Karnataka rain: ನ. 15ರಿಂದ ಹಿಂಗಾರು ಚುರುಕು, ಇಷ್ಟು ಜಿಲ್ಲೆಗಳಲ್ಲಿ ವರುಣಾರ್ಭಟ: ವರದಿ
ಬೆಂಗಳೂರು, ನವೆಂಬರ್ 14: ಕರ್ನಾಟಕದಲ್ಲಿ ತುಸು ವಿರಾಮ ನೀಡಿರುವ ಹಿಂಗಾರು ಮತ್ತೆ ಆರ್ಭಟಿಸುವ ಮುನ್ಸೂಚನೆ ಇದೆ. ದೀಪಾವಳಿಗೆ ಬಿಡುವು ನೀಡಿರುವ ವರುಣ ನವೆಂಬರ್ 15ರಿಂದ ಮತ್ತೆ ಕರಾವಳಿ ಹಾಗೂ ಒಳನಾಡಿನಲ್ಲಿ ಸಕ್ರಿಯವಾಗಲಿದ್ದಾನೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಕೆಲವು ದಿನಗಳಿಂದ ದುರ್ಬಲವಾಗಿರುವ ಹಿಂಗಾರು ಮಳೆ ಗುರುವಾರ ನವೆಂಬರ್ 17ರಿಂದ ಬಿರುಸುಗೊಳ್ಳಲಿದೆ. ಈಗಾಗಲೇ ಬಂಗಾಳಕೊಲ್ಲಿಯಲ್ಲಿ ಸಾಗರದಲ್ಲಿ ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗಿದೆ. ಇದರ ಪರಿಣಾಮವು ಕರ್ನಾಟಕದ ಹವಾಮಾನದ ಮೇಲಾಗಲಿದೆ ಎಂದು ಅಂದಾಜಿಸಲಾಗಿದೆ.

ಕರ್ನಾಟಕ ದಕ್ಷಿಣ ಒಳನಾಡು ಮತ್ತೆ ಭಾರೀ ಮಳೆಗೆ ಸಾಕ್ಷಿ ಆಗಲಿದೆ. ಬುಧವಾರ ನವೆಂಬರ್ 15ರಿಂದ ಮೂರು ದಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮಚರಾಜನಗರ, ಚಿಕ್ಕಮಗಳೂರು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವವಿದೆ. ಒಂದೆರಡು ಕಡೆ ಗುಡುಗು ಮಿಂಚು ಸಹಿತ ಜೋರು ಮಳೆ ಕಂಡು ಬರಲಿದೆ.
ನವೆಂಬರ್ 20ರವರೆಗೆ ಇಲ್ಲಿ ಮಳೆ ಸಂಭವ
ನಂತರ ಎರಡು ದಿನ ಅಂದರೆ ನವೆಂಬರ್ 20ರವರೆಗೆ ಮೇಲಿನ ಜಿಲ್ಲೆಗಳು ಸೇರಿದಂತೆ ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ತುಮಕೂರು, ಶಿವಮೊಗ್ಗ, ಕೊಡಗು, ಚಿಕ್ಕಬಳ್ಳಾಪುರ, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದೇ ಅವಧಿಯಲ್ಲಿ ನವೆಂಬರ್ 17ರಿಂದ ಮೂರು ದಿನ ಕರಾವಳಿ ಭಾಗದ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ನಿರೀಕ್ಷೆ ಇದೆ. ಆದರೆ ಉತ್ತರ ಕರ್ನಾಟಕದ ಭಾಗದವರಿಗೆ ಕಹಿ ಸುದ್ದಿ ಏನೆಂದರೆ, ಇಲ್ಲಿ ಯಾವ ಜಿಲ್ಲೆಗಳಿಗೂ ಮಳೆ ಮುನ್ಸೂಚನೆ ಇಲ್ಲ ಎನ್ನಲಾಗಿದೆ.
ಉತ್ತರ ಕರ್ನಾಟಕಕ್ಕೆ ಶುಷ್ಕ ವಾತಾವರಣ
ಹೌದು, ಉತ್ತರ ಕರ್ನಾಟಕದ ಯಾವ ಜಿಲ್ಲೆಗಳಿಗೂ ಸದ್ಯದ ಮುನ್ಸೂಚನೆ ಪ್ರಕಾರ ಮುಂದಿನ ದಿನಗಳಲ್ಲಿ ಎಲ್ಲಿಯೂ ಮಳೆ ಆಗುವುದಿಲ್ಲ. ಬದಲಾಗಿ ಒಣ ಹವೆಯ ವಾತಾವರಣವೇ ಮುಂದುವರಿಯಲಿದೆ. ಎಲ್ಲೆಡೆ ಅಧಿಕ ಬಿಸಿಲು, ಒಂದೆರಡು ಕಡೆಗಳಲ್ಲಿ ಬೆಳಗ್ಗೆ ಚಳಿ ಕಂಡು ಬರಲಿದೆ. ಇದರ ಹೊರತು ಈ ಭಾಗದಲ್ಲಿ ಯಾವುದೇ ಗಂಬೀರ ಬದಲಾವಣೆಗಳು ಇಲ್ಲ ಎಂದು ತಿಳಿಸಲಾಗಿದೆ.
ರಾಜ್ಯದ ಗರಿಷ್ಠ ತಾಪಮಾನ ಮಾಹಿತಿ
ಸದ್ಯ ರಾಜ್ಯದಲ್ಲಿ ಅತ್ಯಧಿಕ (ಗರಿಷ್ಠ) ತಾಪಮಾನ ಹೊನ್ನಾವರದಲ್ಲಿ 35 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಲಬುರಗಿ, ಹಾಸನದಲ್ಲಿ ತಲಾ 34 ಡಿಗ್ರಿ ಸೆಲ್ಸಿಯಸ್, ಹಾವೇರಿ ಮತ್ತು ರಾಯಚೂರಿನಲ್ಲಿ ತಲಾ 32 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ರಾಜ್ಯದ ಕನಿಷ್ಠ ತಾಪಮಾನ ಚಿಂತಾಮಣಿಯಲ್ಲಿ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಹಿತಿ ನೀಡಿದೆ.












Click it and Unblock the Notifications