ಸತೀಶ್ ಜಾರಕಿಹೊಳಿ ಭೇಟಿಯ ಅಚ್ಚರಿ ವಿಚಾರ ಬಿಚ್ಚಿಟ್ಟ ಡಾ. ಜಿ ಪರಮೇಶ್ವರ್
ಬೆಂಗಳೂರು, ಡಿಸೆಂಬರ್ 06: ರಾಜ್ಯ ರಾಜಕಾರಣದಲ್ಲಿ ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಚರ್ಚೆ ಜೋರಾಗಿದ್ದು, ಈ ಚರ್ಚೆಯ ನಡುವೆ ಹಲವು ನಾಯಕರು ಭೇಟಿಯಾಗುತ್ತಿರುವುದು ತೀವ್ರ ಕುತೂಹಲವನ್ನ ಹೆಚ್ಚಿಸಿದೆ. ಈ ನಡುವೆ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ಸತೀಶ್ ಜಾರಕಿಹೊಳಿ ಅವರನ್ನ ಭೇಟಿ ಮಾಡಿದ್ದು, ಈ ಚರ್ಚೆಯ ವಿಚಾರವನ್ನ ಪರಮೇಶ್ವರ್ ಅವರು ಬಿಚ್ಚಿಟ್ಟಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಪರಮೇಶ್ವರ್ ಅವರು ಮಾತನಾಡಿ, ನಮ್ಮ ಕ್ಷೇತ್ರಕ್ಕೆ ಮತ್ತು ಜಿಲ್ಲೆಗೆ ಕೆಲಸಗಳಾಗಬೇಕು. ಸತೀಶ್ ಜಾರಕಿಹೊಳಿ ಅವರು ಲೋಕೋಪಯೋಗಿ ಸಚಿವರಿದ್ದಾರೆ. ಬಹಳ ಮುಖ್ಯವಾದ ಖಾತೆ. ಹೀಗಾಗಿ ಭೇಟಿ ಮಾಡಲು ಹೋಗಿರುತ್ತೇವೆ. ಕೆಲವು ಸಂದರ್ಭಗಳಲ್ಲಿ ರಾಜಕೀಯ ಮಾತನಾಡಲು ಹೋಗಿರುತ್ತೇವೆ. ಇದರಲ್ಲಿ ಮುಚ್ಚುಮರೆ ಏನಿದೆ ಎಂದ ಅವರು, ಐದು ಜನ ಸೇರಿ ಎರಡು ಸಲ ಊಟಕ್ಕೆ ಸೇರಿ ರಾಜಕೀಯ ಮಾತನಾಡಿದ್ದೆವು. ಇದರಲ್ಲಿ ತಪ್ಪೇನಿದೆ. ನಾವೆಲ್ಲ ರಾಜಕಾರಣಿಗಳಲ್ಲವೇ? ನಾವು ಮಾಡುತ್ತಿರುವುದೇ ರಾಜಕಾರಣ.

