'ವಸತಿ ಯೋಜನೆ ಕಂತು ಸಹಕಾರ ಸಂಘದಿಂದಲೇ ಭರಿಸಲು ಚಿಂತನೆ'
ಬೆಂಗಳೂರು, ಜೂನ್ 12: ವಸತಿ ಯೋಜನೆಯಡಿ ಮನೆ ಪಡೆಯುವ ಫಲಾನುಭವಿಗಳಿಗೆ ಮೊದಲನೇ ಕಂತಿನ ಹಣವನ್ನು ಸಹಕಾರ ಸಂಸ್ಥೆಗಳಿಂದಲೇ ಭರಿಸುವ ಚಿಂತನೆ ಸರ್ಕಾರಕ್ಕಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ ಸಾಮಾನ್ಯರಿಗೆ ವಿತರಣೆಯಲ್ಲಿ ಕೇವಲ ಫಲಾನುಭವಿ ಆಯ್ಕೆಯಲ್ಲಿ ಮಾತ್ರ ಸ್ವಲ್ಪ ವಿಳಂಬವಾಗುತ್ತದೆ.ಕಳೆದ ಬಾರಿ 12 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಿದ್ದು,8 ಲಕ್ಷ ಮನೆಗಳ ನಿರ್ಮಾಣ ಆಗಿದೆ.3 ಲಕ್ಷ ಮನೆಗಳ ನಿರ್ಮಾಣ ಮತ್ತು ವಿತರಣೆ ಬಾಕಿ ಇದೆ ಎಂದರು.
ಬಡವರಿಗೆ ಮೊದಲ ಕಂತಿನ ಹಣವನ್ನು ಸಹಕಾರ ಸಂಘಗಳ ಮೂಲಕ ಒದಗಿಸುವ ವ್ಯವಸ್ಥೆ ರೂಪಿಸುವ ಚಿಂತನೆ ನಡೆದಿದೆ.ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಮಾದರಿಯಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಮತ್ತು ಫಲಾನುಭವಿ ಆಯ್ಕೆ ವ್ಯವಸ್ಥೆ ಇದೆ.ಇದನ್ನು ರಾಜ್ಯದ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಲು ಚಿಂತನೆ ನಡೆದಿದೆ.

ಪ್ರಸಕ್ತ ಬೆಂಗಳೂರಿನಲ್ಲಿ ಕೇವಲ ಮೂರು ಅಂತಸ್ತುಗಳ ಬಹುಮಹಡಿ ವಸತಿ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತಿದೆ.ಇದನ್ನು 13 ಅಂತಸ್ತುಗಳ ಬಹುಮಹಡಿ ವಸತಿ ಸಂಕೀರ್ಣಗಳಿಗೆ ಬದಲಾಯಿಸಲು ಉದ್ದೇಶಿಸಲಾಗಿದೆ.
ಕರ್ನಾಟಕ ವಸತಿ ಮಂಡಳಿ ನಿರ್ಮಿಸಿದ ಬಹುಮಹಡಿ ವಸತಿ ಸಂಕೀರ್ಣಗಳು ಮಾರಾಟವಾಗುತ್ತಿಲ್ಲ.ಹಾಗಾಗಿ ಕೆ ಎಚ್ ಬಿಯ ಷರತ್ತುಗಳನ್ನು ಸಂಪೂರ್ಣ ತೆಗೆದು ಹಾಕಲು ನಿರ್ಧರಿಸಲಾಗಿದೆ.ಅಲ್ಲದೆ ಡೆಪಾಸಿಟ್ ಹಣವನ್ನು 50,000 ರೂ ಗಳಿಗೆ ನಿಗದಿ ಪಡಿಸಲಾಗುತ್ತಿದೆ.ಡಿಪಾಸಿಟ್ ಹಣ ಪಾವತಿಸಿದ ತಕ್ಷಣ ನೇರವಾಗಿ ಅಲಾಟ್ಮೆಂಟ್ ಮಾಡಲಾಗುತ್ತದೆ ಎಂದರು.
ಬಿಡಿಎ ಸೇರಿದಂತೆ ಸರ್ಕಾರಿ ಸ್ವಾಮ್ಯದ ವಸತಿ ನಿರ್ಮಾಣ ಸಂಸ್ಥೆಗಳನ್ನೂ ರೆರಾ ಕಾಯ್ದೆಯಡಿ ತರಲಾಗುತ್ತದೆ. ನಗರಾಭಿವೃದ್ಧಿ ಇಲಾಖೆಯನ್ನು ಇ-ಗವರ್ನೆನ್ಸ್ ಯೋಜನೆಯಡಿ ತರಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆ ಜಾರಿ ಮತ್ತು ಉಸ್ತುವಾರಿಗೆ ಆಯುಕ್ತರೊಬ್ಬರ ನೇಮಕ ಮಾಡಲಾಗುತ್ತದೆ. ಸ್ಮಾರ್ಟ್ ಸಿಟಿ ಯೋಜನೆ ಜಾರಿ ಸಂಬಂಧ ಶೀಘ್ರದಲ್ಲೇ ಕೇಂದ್ರ ನಗರಾಭಿವೃದ್ಧಿ ಸಚಿವರನ್ನು ಭೇಟಿಯಾಗಿ ಸಹಕಾರ ಕೇಳುತ್ತೇವೆ ಎಂದು ಹೇಳಿದರು.












Click it and Unblock the Notifications