ನೋಟು ಬದಲಾವಣೆ: ಸ್ವಾಮೀಜೀಗೇ ಮುಂಡಾಯಿಸಿದ ಖದೀಮ
ಹರಿದ್ವಾರದ ಜಂಗಮವಾಡಿ ಮಠದಲ್ಲಿ ದೀಕ್ಷೆ ಪಡೆದಿರುವ ದತ್ತಾತ್ರೇಯ ಸ್ವಾಮೀಜಿಗೆ ಒಂದು ಕೋಟಿ ಮೊತ್ತದ ಹಳೇ ನೋಟನ್ನು ಬದಲಾಯಿಸಿಕೊಡುವುದಾಗಿ ಹೇಳಿ ಬ್ಯಾಡಗಿಯ ವ್ಯಕ್ತಿಯೊಬ್ಬ ಮೋಸ ಮಾಡಿ ಪರಾರಿಯಾಗಿದ್ದಾನೆ.
ಹಾವೇರಿ, ಡಿ 4: ಹಳೆಯ ಐನೂರು ಮತ್ತು ಸಾವಿರ ರೂಪಾಯಿ ನೋಟನ್ನು ಹೊಸ ನೋಟಿಗೆ ಬದಲಾಯಿಸಿ ಕೊಡುವುದಾಗಿ ಸ್ವಾಮೀಜಿಯೊಬ್ಬರಿಗೆ ನಂಬಿಸಿ, ಪೂರ್ತಿ ದುಡ್ಡು ಕೊಡದೇ ಆರೋಪಿ ಪರಾರಿಯಾಗಿರುವ ಘಟನೆ ಬ್ಯಾಡಗಿ ಪಟ್ಟಣದಿಂದ ವರದಿಯಾಗಿದೆ.
ವ್ಯಕ್ತಿಯಿಂದ ಮೋಸಕ್ಕೊಳಗಾದ ಹರಿದ್ವಾರದ ಜಂಗಮವಾಡಿ ಮಠದಲ್ಲಿ ದೀಕ್ಷೆ ಪಡೆದಿರುವ ದತ್ತಾತ್ರೇಯ ಸ್ವಾಮೀಜಿ ತಮಗೆ ಮೋಸ ಮಾಡಿದ ವ್ಯಕ್ತಿಯ ಮನೆಯ ಮುಂದೆ ಧರಣಿ ಕೂತಿದ್ದಾರೆ. (ಬೆಂಗಳೂರು, ಮಡಿಕೇರಿ, ತುಮಕೂರಿನಲ್ಲಿ 74.50 ಲಕ್ಷ ವಶಕ್ಕೆ)
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬ್ಯಾಡಗಿ ಕ್ಷೇತ್ರದಲ್ಲಿ ರಾಮುಲು ಪಕ್ಷದಿಂದ ಸ್ಪರ್ಧಿಸಿದ್ದ ದಾದಾಪೀರ್ ಭೂಸೆ ವಿರುದ್ಧ ಈ ಆರೋಪ ಕೇಳಿಬಂದಿದೆ. ಈತ ನಗರದಲ್ಲಿ ಮೆಣಸಿನಕಾಯಿ ವಹಿವಾಟು ನಡೆಸುತ್ತಿದ್ದಾನೆ.
ದತ್ತಾತ್ರೇಯ ಸ್ವಾಮೀಜಿ ಕೆಲವು ದಿನಗಳ ಹಿಂದೆ ದಾದಾಪೀರ ಭೂಸೆಗೆ ಕರೆನ್ಸಿ ಬದಲಾಯಿಸಿಕೊಡಲು ಒಂದು ಕೋಟಿ ರೂಪಾಯಿಯ ಹಳೆಯ ನೋಟನ್ನು ನೀಡಿದ್ದರು.
ಆದರೆ ಭೂಸೆ ಸ್ವಾಮೀಜಿಯವರ ಆಪ್ತರ ಅಕೌಂಟಿಗೆ 15 ಲಕ್ಷ ರೂಪಾಯಿ ಹಣವನ್ನು ಜಮಾಮಾಡಿ, ಉಳಿದ ಹಣವನ್ನು ನೀಡದೇ ಊರಿಂದ ಕಾಲ್ಕಿತ್ತಿದ್ದಾನೆ ಎಂದು ವರದಿಯಾಗಿದೆ.
ಆಶ್ರಮ ಮತ್ತು ಗೋಶಾಲೆ ನಿರ್ಮಾಣ ಮಾಡುವ ಉದ್ದೇಶದಿಂದ ಹಣವನ್ನು ಕೂಡಿಟ್ಟಿದ್ದೆ. ಒಂದು ವಾರದೊಳಗೆ ಹಣ ಹಿಂದಿರುಗಿಸುವುದಾಗಿ, ದುಡ್ಡು ತೆಗೆದುಕೊಂಡು ಹೋಗಿದ್ದ. ಆದರೆ ಈಗ ನಾಪತ್ತೆಯಾಗಿದ್ದಾನೆ ಎಂದು ಸ್ವಾಮೀಜಿ ಅಳಲು ತೋಡಿಕೊಂಡಿದ್ದಾರೆ.
ಧರಣಿ ಕೂತ ಸ್ವಾಮೀಜಿಗೆ ಸ್ಥಳೀಯ ಸಂಘಟನೆಗಳು ಬೆಂಬಲ ಸೂಚಿಸಿವೆಯಾದರೂ, ಅಷ್ಟೇನೂ ಗುರುತು ಪರಿಚಯವಿಲ್ಲದ ವ್ಯಕ್ತಿಗೆ ಸ್ವಾಮೀಜಿ ಅಷ್ಟು ದೊಡ್ಡ ಮೊತ್ತವನ್ನು ನೀಡಿದ್ಯಾಕೆ ಎನ್ನುವುದು ಹಲವರ ಅನುಮಾನಕ್ಕೆ ಕಾರಣವಾಗಿದೆ.