ಪಡಿತರದಾರರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ
ರಾಜ್ಯ ಸರ್ಕಾರವು ಪಡಿತರದಾರರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲು ಮುಂದಾಗಿದೆ. ರಾಜ್ಯದೆಲ್ಲೆಡೆ ಪಡಿತರದಲ್ಲಿ ಅಕ್ಕಿ ಜೊತೆಗೆ ತೊಗರಿ ಬೇಳೆ ವಿತರಿಸಬೇಕು ಎಂದು ಬೇಡಿಕೆ ಕೇಳಿ ಬಂದಿದ್ದು, ಈ ಬಗ್ಗೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿರುವ ಸಚಿವ ಕೆ.ಎಚ್.ಮುನಿಯಪ್ಪ, ಪಡಿತರದಲ್ಲಿ ತೊಗರಿ ಬೇಳೆ ವಿತರಿಸಬೇಕೆಂದು ಬೇಡಿಕೆ ಬಂದಿರುವ ಹಿನ್ನೆಲೆ ಈ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದು ಹೇಳಿದ್ದಾರೆ.

ಇದು ಇಂದಿನ ಬೇಡಿಕೆಯಲ್ಲ. ತೊಗರಿ ಬೇಳೆ ಬೇಕೆಂದು ಬಹಳ ದಿನಗಳಿಂದಲೂ ಬೇಡಿಕೆ ಇದೆ. ಹಾಗಾಗಿ ಪಡಿತರದಲ್ಲಿ ತೊಗರಿ ಸೇರ್ಪಡೆಯಾದರೆ, ರೈತರು ಹಾಗೂ ಗ್ರಾಹಕರಿಬ್ಬರಿಗೂ ತುಂಬಾ ಅನುಕೂಲವಾಗಲಿದೆ. ಇದರಿಂದ ಹಾಸ್ಟೆಲ್ಗಳಿಗೂ ಬೇಳೆ ಪೂರೈಸಲು ಸಹಾಯಕವಾಗಲಿದೆ ಎಂದಿದ್ದಾರೆ.
ಇದೇ ವೇಳೆ ಮಾತನಾಡಿರುವ ಸಚಿವ ಕೆ.ಎಚ್.ಮುನಿಯಪ್ಪ, ರಾಜ್ಯದಲ್ಲಿ ಯಾವುದೇ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುತ್ತಿಲ್ಲ. ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆಯಲು ಕೂಡ ಯಾವ ನಿರ್ಬಂಧವೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಕ್ಕಿಯೂ ಸಿಗಲಿದೆ: ಇಲ್ಲಿವರೆಗೆ ಅನ್ನಭಾಗ್ಯ ಯೋಜನೆಯಡಿ ಕೇವಲ ಐದು ಕೆ.ಜಿ ಅಕ್ಕಿಯನ್ನು ರಾಜ್ಯ ಸರ್ಕಾರ ವಿತರಿಸುತ್ತಿತ್ತು. ಬಾಕಿ ಐದು ಕೆ.ಜಿ.ಬದಲಿಗೆ ಹಣವನ್ನು ಪಡಿತರದಾರರ ಖಾತೆಗೆ ಜಮೆ ಮಾಡುತ್ತಿತ್ತು. ಈಗ ಹಣದ ಬದಲಿಗೆ ಅಕ್ಕಿಯನ್ನೇ ನೀಡುವುದಾಗಿ ಆಹಾರ ಸಚಿವರು ಹೇಳಿದ್ದಾರೆ.

ಕಳೆದ ವರ್ಷ ಅನ್ನಭಾಗ್ಯ ಯೋಜನೆ ಜಾರಿಯಾದಾಗ ಪಡಿತರದಾರರಿಗೆ ತಲಾ ಹತ್ತು ಕೆ.ಜಿ ಅಕ್ಕಿ ಘೋಷಿಸುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ರಾಜ್ಯದಿಂದಲೇ ಹತ್ತೂ ಕೆ.ಜಿ ಅಕ್ಕಿ ನೀಡಲು ಅಗತ್ಯ ದಾಸ್ತಾನು ಇರಲಿಲ್ಲ. ಹೀಗಾಗಿ ಅಕ್ಕಿ ನೀಡುವಂತೆ ರಾಜ್ಯ ಸರ್ಕಾರವು ಕೇಂದ್ರದ ಮೊರೆ ಹೋಗಿತ್ತು. ಇದಕ್ಕೆ ಹೆಚ್ಚುವರಿ ಹಣ ನೀಡುವುದಾಗಿಯೂ ಕಾಂಗ್ರೆಸ್ ಸರ್ಕಾರ ಹೇಳಿತ್ತು. ಆದರೆ, ಕೇಂದ್ರ ಸರ್ಕಾರವು ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇದಾದ ಬಳಿಕ ಕೇವಲ ಐದು ಕೆ.ಜಿ ಅಕ್ಕಿಯನ್ನಷ್ಟೇ ರಾಜ್ಯ ಸರ್ಕಾರ ನೀಡಲು ನಿರ್ಧರಿಸಿ, ಬಾಕಿ ಅಕ್ಕಿಗೆ ಹಣ ನೀಡುವ ಘೋಷಿಸಿತ್ತು.
ಇನ್ನು ಇತ್ತೀಚೆಗೆ ಹೆಚ್ಚುವರಿ ಅಕ್ಕಿಗಾಗಿ ರಾಜ್ಯದವರೇ ಆದ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಸಚಿವ ಕೆ.ಎಚ್.ಮುನಿಯಪ್ಪ ಭೇಟಿಯಾಗಿದ್ದರು. ಈ ವೇಳೆ ರಾಜ್ಯಕ್ಕೆ ಅನ್ನಭಾಗ್ಯ ಯೋಜನೆಯಡಿ ಹೆಚ್ಚು ಅಕ್ಕಿ ನೀಡಲು ಪೂರೈಕೆ ಮಾಡುವಂತೆ ಮನವಿ ಮಾಡಿದ್ದರು. ಆಗ ಕೇಂದ್ರದಿಂದ ಅಕ್ಕಿ ಪೂರೈಸುವ ಭರವಸೆಯನ್ನು ನೀಡಿದ್ದಾರೆ ಎಂದು ಹೇಳಲಾಗಿತ್ತು.
ಈ ಬಗ್ಗೆಯೂ ಮಾತನಾಡಿದ್ದ ಸಚಿವ ಕೆ.ಎಚ್.ಮುನಿಯಪ್ಪ, ʼರಾಜ್ಯಕ್ಕೆ ಅಗತ್ಯವಿರುವ ಅಕ್ಕಿ ಪೂರೈಸುವ ಭರವಸೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿದ್ದಾರೆ. ಈ ಸಂಬಂಧ ಮುಂದಿನ ಹಂತದಲ್ಲಿ ಕೇಂದ್ರಕ್ಕೆ ಪ್ರಸ್ತಾವನೆಯನ್ನೂ ಕಳುಹಿಸಲಾಗುವುದು. ಪ್ರತಿ ತಿಂಗಳಿಗೆ 20 ಸಾವಿರ ಮೆಟ್ರಿಕ್ ಟನ್ ಅಕ್ಕಿಯ ಅಗತ್ಯವಿದೆ. ರಾಜ್ಯದ ಜನರು ಹಣದ ಬದಲು ಬೇಳೆ ಹಾಗೂ ಅಕ್ಕಿಗೆ ಮನವಿ ಮಾಡಿದ್ದಾರೆ. ಇವುಗಳನ್ನು ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದ್ದರು.












Click it and Unblock the Notifications