ನೂರು ದಿನ ಕಳೆದರೂ ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕನಿಲ್ಲ: ಐತಿಹಾಸಿಕ ದಾಖಲೆ ಸೃಷ್ಟಿಸಿದ ಬಿಜೆಪಿ
ಬೆಂಗಳೂರು, ಆಗಸ್ಟ್ 23: ಕರ್ನಾಟಕದ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಂದು ನೂರು ದಿನ ಉರುಳಿವೆ. ಆದರೂ, ಬಿಜೆಪಿಯು ವಿರೋಧ ಪಕ್ಷದ ನಾಯಕನನ್ನು (ಎಲ್ಒಪಿ) ಆಯ್ಕೆ ಮಾಡಿಲ್ಲ. ವಿಧಾನಸಭೆ ಮತ್ತು ವಿಧಾನ ಪರಿಷತ್ನಲ್ಲಿ ಇಷ್ಟು ದಿನಗಳ ಕಾಲ ವಿಪಕ್ಷ ನಾಯಕನಿಲ್ಲದೇ ಹೋಗಿರುವುದು ಐತಿಹಾಸಿಕ ದಾಖಲೆಯಾಗಿದೆ. ಈ ದಾಖಲೆಯನ್ನು ನಿರ್ಮಿಸಿದ ಏಕೈಕ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ.
ಪ್ರತಿಪಕ್ಷದ ನಾಯಕನಿಗೆ ಅನೇಕ ಸವಲತ್ತುಗಳಿವೆ. ವಿಶೇಷವಾಗಿ ಅಧಿವೇಶನ ನಡೆಯುತ್ತಿರುವಾಗ ಎರಡೂ ಸದನಗಳಲ್ಲಿ ನಾಯಕರನ್ನು ನೇಮಿಸದಿದ್ದರೆ ಪಕ್ಷವು ಈ ಸವಲತ್ತುಗಳನ್ನು ಕಳೆದುಕೊಳ್ಳುತ್ತದೆ ಎಂದು ಬಿಜೆಪಿಯ ಮಾಜಿ ಸಚಿವರೊಬ್ಬರು ಹೇಳಿದ್ದಾರೆ.

ಬಿಜೆಪಿಯಲ್ಲಿರುವ ಬಣಗಳ ನಡುವಿನ ವಿಶ್ವಾಸದ ಕೊರತೆಯಿಂದಾಗಿ ಪ್ರತಿಪಕ್ಷ ನಾಯಕರ ನೇಮಕ ನಡೆದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ರಾಜ್ಯ ಬಿಜೆಪಿಯಲ್ಲಿ ಬಿಎಲ್ ಸಂತೋಷ್ ಮತ್ತು ಬಿಎಸ್ ಯಡಿಯೂರಪ್ಪ ಅವರ ಬಣಗಳಿವೆ.
ಸೋಮವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಎರಡೂ ಗುಂಪುಗಳನ್ನು ಒಗ್ಗಟ್ಟನ್ನು ಪ್ರದರ್ಶಿಸಬಹುದು. ಪಕ್ಷವನ್ನು ರಾಜ್ಯದಲ್ಲಿ ಪುಟಿದೇಳುವಂತೆ ಮಾಡುವ ನಿರೀಕ್ಷೆಯ ವಾತಾವರಣವಿತ್ತು. ಆದರೆ, ಯಾವುದೂ ನಡೆದಿಲ್ಲವೆಂದು ಮೂಲಗಳು ತಿಳಿಸಿವೆ.
ವಿರೋಧ ಪಕ್ಷದ ನಾಯಕರ ನೇಮಕದ ನಿರ್ಧಾರ ಕೇಂದ್ರ ನಾಯಕತ್ವದ ಮೇಲೆ ನಿಂತಿದೆ. ಇದುವರೆಗೂ ವಿರೋಧ ಪಕ್ಷದ ನಾಯಕನ ಆಯ್ಕೆಯಾಗದಿರುವುದು ಪಕ್ಷದ ಸ್ಥಳೀಯ ಮುಖಂಡರಲ್ಲಿ ಅಚ್ಚರಿ ಮೂಡಿಸಿದೆ.

ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮತ್ತು ಮುಖ್ಯ ಸಚೇತಕ ಎಂಎಲ್ಸಿ ಸಲೀಂ ಅಹ್ಮದ್, 'ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು ಗುಂಪಿನಲ್ಲಿ ಗುರುತಿಸಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ವಿರೋಧ ಪಕ್ಷದ ನಾಯಕರಾಗಿ, ಸಿಟಿ ರವಿ ರಾಜ್ಯಾಧ್ಯಕ್ಷರಾಗಿ ನೇಮಕವಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಇದಕ್ಕೆ ಬಿಜೆಪಿ ಹೈಕಮಾಂಡ್ ಒಪ್ಪಿಗೆ ಸೂಚಿಸಿಲ್ಲ. ಪ್ರಮುಖ ವಿರೋಧ ಪಕ್ಷವು ಎರಡೂ ಸದನಗಳಲ್ಲಿ ವಿರೋಧ ಪಕ್ಷದ ನಾಯಕನನ್ನು ನೇಮಿಸದಿರುವುದು ಅತ್ಯಂತ ದುರದೃಷ್ಟಕರ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದು ಬಿಜೆಪಿಯ ಆಂತರಿಕ ವಿಚಾರವಾಗಿದ್ದರೂ ವಿಧಾನಸಭೆ ಅಥವಾ ಪರಿಷತ್ತಿನಲ್ಲಿ ಪ್ರತಿಪಕ್ಷ ನಾಯಕರನ್ನು ನೇಮಿಸಲು ಸಾಧ್ಯವಾಗದಿರುವುದು ಆತಂಕಕಾರಿ ವಿಚಾರ ಎಂದು ಅವರು ಹೇಳಿದ್ದಾರೆ.

ಇದು ಪಕ್ಷದ ಆಂತರಿಕ ವ್ಯವಹಾರಗಳ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಭಾರತೀಯ ಶಾಸಕಾಂಗ ವ್ಯವಸ್ಥೆಯು ಬ್ರಿಟಿಷ್ ಸಂಸದೀಯ ವ್ಯವಸ್ಥೆಯ ಮಾದರಿಯಲ್ಲಿದೆ. ಅಲ್ಲಿ ವಿರೋಧ ಪಕ್ಷದ ನಾಯಕನನ್ನು ಪ್ರಧಾನಿಯ ನೆರಳು ಎಂದು ಕರೆಯಲಾಗುತ್ತದೆ. ಖಾಲಿ ಸ್ಥಾನವು ಪಕ್ಷದ ನಾಯಕತ್ವದಲ್ಲಿನ ನಿರ್ವಾತವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications