ಪೊಲೀಸ್ ಮಹಾ ನಿರ್ದೇಶಕರಾಗಿ ಆರ್.ಕೆ.ದತ್ತಾ ನೇಮಕ
ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರಾಗಿ ರೂಪಕ್ ಕುಮಾರ್ ದತ್ತಾ ನೇಮಕವಾಗುವುದು ಬಹುತೇಕ ಖಚಿತವಾಗಿದೆ. ಓಂ ಪ್ರಕಾಶ್ ರಿಂದ ತೆರವಾಗಲಿರುವ ಸ್ಥಾನಕ್ಕೆ ದತ್ತಾ ಬರಲಿದ್ದಾರೆ.
ಬೆಂಗಳೂರು, ಜನವರಿ 27: ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕ ಮತ್ತು ನಿರೀಕ್ಷಕರಾಗಿ (ಡಿಜಿ ಐಜಿಪಿ) ಹಿರಿಯ ಪೊಲೀಸ್ ಅಧಿಕಾರಿ ರೂಪಕ್ ಕುಮಾರ್ ದತ್ತಾ ನೇಮಕವಾಗುವುದು ಬಹುತೇಕ ಖಚಿತವಾಗಿದೆ.
'ರೂಪಕ್ ಕುಮಾರ್ ದತ್ತಾರನ್ನು ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಹೊಸ ಪೊಲೀಸ್ ಮಹಾ ನಿರ್ದೇಶಕರ ನೇಮಕ ಮಾಡಲು ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದೆ. ಕೇಂದ್ರ ಸರ್ಕಾರದಿಂದ ಆದೇಶ ಬಂದ ಕೂಡಲೇ ರಾಜ್ಯ ಸರ್ಕಾರ ನೂತನ ಡಿಜಿಪಿಯನ್ನು ನೇಮಿಸಿ ಅಧಿಕೃತ ಆದೇಶವನ್ನು ಹೊರಡಿಸಲಿದೆ. ಇದಕ್ಕೆ ಒಂದೆರಡು ದಿನ ಬೇಕಾಗಬಹುದು ಎಂದುಕೊಳ್ಳಲಾಗಿದೆ.[ಮಂಗಳೂರು: ಇಬ್ಬರು ಪೊಲೀಸರಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ]

ಹಾಲಿ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಇದೇ ತಿಂಗಳ 31ರಂದು ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನಲೆಯಲ್ಲಿ ಸೋಮವಾರ ನಡೆದ ಉನ್ನತಾಧಿಕಾರ ಸಮಿತಿ ಪೊಲೀಸ್ ಮಹಾನಿರ್ದೇಶಕರ ಹುದ್ದೆಗಾಗಿ ದತ್ತಾ ಹೆಸರಿಗೆ ಮೊದಲ ಮನ್ನಣೆ ನೀಡಿ, ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿತ್ತು. ಆರ್.ಕೆ.ದತ್ತಾ ನೇಮಕ ಮಾಡಲು ಸ್ವತಃ ಸಿದ್ಧರಾಮಯ್ಯ ಕೂಡಾ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಇದೀಗ ರಾಜ್ಯ ಸರಕಾರದ ಕಡೆಯಿಂದ ಕೇಂದ್ರಕ್ಕೆ ಪತ್ರ ಬರೆಯಲಾಗಿದ್ದು ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ.[ಪೊಲೀಸ್ ಇಲಾಖೆಯಲ್ಲಿ ಭಾರಿ ವರ್ಗಾವಣೆ, ಎಲ್ಲಿಗೆ ಯಾರು?]
ರೂಪಕ್ ಕುಮಾರ್ ದತ್ತಾ ಯಾರು?
1981ರ ಕರ್ನಾಟಕ ಕೇಡರಿನ ಐಪಿಎಸ್ ಅಧಿಕಾರಿ ರೂಪಕ್ ಕುಮಾರ್ ದತ್ತಾ ಹೆಸರು ಮೊದಲ ಬಾರಿಗೆ ದೊಡ್ಡ ಸದ್ದು ಮಾಡಿದ್ದು ಗಣಿ ಹಗರಣದ ಸಂದರ್ಭದಲ್ಲಿ. ಅವತ್ತು ಲೋಕಾಯುಕ್ತದಲ್ಲಿ ಎಡಿಜಿಪಿ ಆಗಿದ್ದ ದತ್ತಾ ಗಣಿ ಹಗರಣ ಹೊರಗೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸೇವೆಯಲ್ಲಿ ಅವರು ಇವತ್ತಿನವರೆಗೆ ಎಲ್ಲೂ ಹೆಸರು ಕೆಡಿಸಿಕೊಂಡವರಲ್ಲ.
ಲೋಕಾಯುಕ್ತದ ನಂತರ ದತ್ತಾ ಕೇಂದ್ರ ಸೇವೆಗೆ ನಿಯೋಜಿತರಾದರು. ಅಲ್ಲಿಂದ ಸಿಬಿಐನಲ್ಲಿ ಕಲ್ಲಿದ್ದಲು ಹಗರಣ, 2 ಜಿ ಸ್ಪೆಕ್ಟ್ರಂ ಹಗರಣಗಳ ತನಿಖೆಯ ಹೊಣೆಯನ್ನು ಹೊತ್ತುಕೊಂಡಿದ್ದರು. ಹಾಗೆ ನೋಡಿದರೆ ಸೇವಾ ಹಿರಿತನದ ಆಧಾರದಲ್ಲಿ ದತ್ತಾ ಸಿಬಿಐ ನಿರ್ದೇಶಕರಾಗುವ ಸಾಧ್ಯತೆಯೂ ಇತ್ತು. ಆದರೆ ಅವರನ್ನು ಗೃಹ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿದ್ದರಿಂದ ಹುದ್ದೆ ಕೈತಪ್ಪಿತ್ತು.
ಕಾನೂನು ಪದವಿ ಆರೋಪ
ದತ್ತಾ ಈ ಹಿಂದೆ ಸೇವೆಯಲ್ಲಿರುವಾಗಲೇ ಕಾನೂನು ಪದವಿ ಪಡೆದ ಆರೋಪಕ್ಕೆ ಗುರಿಯಾಗಿದ್ದರು. ಇದು ಸುಪ್ರಿಂ ಕೋರ್ಟ್ ಮೆಟ್ಟಿಲೂ ಹತ್ತಿತ್ತು. ಆದರೆ ಕೆಲವು ದಿನಗಳ ಹಿಂದೆ ಸುಪ್ರಿಂ ಕೋರ್ಟ್ ಈ ಪ್ರಕರಣವನ್ನು ರದ್ದುಗೊಳಿಸಿತ್ತು. ಹೀಗಾಗಿ ಸದ್ಯ ದತ್ತಾ ಆರೋಪ ರಹಿತರಾಗಿದ್ದಾರೆ.
ಒಂದೊಮ್ಮೆ ದತ್ತಾ ಬರಲೊಪ್ಪದಿದ್ದರೆ, ಡಿಜಿ ಐಜಿ ಹುದ್ದೆಗೆ ಮಹಿಳಾ ಅಧಿಕಾರಿ ನೀಲಮಣಿ ರಾಜು ಅಥವಾ ಕರ್ನಾಟಕ ಮೂಲದ ಕಿಶೋರ್ ಚಂದ್ರ ಅವರಿಗೆ ಅವಕಾಶ ಸಿಗಲಿದೆ.












Click it and Unblock the Notifications