ಪಕ್ಷದ ಸಿದ್ಧಾಂತಗಳೇನು, ಸರ್ಕಾರದಲ್ಲಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆಯೇ, ಇಲ್ಲವೇ? ಎಂಬುದು ಸೇರಿದಂತೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆಯೂ ಮಾತನಾಡಿರುತ್ತೇವೆ. ಅದರಲ್ಲಿ ನಿಮಗೆ ಆಶ್ಚರ್ಯ ತರುವಂತದ್ದು ಏನು ಇಲ್ಲ ಎಂದರು. ಮಂಗಳವಾರ ನಡೆಯುವ ಸಿಎಲ್ಪಿ ಸಭೆಯಲ್ಲಿ ಸದನಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಚರ್ಚೆಗೆ ನಮ್ಮ ಪಕ್ಷದ ಶಾಸಕರು, ಸಚಿವರು ಯಾವ ರೀತಿ ಉತ್ತರಿಸಬೇಕು ಎಂಬುದರ ಕುರಿತು ಚರ್ಚೆ ಮಾಡುತ್ತೇವೆ. ಅಲ್ಲಿ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆಯಾಗುವುದಿಲ್ಲ. ಈ ಬಗ್ಗೆ ನಿರೀಕ್ಷೆಯೂ ಇಟ್ಟುಕೊಳ್ಳಬೇಡಿ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ ಎಂಬುದನ್ನು ಸಮಂಜಸವಾದ ಉತ್ತರವನ್ನು ಸದನಕ್ಕೆ ನೀಡುತ್ತೇನೆ. ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂಬುದನ್ನು ಅಂಕಿ-ಅಂಶಗಳು ಹೇಳುತ್ತವೆ. ಯಾವುದೇ ಘಟನೆ ನಡೆದಿಲ್ಲ ಎಂದು ಹೇಳುವುದಿಲ್ಲ. ಅವರು ಆಡಳಿತ ನಡೆಸಿದಾಗ ಹೇಗಿತ್ತು, ಈಗ ಏನಿದೆ ಎಂಬುದನ್ನು ತಿಳಿಸುತ್ತೇನೆ. ಬಿಜೆಪಿ ಆಡಳಿತ ನಡೆಸುತ್ತಿರುವ ಬೇರೆ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಯಾವ ರೀತಿ ಇದೆ. ಬಿಜೆಪಿಯವರ ಅಧಿಕಾರಾವಧಿಯಲ್ಲಿ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹೇಗಿತ್ತು, ಕಳೆದ ಎರಡು ವರ್ಷದಿಂದ ಹೇಗಿದೆ ಎಂಬುದನ್ನು ಸದನದಲ್ಲಿ ಹೇಳುತ್ತೇನೆ ಎಂದರು.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಡೆದ ಘಟನೆಗಳು ಯಾವ ಸರ್ಕಾರ ಅಧಿಕಾರದಲ್ಲಿತ್ತು ಎಂಬುದನ್ನು ಹೇಳುತ್ತೇನೆ. ನಾವು ಆಡಳಿತ ನಡೆಸುವಾಗ ಅಗಿದೆ ಎಂದಾಗ ಸೂಕ್ತವಾದ ಕ್ರಮ ತೆಗೆದುಕೊಂಡಿದ್ದೇವೆ. ಹಳೇ ವೀಡಿಯೋಗಳನ್ನು ಹಾಕಿ, ಈಗ ನಡೆದಿದ್ದು ಹೇಳಿರುವುದಕ್ಕೆ ಪ್ರತಿಯೊಂದು ಘಟನೆಯನ್ನು ತಿಳಿಸುತ್ತೇನೆ ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡನ ಹತ್ಯೆ ಪ್ರಕರಣವನ್ನು ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಯಾವ ಕಾರಣದಿಂದ ಹತ್ಯೆಯಾಗಿದೆ ಎಂಬುದರ ಬಗ್ಗೆ ತನಿಖೆಯ ವರದಿ ಬಂದರೆ ಗೊತ್ತಾಗುತ್ತದೆ. ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು. ಧರ್ಮಸ್ಥಳ ಪ್ರಕರಣದ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡಿದರೆ ಉತ್ತರ ನೀಡುತ್ತೇವೆ. ಎಸ್ಐಟಿಯವರು ಕೋರ್ಟ್ಗೆ ಮತ್ತು ಸರ್ಕಾರಕ್ಕೆ ವರದಿಯನ್ನು ನೀಡಿದ್ದಾರೆ. ಸದನದಲ್ಲಿ ಪ್ರಸ್ತಾಪ ಮಾಡಿದರೆ ಹೇಳುತ್ತೇವೆ. ವಸ್ತುಸ್ಥಿತಿ ಏನಿದೆ ಎಂಬುದನ್ನು ಹೇಳಬೇಕಲ್ಲ. ಇದರಲ್ಲಿ ಮುಚ್ಚುಮರೆ ಏನಿದೆ ಎಂದರು.












Click it and Unblock the Notifications