ಮಾನ ಮರ್ಯಾದೆ ಇದ್ರೆ ಗೃಹ ಸಚಿವರನ್ನ ಕಿತ್ತು ಹಾಕಿ: ಜೆಡಿಎಸ್ ಹೀಗಂದಿದ್ದೇಕೆ?
ರಾಜ್ಯ ಕಾಂಗ್ರೆಸ್ ಸರ್ಕಾರದ ಜಿ.ಪರಮೇಶ್ವರ್ ಅವರನ್ನು ಕೂಡಲೇ ಗೃಹ ಸಚಿವ ಸ್ಥಾನದಿಂದ ಕೆಳಗಿಳಿಸುವಂತೆ ಜೆಡಿಎಸ್ ಆಗ್ರಹಿಸಿದೆ. ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳನ್ನು ಉಲ್ಲೇಖಿಸಿರುವ ಜೆಡಿಎಸ್, ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಮೊದಲು "ಅಸಮರ್ಥ ಗೃಹ ಸಚಿವ" ಜಿ.ಪರಮೇಶ್ವರ್ ಅವರನ್ನು ಆ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ದೂರಿದೆ.
ನಿನ್ನೆ ಬೀದರ್ನಲ್ಲಿ ಹಾಡಹಗಲೇ ಎಟಿಎಂ ವಾಹನ ಸಿಬ್ಬಂದಿಯನ್ನು ಗುಂಡಿಕ್ಕಿ, ಹತ್ಯೆಗೈದು ಡಕಾಯಿತಿ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲ್ಲೂಕಿನ ಕೋಟೆಕಾರು ಬ್ಯಾಂಕ್ ಕೆ.ಸಿ.ರೋಡು ಶಾಖೆಯಲ್ಲಿ ಕೋಟ್ಯಂತರ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಜೆಡಿಎಸ್ ಹೇಳಿದೆ.

ಲೂಟಿಕೋರ ಕಾಂಗ್ರೆಸ್ ಸರ್ಕಾರ 60% ಕಮಿಷನ್ ಲೆಕ್ಕದಲ್ಲಿ ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿದ್ರೆ, ಮತ್ತೊಂದು ಕಡೆ ದರೋಡೆಕೋರರ ಅಟ್ಟಹಾಸ ಮಿತಿಮೀರಿದೆ. ಸಿದ್ದರಾಮಯ್ಯ ಅವರೇ ನಿಮ್ಮ ಆಡಳಿತ ವೈಫಲ್ಯ ಮತ್ತು ದುರಾಡಳಿತದಿಂದ ಕರ್ನಾಟಕದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದ್ದು, ತಲೆತಗ್ಗಿಸುವಂತೆ ಮಾಡಿದೆ ಎಂದು ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ತಾಲಿಬಾನ್ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಅರ್.ಅಶೋಕ್ ಕೂಡ ಆರೋಪಿಸಿದ್ದಾರೆ. ಬೀದರ್ನಲ್ಲಿ ಹಾಡಹಗಲೇ ಎಟಿಎಂ ವಾಹನವನ್ನು ದರೋಡೆ ಮಾಡಿ, ಸಿಬ್ಬಂದಿಯನ್ನು ಎಲ್ಲರೆದುರೆ ಗುಂಡಿಕ್ಕಿ ಸಾಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಅರಾಜಕತೆಯ ದುರಾಡಳಿತದಲ್ಲಿ ಅಪರಾಧಿಗಳಿಗೆ ಕಾನೂನಿನ ಭಯವಿಲ್ಲ, ಪೊಲೀಸರ ಬಗ್ಗೆ ಕ್ಯಾರೆ ಇಲ್ಲ ಎಂದು ದೂರಿದ್ದಾರೆ. ಗೃಹ ಸಚಿವ ಜಿ.ಪರಮೇಶ್ವರ್ ಅವರೇ ಈ ಕೊಲೆಗಡುಕರಿಗೆ ಅಮಾಯಕ ಪಟ್ಟ ಕಟ್ಟುತ್ತೀರೋ ಅಥವಾ ಮಾನಸಿಕ ಅಸ್ವಸ್ಥ ಎಂಬ ಪಟ್ಟ ಕಟ್ಟುತ್ತೀರೋ? ಎಂದು ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕಲ್ಬುರ್ಗಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ, ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲನ್ನು ಅಮಾನುಷವಾಗಿ ಕತ್ತರಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಅಪರಾಧ, ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇದೆ ಎಂದಿದ್ದಾರೆ.
ಓಲೈಕೆ ನೀತಿಯಲ್ಲೇ ಮುಳುಗಿರುವ ಸರ್ಕಾರದಿಂದ ದೇಶದ್ರೋಹಿಗಳನ್ನು ಮಟ್ಟಹಾಕುವ ಕೆಲಸ ರಾಜ್ಯದಲ್ಲಿ ಆಗದಿರುವ ಕಾರಣ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿದೆ. ರಾಜ್ಯದಲ್ಲಿ ಕಾನೂನಿನ ಭಯ ಇಲ್ಲದಂತಾಗಿದೆ ಎಂದು ವಿಜಯೇಂದ್ರ ಹರಿಹಾಯ್ದಿದ್ದಾರೆ.
ನಿನ್ನೆ ಕಲಬುರಗಿಯಲ್ಲಿ ನಡೆದಂತೆ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಕೆ.ಸಿ.ರೋಡಿನಲ್ಲಿ ಹಾಡಹಗಲೇ ಖದೀಮರ ಗುಂಪು ಬ್ಯಾಂಕ್ಗೆ ನುಗ್ಗಿದೆ. ಒಳಗೆ ಸುಮಾರು 12 ಕೋಟಿ ನಗದು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಒಟ್ಟು ಆರು ಮಂದಿ ದರೋಡೆಕೋರರು ಕೋಟೆಕಾರು ಬ್ಯಾಂಕ್ ಕೆ.ಸಿರೋಡ್ ಶಾಖೆಗೆ ನುಗ್ಗಿ, ಪಿಸ್ತೂಲು, ತಲ್ವಾರ್ ತೋರಿಸಿ ಲೂಟಿ ಮಾಡಿದ್ದಾರೆ. ಬಳಿಕ ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಈ ಅಪರಾಧಗಳ ವಿರುದ್ಧ ವಿಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.












Click it and Unblock the Notifications