದೆ. ಇದು ಯಾವ ಹಂತದಲ್ಲಿದೆ? ಚಾರ್ಜ್ಶೀಟ್ ಸಲ್ಲಿಸಲಾಗಿದೆಯೇ? ಮುಂತಾದ ಪ್ರಶ್ನೆಗಳನ್ನು ಕೇಳಿದರು. ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಅವರು ಬಾಕಿ ಉಳಿದಿರುವ ವೈದ್ಯಕೀಯ ಪರೀಕ್ಷೆಗೆ ತನಿಖಾಧಿಕಾರಿಗಳ ಜೊತೆ ಸ್ವಾಮೀಜಿ ಸಹಕರಿಸುತ್ತಿಲ್ಲ ಎಂದು ಕೋರ್ಟ್ಗೆ ಮಾಹಿತಿ ನೀಡಿದರು. [ರಾಘವೇಶ್ವರ ಶ್ರೀಗಳಿಗೆ 13 ಪರೀಕ್ಷೆ ಮಾಡಲಾಗಿದೆ]
ಈ ಕಾರಣಕ್ಕಾಗಿಯೇ ಸ್ವಾಮೀಜಿಯವರ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಮನವಿ ಸಲ್ಲಿಸಲಾಗುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ತನಿಖೆಯ ಎಲ್ಲ ವಿವರಗಳನ್ನು ಒಪ್ಪಿಸಿ ಎಂದು ಸೂಚಿಸಿದ ಕೋರ್ಟ್ ಕಲಾಪವನ್ನು ಮುಂದೂಡಿತು.
ಆದರೆ, ಮಧ್ಯಾಹ್ನ ಕಲಾಪ ಆರಂಭವಾಗಿ ಪ್ರಕರಣ ವಿಚಾರಣೆಗೆ ಬರುತ್ತಿದ್ದಂತೆಯೇ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರು ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಪ್ರಕಟಿಸಿದರು. ಹಿಂದೆ ಈ ಪ್ರಕರಣದ ಸಂಬಂಧ ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರೂ ವಿಚಾರಣೆಯಿಂದ ಹಿಂದೆ ಸರಿದಿದ್ದರು.












Click it and Unblock the Notifications