ತಿರುಪತಿಗೆ ಹೋಗುವ ಭಕ್ತರಿಗೆ ಕರ್ನಾಟಕ ಸರ್ಕಾರದಿಂದ ಸಿಹಿಸುದ್ದಿ
ಬೆಂಗಳೂರು, ಜುಲೈ 27; ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುಪತಿಗೆ ದೇಶ, ವಿದೇಶದಿಂದ ಭಕ್ತಾದಿಗಳು ಆಗಮಿಸುತ್ತಾರೆ. ಕರ್ನಾಟಕದಿಂದಲೂ ಲಕ್ಷಾಂತರ ಭಕ್ತರು ದೇವರ ದರ್ಶನಕ್ಕಾಗಿ ತೆರಳುತ್ತಾರೆ. ಇಂತಹ ಭಕ್ತರಿಗೆ ಕರ್ನಾಟಕ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದೆ. ತಿರುಪತಿಯಲ್ಲಿ ವಾಸ್ತವ್ಯ ಹೂಡುವ ರಾಜ್ಯದ ಭಕ್ತರಿಗೆ ಅನುಕೂಲವಾಗುವಂತಹ ವ್ಯವಸ್ಥೆ ಇದಾಗಿದೆ.
ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ತಿರುಪತಿಗೆ ಭೇಟಿ ನೀಡಿದ್ದರು. ಕರ್ನಾಟಕ ಸರ್ಕಾರದಿಂದ ನಿರ್ಮಾಣ ಮಾಡುತ್ತಿರುವ ವಸತಿಗೃಹ ಹಾಗೂ ಕಲ್ಯಾಣ ಮಂಟಪದ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ತಿರುಮಲದಲ್ಲಿ ನಡೆಯುತ್ತಿರುವ ಕರ್ನಾಟಕದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನ ಸಭೆಯನ್ನು ಸಚಿವರು ನಡೆಸಿದರು. ಬಿಜೆಪಿ ಶಾಸಕರ ಹಾಗೂ ಟಿಟಿಡಿ ಸದಸ್ಯರಾದ ಎಸ್. ಆರ್. ವಿಶ್ವನಾಥ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ಸರ್ಕಾರ ತಿರುಪತಿಗೆ ಕರ್ನಾಟಕದಿಂದ ಆಗಮಿಸುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ವಸತಿ ಗೃಹ ಹಾಗೂ ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡುತ್ತಿದೆ. ಈ ಯೋಜನೆ ವೆಚ್ಚ ಸುಮಾರು 220 ಕೋಟಿ ರೂ.ಗಳು. ಇದೇ ವರ್ಷದ ಡಿಸೆಂಬರ್ ಅಂತ್ಯದೊಳಗೆ 384 ವಸತಿ ಗೃಹ ಹಾಗೂ ಕಲ್ಯಾಣ ಮಂಟಪದ ಕಾಮಗಾರಿ ಪೂರ್ಣವಾಗಲಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
300 ವರ್ಷಗಳ ಹಿಂದೆ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರು ಕರ್ನಾಟಕದ ಭಕ್ತರಿಗಾಗಿ ತಿರುಮಲದಲ್ಲಿ 7 ಎಕರೆ ಭೂಮಿಯನ್ನು ಖರೀದಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ದಿನ ಜುಲೈ 26. ಈ ದಿನದ ವಿಶೇಷವಾಗಿ ಶ್ರೀವಾರಿ ಪಲ್ಲೋತ್ಸವ ದೇವರ ವಿಶೇಷ ಸೇವೆ ನಡೆಯುತ್ತಾ ಬಂದಿದೆ. ಶ್ರೀವಾರಿ ಉತ್ಸವ ಮೂರ್ತಿಗೆ ವರ್ಷಕ್ಕೊಮ್ಮೆ ವಜ್ರ ವೈಡೂರ್ಯಗಳ ಅಲಂಕಾರದ ಉತ್ಸವವನ್ನು ಇದೇ ಸಂದರ್ಭದಲ್ಲಿ ನಡೆಸಲಾಗುತ್ತದೆ. ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ಈ ವಿಶೇಷ ಪೂಜೆಯಲ್ಲಿ ಸಚಿವರ ಜೊತೆ ಪಾಲ್ಗೊಂಡರು.
