ಬರೀ ಟೈಲ್ಸ್ ಹಾಕುತ್ತಿದ್ದಾರೆ ಅಷ್ಟೆ : ಸಚಿವ ಆಂಜನೇಯ
ಬೆಂಗಳೂರು, ಏ. 21 : ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ವಿಧಾನಸೌಧದ ತಮ್ಮ ಕೊಠಡಿ ನವೀಕರಣವಾಗುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ್ದು, ಅದು ಲೋಕೋಪಯೋಗಿ ಇಲಾಖೆ ಕೈಗೊಂಡಿರುವ ಕಾರ್ಯ ಅದಕ್ಕೂ ತಮಗೂ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ.
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರ ವಿಧಾನಸೌಧದ ಮೂರನೇ ಮಹಡಿಯ ಕಚೇರಿ 340 ಮತ್ತು 341ನ್ನು ಶನಿವಾರದಿಂದ ನವೀಕರಣ ಮಾಡಲಾಗುತ್ತಿದೆ. ಹೊಸ ಟೈಲ್ಸ್ ಆಳವಡಿಸುವುದು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಅಲ್ಲಿ ನಡೆಸಲಾಗುತ್ತಿದೆ. ಆದರೆ, ಸಚಿವರು ಇದಕ್ಕೂ ನನಗೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಚುನಾವಣಾ ನೀತಿ ಸಂಹಿತೆ ಇರುವ ಕಾರಣ ತಾವು ವಿಧಾನಸೌಧದ ಕಚೇರಿಗೆ ಹೋಗಿಲ್ಲ. ತಮ್ಮ ಕೊಠಡಿಯಲ್ಲಿ ನವೀಕರಣ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೂ ಸೂಚನೆ ನೀಡಿಲ್ಲ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಾಲ ಕಾಲಕ್ಕೆ ಕಚೇರಿ ನವೀಕರಣಕ್ಕೆ ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಆದ್ದರಿಂದ ಅದಕ್ಕೂ ತಮಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. [ವಿಧಾನಸೌಧದ ಗೋಡೆ ಒಡೆಸಿದ ಆಂಜನೇಯ]
ಜನವರಿ ತಿಂಗಳಿನಲ್ಲಿ ಈ ಕಚೇರಿಗಳ ಮಧ್ಯೆ ಇರುವ ಗೋಡೆಯನ್ನು ಒಡೆಸಿ ಆಂಜನೇಯ ವಿವಾದ ಹುಟ್ಟುಹಾಕಿದ್ದರು. ನಂತರ ಚುನಾವಣಾ ಕಾರ್ಯದಲ್ಲಿ ಅವರು ಬ್ಯುಸಿಯಾಗಿದ್ದರು. ಸದ್ಯ ಮತ್ತೊಮ್ಮೆ ಕೊಠಡಿ ನವೀಕರಣ ಮಾಡಿಸುತ್ತಿರುವ ಆಂಜನೇಯ ಅವರ ಕಾರ್ಯ ವೈಖರಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಪೋಟೋಗಳಿಗೆ ಕೋಕ್ : ನವೀಕರಣದ ಸಂದರ್ಭದಲ್ಲಿ ಕೊಠಡಿಯ ಹಳೆಯ ಸಾಮಾನುಗಳನ್ನು ಸಾಗಿಸುವಾಗ ಮಹಾತ್ಮ ಗಾಂಧಿ ಅವರ ಫೋಟೋವನ್ನು ಅಲ್ಲಿಂದ ತೆರವುಗೊಳಿಸಲಾಗಿದೆ. ಸದ್ಯ ಆಂಜನೇಯ ಅವರ ಕೊಠಡಿಯಲ್ಲಿ ಇಂದಿರಾ, ಸೋನಿಯಾ, ರಾಜೀವ್, ರಾಹುಲ್ ಗಾಂಧಿ ಫೋಟೋಗಳು ಬಂದಿವೆ. ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಆಸ್ಕರ್ ಫರ್ನಾಂಡೀಸ್ ಫೋಟೋಗಳು ರಾರಾಜಿಸುತ್ತಿವೆ.












Click it and Unblock the Notifications