ಹಿಜಾಬ್ ಪ್ರಕರಣ; ಕರ್ನಾಟಕ ಹೈಕೋರ್ಟ್ನಲ್ಲಿನ ವಿಚಾರಣೆ ವಿವರ
ಬೆಂಗಳೂರು, ಫೆಬ್ರವರಿ 21: ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಕರ್ನಾಟಕ ಹೈಕೋರ್ಟ್ನಲ್ಲಿ ಸೋಮವಾರ ಮುಂದುವರೆದಿದೆ.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಶೇಷ ಪೀಠದಲ್ಲಿ ಒಂದು ವಾರದಿಂದ ವಿಚಾರಣೆ ನಡೆಯುತ್ತಿದೆ. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರು ಸಹ ಪೀಠದಲ್ಲಿದ್ದಾರೆ.
ಶುಕ್ರವಾರ ಕರ್ನಾಟಕ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದರು. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಶೇಷ ಪೀಠದಲ್ಲಿ ಸೋಮವಾರ ಅರ್ಜಿ ವಿಚಾರಣೆ ಮುಂದುವರೆದಿದೆ.

* ಹಿಜಾಬ್ ಕುರಿತು ಸಲ್ಲಿಕೆಯಾಗಿರುವ ಪ್ರಕರಣದ ಅರ್ಜಿಗಳ ವಿಚಾರಣೆಯನ್ನು ಮಂಗಳವಾರ ಮಧ್ಯಾಹ್ನ 2.30ಕ್ಕೆ ಮುಂದೂಡಲಾಗಿದೆ.
* ಹಿಜಾಬ್ ಧರಿಸುವುದು ಧಾರ್ಮಿಕವಾಗಿ ಕಡ್ಡಾಯವಾದ ಅಂಶವಲ್ಲ. ಇದು ಆಯ್ಕೆ ಎಂದು ಎಜಿ ವಾದ ಮಂಡನೆ ಮಾಡುತ್ತಿದ್ದಾರೆ. ಇದಕ್ಕೆ ಸಂವಿಧಾನದ ವಿವಿಧ ಅಂಶಗಳನ್ನು ಉಲ್ಲೇಖಿಸುತ್ತಿದ್ದಾರೆ.
* ವಿವಿಧ ಕೋರ್ಟ್ಗಳ ತೀರ್ಪುಗಳನ್ನು ಉಲ್ಲೇಖಿಸಿ ಎಜಿ ವಾದ ಮಂಡನೆ ಮಾಡುತ್ತಿದ್ದಾರೆ. ಧಾರ್ಮಿಕ ಆಚರಣೆಗಳು, ಧರ್ಮ ಮತ್ತು ಶಿಕ್ಷಣದ ಬಗ್ಗೆ ಸುಧೀರ್ಘವಾಗಿ ವಾದ ಮಂಡಿಸುತ್ತಿದ್ದಾರೆ.
* ಧರ್ಮ ಶಿಕ್ಷಣದಿಂದ ಹೊರಗಿರಬೇಕು. 2017ರ ಸುಪ್ರೀಂಕೋರ್ಟ್ ತೀರ್ಪಿನಲ್ಲಿಯೂ ಇದನ್ನು ಹೇಳಲಾಗಿದೆ. ಶಿಕ್ಷಣ ಸಂಸ್ಥೆಗಳಿಂದ ಧರ್ಮವನ್ನು ಹೊರಗಿಡಬೇಕು ಎಂದು ಡಾ. ಬಿ. ಆರ್. ಅಂಬೇಡ್ಕರ್ ಸಹ ಹೇಳಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.
* ಅನಗತ್ಯ ಮೌಢ್ಯಗಳನ್ನು ಧಾರ್ಮಿಕ ಆಚರಣೆಯ ಅತ್ಯಗತ್ಯ ಅಂಶಗಳು ಎಂದು ಪರಿಗಣಿಸಲಾಗುವುದಿಲ್ಲ ಎಂದು ಎಜಿ ಶಬರಿಮಲೆ ಪ್ರಕರಣದ ತೀರ್ಪನ್ನು ಉಲ್ಲೇಖಿಸಿ ವಾದ ಮಂಡನೆ ಮಾಡಿದರು.
* ವೆಂಕಟರಮಣ ದೇವರು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ ಎಜಿ ಗೌಡ ಸಾರಸ್ವತ ಬ್ರಾಹ್ಮಣರ ಪೂಜೆಯ ಅಧಿಕಾರದ ಬಗ್ಗೆಯೂ ತೀರ್ಪಿದೆ. ಆಹಾರ ಮತ್ತು ಉಡುಪು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖವಿದೆ ಎಂದು ವಾದ ಮಂಡನೆ ಮಾಡಿದರು.
* ಆಹಾರ, ಉಡುಪು ಧಾರ್ಮಿಕ ಆಚರಣೆ ಭಾಗವಲ್ಲ ಎಂದು ಸುಪ್ರೀಂಕೋರ್ಟ್ ಒಂದು ಪ್ರಕರಣದಲ್ಲಿ ತೀರ್ಪು ನೀಡಿದೆ ಎಂದು ಎಜಿ ವಾದ ಮಂಡನೆ ಮಾಡಿದರು.
