ಸ್ವಿಫ್ಟ್ ಕಾರಿಗೆ ಮಿನಿ ಲಾರಿ ಡಿಕ್ಕಿ: ಒಂದೇ ಕುಟುಂಬದ 4 ದುರ್ಮರಣ
ಗದಗ,ಮಾರ್ಚ್,16: ಸ್ವಿಫ್ಟ್ ಕಾರಿಗೆ ಮಿನಿ ಲಾರಿ ಡಿಕ್ಕಿಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ದುರ್ಮರಣಕ್ಕೀಡಾದ ಘಟನೆ ಗದಗ ಜಿಲ್ಲೆ ನರಗುಂದ ಬಳಿ ಮಂಗಳವಾರ ನಡೆದಿದೆ.
ನಗರದ ಹಳೇಹುಬ್ಬಳ್ಳಿ ನಿವಾಸಿಗಳಾದ ಶೌಕತ್ ಅಲಿ ನದಾಫ್ (35), ಇವರ ತಂದೆ ಹೈದರಲಿ (75), ತಾಯಿ ಹಸೀನಾ (65) ಮತ್ತು ಸಹೋದರಿ ಮಾಮೂಬಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರು ಹುಬ್ಬಳ್ಳಿಯಿಂದ ಬಾಗಲಕೋಟೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.[ಕರಾಳ ಮಂಗಳವಾರ, ರಸ್ತೆ ಅಪಘಾತಕ್ಕೆ 13 ಬಲಿ]
ಮೃತ ಕುಟುಂಬವು ಗರ್ಭಿಣಿಯಾಗಿದ್ದ ತಮ್ಮ ಸೊಸೆಯನ್ನು ನೋಡಲು ಹುಬ್ಬಳ್ಳಿಯಿಂದ ಬಾಗಲಕೋಟೆಗೆ ತೆರಳುತ್ತಿದ್ದರು. ನರಗುಂದ-ಭೈರನಹಟ್ಟಿ ಮಧ್ಯದ ಬಂಡೆಮ್ಮ ನಗರದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಅಶೋಕ ಲೈಲ್ಯಾಂಡ್ ಬಳಿ ಮಿನಿ ಲಾರಿಯು ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ರಸ್ತೆ ಪಕ್ಕದ ಹೊಲದಲ್ಲಿ ಮೂರು ಪಲ್ಟಿಯಾಗಿ ಬಿದ್ದಿದೆ.
ಈ ದುರ್ಘಟನೆ ಎಸಗಿದ ಮಿನಿಲಾರಿ ಚಾಲಕ ಅಲ್ಲಾಭಕ್ಷ ಯಡೋ (22), ಶಾನು (25) ಇವರಿಬ್ಬರ ಕಾಲುಗಳು ಮುರಿದಿದ್ದು, ಗಾಯಗೊಂಡ ಇವರನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿದೆ.[ಊರಿಗೆ ಊರೇ ಕಣ್ಣು ದಾನ ಮಾಡಲು ಹರೀಶನೇ ಸ್ಫೂರ್ತಿ]
ಬಾರದ 108 ವಾಹನ : ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯ ಸಾರ್ವಜನಿಕರು ಪೊಲೀಸರಿಗೆ ಮತ್ತು 108 ವಾಹನಕ್ಕೆ ಕರೆ ಮಾಡಿದ್ದಾರೆ. ಆದರೆ, ರಸ್ತೆ ಅಪಘಾತ ನಡೆದು ಒಂದು ತಾಸಿನವರೆಗೂ ಯಾರೂ ಬಂದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಯಗೊಂಡು ನೋವಿನಿಂದ ಪರದಾಡುತ್ತಿದ್ದ ವೃದ್ಧೆ ಹಸೀನಾ ಅವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ್ದರೆ ಅವರು ಬದುಕುಳಿಯುತ್ತಿದ್ದರು ಎಂದು ಸಾರ್ವಜನಿಕರು ಅಭಿಪ್ರಾಯಿಸಿದರು.