ನೆನಗುದಿಗೆ ಬಿದ್ದಿದ್ದ ಯೋಜನೆ; ತಿರುಪತಿಯಲ್ಲಿ ಕರ್ನಾಟಕ ಪ್ರವಾಸಿ ಸೌಧದ ಆವರಣದಲ್ಲಿ ವಸತಿ ಗೃಹಗಳನ್ನು ನಿರ್ಮಿಸುವ ಯೋಜನೆ ಹಲವು ವರ್ಷಳಿಂದ ನೆನಗುದಿಗೆ ಬಿದ್ದಿತ್ತು. 2017ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಉಂಟಾಗಿದ್ದ ಅಡ್ಡಿಯನ್ನು ನಿವಾರಣೆ ಮಾಡಲಾಗಿತ್ತು. ಬಳಿಕ ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿ ಸಹ ಕಾಮಗಾರಿಗೆ ಒಪ್ಪಿಗೆ ನೀಡಿತ್ತು.
ತಿರುಪತಿಯ ಗಾಂಧಿ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಛತ್ರಕ್ಕೆ ಸೇರಿದ 20 ಸಾವಿರ ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಕರ್ನಾಟಕದ ಭಕ್ತರು ಮದುವೆ ಇತ್ಯಾದಿ ಕಾರ್ಯಕ್ರಮ ನಡೆಸಲು ಅನುಕೂಲವಾಗುವಂತೆ ಕಲ್ಯಾಣ ಮಂಟಪ ಮತ್ತು ವಸತಿ ಗೃಹಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಲಾಯಿತು.
2020ರಲ್ಲಿ ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿರುಪತಿಯ 6.67 ಎಕರೆ ಪ್ರದೇಶದಲ್ಲಿ 4 ಕಟ್ಟಡಗಳನ್ನು ನಿರ್ಮಾಣ ಮಾಡಲು ಶಂಕುಸ್ಥಾಪನೆ ಮಾಡಿದ್ದರು. ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಯಡಿಯೂರಪ್ಪ ಜಂಟಿಯಾಗಿ ಶಂಕುಸ್ಥಾಪನೆ ಮಾಡಿದ್ದರು. ಕಾಮಗಾರಿ ಆರಂಭವಾಗಿತ್ತು.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಸಹ ತಿರುಪತಿಗೆ ಭೇಟಿ ನೀಡಿದ್ದರು. ರಾಜ್ಯದ ವಸತಿ ಗೃಹ ಕಾಮಗಾರಿಯನ್ನು ವೀಕ್ಷಣೆ ಮಾಡಿ, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
4 ಕಟ್ಟಡಗಳು; ಕರ್ನಾಟಕ ಸರ್ಕಾರದ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವತಿಯಿಂದ ಬೆಟ್ಟದ ಮೇಲೆ ಕರ್ನಾಟಕಕ್ಕೆ ಸೇರಿರುವ 6.67 ಎಕರೆ ಪ್ರದೇಶದಲ್ಲಿ ವಸತಿ ಗೃಹ ಸೇರಿದಂತೆ ಒಟ್ಟು ನಾಲ್ಕು ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ಪೂರ್ಣಗೊಂಡರೆ ತಿರುಪತಿಯಲ್ಲಿ ಕರ್ನಾಟಕದ ಭಕ್ತರಿಗೆ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲು ಸಹಾಯಕವಾಗಲಿದೆ.
ಈ ಕಟ್ಟಡಗಳಿಗೆ ಸಂಪಿಗೆ, ಸೇವಂತಿಗೆ, ತಾವರೆ ಮತ್ತು ಮಲ್ಲಿಗೆ ಎಂದು ನಾಮಕರಣ ಮಾಡಲಾಗುತ್ತಿದೆ. ಟಿಟಿಡಿ ಹೊಸ ಕಟ್ಟಡಗಳ ನಿರ್ಮಾಣದ ಹೊಣೆಯನ್ನು ಹೊತ್ತುಕೊಂಡಿದೆ. ಕರ್ನಾಟಕ ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ.
4 ಹೊಸ ಕಟ್ಟಡಗಳ ನಿರ್ಮಾಣದ ಜೊತೆಗೆ ಈಗಾಗಲೇ ಇರುವ ಕನಕಾಂಬರ ಹೆಸರಿನ ಕಟ್ಟಡವನ್ನು ನವೀಕರಣ ಸಹ ಮಾಡಲಾಗುತ್ತಿದೆ. ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡದಿಂದ ದೇವಾಲಯ ನಡೆದುಕೊಂಡು ಹೋಗುವಷ್ಟು ಹತ್ತಿರದಲ್ಲಿದೆ.












Click it and Unblock the Notifications