* ನಮ್ಮ ಸಂವಿಧಾನ ಸರ್ವ ಧರ್ಮ ಸಮಭಾವ ತತ್ವವನ್ನು ಆಧರಿಸಿದೆ. ಸಂವಿಧಾನ ಮಾರ್ಕ್ಸ್ ಸಿದ್ಧಾಂತವನ್ನು ಅನುಸರಿಸಿಲ್ಲ ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಹೇಳಿದರು.
* ಎಜಿ ಪ್ರಭುಲಿಂಗ ನಾವದಗಿ ಡಾ. ಬಿ. ಆರ್. ಅಂಬೇಡ್ಕರ್ ಧರ್ಮವನ್ನು ಶಿಕ್ಷಣ ಸಂಸ್ಥೆಗಳಿಂದ ಹೊರಗಿಡಬೇಕು ಎಂದು ಹೇಳಿದ್ದಾರೆ ಎಂದು ವಾದ ಮಂಡಿಸಿದರು. ವಿವಿಧ ಪ್ರಕರಣಗಳ ನ್ಯಾಯಾಲಯಗಳ ತೀರ್ಪನ್ನು ಉಲ್ಲೇಖಿಸಿದರು.
* ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಧಾರ್ಮಿಕ ಆಚರಣೆ, ಆತ್ಮ ಸಾಕ್ಷಿಯ ವಿಚಾರಣೆ ಆಗುವುದೇ? ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.
* ಆತ್ಮಸಾಕ್ಷಿ, ಆತ್ಮಸಾಕ್ಷಿಯ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ಯವೇ ಬೇರೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.
* ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಸಾಂವಿಧಾನಿಕ ಸಭೆಯಲ್ಲಿ ಆತ್ಮಸಾಕ್ಷಿಯ ಸ್ವಾತಂತ್ರ್ಯದ ಬಗ್ಗೆ ಚರ್ಚೆ ನಡೆದಿತ್ತು. ಡಾ. ಬಿ. ಆರ್. ಅಂಬೇಡ್ಕರ್ ಸಂವಿಧಾನದ 25ನೇ ವಿಧಿಯಲ್ಲಿ ಸೇರಿಸಲು ಸಲಹೆ ನೀಡಿದ್ದರು ಎಂದರು.
* ಅರ್ಜಿಯ ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ನ್ಯಾಯಾಲಯ ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯೇ? ಎಂದು ತೀರ್ಮಾನ ಮಾಡಬೇಕು ಎಂದರು.
* ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು ಕಾಲೇಜು ಅಭಿವೃದ್ಧಿ ಸಮಿತಿ ಸಾಂವಿಧಾನಿಕ ಸಂಸ್ಥೆಯಲ್ಲ. ನ್ಯಾಯಾಲಯ ಈ ಸಮಿತಿಗಳಿಗೆ ನಿರ್ದೇಶನ ನೀಡುವ ಅಗತ್ಯವಿದೆಯೇ? ಎಂದು ಪ್ರಶ್ನಿಸಿದರು.
* ಒಂದು ವೇಳೆ ಕಾಲೇಜು ಅಭಿವೃದ್ಧಿ ಮಂಡಳಿ ಹಿಜಾಬ್ ಧರಿಸಲು ಅವಕಾಶ ನೀಡಿದರೆ ಸರ್ಕಾರದ ಒಪ್ಪಿಗೆ ಇದೆಯೇ? ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದರು.
* ನೀವು ಸಲ್ಲಿಕೆ ಮಾಡಿರುವ ಆಕ್ಷೇಪಣೆಗಳನ್ನು ಒಮ್ಮೆ ಓದಿ ಎಂದು ಮುಖ್ಯ ನ್ಯಾಯಮೂರ್ತಿಗಳು ಅಡ್ವೊಕೇಟ್ ಜನರಲ್ಗೆ ಸೂಚನೆ ನೀಡಿದರು.
* ಹಿಜಾಬ್ ಕುರಿತು ಯಾವುದೇ ನಿರ್ದೇಶನ ನೀಡದಿರುವುದು ಸರ್ಕಾರದ ನಿಲುವು ತಾನೇ?. ಈ ಬಗ್ಗೆ ನನಗೆ ಸ್ಪಷ್ಟನೆ ಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದರು.
* ಹಿಜಾಬ್ ಕುರಿತು ಸರ್ಕಾರ ಯಾವುದೇ ಸೂಚನೆ ನೀಡಿಲ್ಲ. ಸಮವಸ್ತ್ರದ ಬಗ್ಗೆ ಮಾತ್ರ ಸೂಚನೆ ನೀಡಿದೆ. ಸರ್ಕಾರದ ಆದೇಶದ ಬಗ್ಗೆ ನನಗೆ ಸ್ಪಷ್ಟನೆ ಬೇಕಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.












Click it and Unblock the Notifications